ಡಿವಿಜಿ ಸುದ್ದಿ, ಮೈಸೂರು: ಉಪ ಚುನಾವಣೆ ಫಲಿತಾಂಶ ಕಾದು ನೋಡಿ ಜೆಡಿಎಸ್ ಪಕ್ಷ ನಡೆ ನಿರ್ಧಾರವಾಗಲಿದೆ ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕುತೂಹಲ ಮೂಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ 8 ಸ್ಥಾನಗಳನ್ನು ಬಿಜೆಪಿ ಗೆಲ್ಲದಿದ್ದರೆ ಸರ್ಕಾರ ಪತನವಾಗಲಿದೆ ಎಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಹೇಳಿದ್ದಾರೆ. ಹೀಗಾಗಿ ಉಪ ಚುನಾವಣೆ ವರೆಗೆ ಕಾದು ನೋಡಿ, ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಅವರು ಹೇಳಿದರು.
ಮಾಜಿ ಸಚಿವ ಜಿ.ಟಿ.ದೇವೇಗೌಡರನ್ನು ಪ್ರಚಾರ ಮಾಡಿ ಎಂದು ಕರೆಯುವುದಿಲ್ಲ. ಅವರೇ ನಮ್ಮ ಪಕ್ಷದ ಅಭ್ಯರ್ಥಿ ನಿಂತಿದ್ದಾರೆ ಎಂದು ಅಭ್ಯರ್ಥಿಗೆ ಬೆಂಬಲಕೊಟ್ಟರೆ ಸ್ವಾಗತ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿ.ಟಿ.ದೇವೇಗೌಡರ ಬೆಂಬಲ ಪಡೆಯುವ ಕುರಿತಂತೆ ಪ್ರತಿಕ್ರಿಯಿಸಿ, ಚುನಾವಣೆ ಎಂದ ಮೇಲೆ ತಂತ್ರ , ಪ್ರತಿ ತಂತ್ರ ಮಾಡುವುದು ಸಾಮಾನ್ಯ. ಅದೇ ರೀತಿ ಸಿದ್ದರಾಮಯ್ಯ ಕೂಡ ಜಿಡಿಟಿ ಬೆಂಬಲ ಕೇಳಿರಬಹುದು ಎಂದ್ರು.
ಹಿರೇಕೆರೂರಿನಲ್ಲಿ ನಮ್ಮ ಅಭ್ಯರ್ಥಿಯಾಗಿದ್ದ ಸ್ವಾಮೀಜಿಯವರನ್ನು ಚುನಾವಣಾ ಕಣದಿಂದ ಹಿಂದೆ ಸರಿಸಲು ಯಡಿಯೂರಪ್ಪ ಅವರ ಪುತ್ರ ಸಭೆ ನಡೆಸಿದ್ದಾರೆ. ಬಿಜೆಪಿ ಒತ್ತಡ ತಂತ್ರ ಅನುಸರಿಸಿ ಚುನಾವಣೆ ಗೆಲ್ಲಲು ಹೊರಟಿದೆ. ಸ್ವಾಮೀಜಿ ಅವರಿಗೆ ನಾನು ಕರೆದು ಟಿಕೆಟ್ ಕೊಟ್ಟಿಲ್ಲ. ಅವರೇ ನಿಮ್ಮ ಪಕ್ಷದಿಂದ ಟಿಕಟ್ ಕೊಡಿ ಎಂದು ಕೇಳಿದ್ದರು ಎಂದು ತಿಳಿಸಿದರು.



