ಕೋಲ್ಕತ್ತಾ: ಶಿವಸೇನಾ, ಅಕಾಲಿದಳ ನಂತರ ಬಿಜೆಪಿ ಪಕ್ಷ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದಲ್ಲಿದ್ದ ಗೋರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ಆಡಳಿತಾ ರೂಢ ತೃಣಮೂಲ ಕಾಂಗ್ರೆಸ್(ಟಿಎಂಸಿ) ಜೊತೆಗೆ ಕೈಜೋಡಿಸುವ ಮೂಲಕ ಮೈತ್ರಿಕೂಟ ತೊರೆದಿದೆ.
2017 ರಲ್ಲಿ ಪ್ರತ್ಯೇಕ ಗೋರ್ಖಾಲ್ಯಾಂಡ್ಗಾಗಿ ನಡೆದಿದ್ದ ಹೋರಾಟ ಹಿಂಸಾಚಾರಕ್ಕೆ ತಿರುಗಿದ ನಂತರ ಭೂಗತರಾಗಿದ್ದ ಜಿಜೆಎಂನ ನಾಯಕ ಬಿಮಲ್ ಗುರುಂಗ್ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಅಲ್ಲದೆ, ಜಿಜೆಎಂ ಎನ್ಡಿಎ ಮೈತ್ರಿಕೂಟ ತೊರೆಯುತ್ತಿರುವುದಾಗಿ ಘೋಷಿಸಿದರು.

ಡಾರ್ಜಿಲಿಂಗ್ಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡುವಲ್ಲಿ ಬಿಜೆಪಿ ವಿಫಲವಾಗಿದೆ. ನಾವು 2009ರಿಂದ ಎನ್ಡಿಎಯ ಭಾಗವಾಗಿದ್ದೇವೆ. ಆದರೆ ಬಿಜೆಪಿಯು ಡಾರ್ಜಿಲಿಂಗ್ಗೆ ಶಾಶ್ವತ ರಾಜಕೀಯ ಪರಿಹಾರ ನೀಡುವ ಭರವಸೆಯನ್ನು ಉಳಿಸಿಕೊಂಡಿಲ್ಲ. 11 ಗೋರ್ಖಾ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬ ನಮ್ಮ ಬೇಡಿಕೆಯನ್ನು ಬಿಜೆಪಿ ಈಡೇರಿಲ್ಲ. ನಾವು ಮೋಸ ಹೋಗಿದ್ದೇವೆ. ಹೀಗಾಗಿಯೇ ನಾವು ಎನ್ಡಿಎಯಿಂದ ಹೊರಬಂದಿದ್ದೇವೆ ಬಿಮಲ್ ಹೇಳಿದರು.
ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ನೇತೃತ್ವದ ಟಿಎಂಸಿಯನ್ನು ಬೆಂಬಲಿಸುತ್ತೇವೆ. ಬಿಜೆಪಿಗೆ ಪಾಠ ಕಲಿಸುತ್ತೇವೆ. ಡಾರ್ಜಿಲಿಂಗ್ನ 11 ಸಮುದಾಯಗಳನ್ನು ಮಮತಾ ಅವರು ಪರಿಶಿಷ್ಠ ಪಂಗಡಕ್ಕೆ ಸೇರಿಸಿದ್ದಾರೆ. ಆದರೆ, ಬಿಜೆಪಿ ಮಾತ್ರ ಇನ್ನೂ ಅದನ್ನು ಮಾಡುವ ಆಶ್ವಾಸನೆಯಲ್ಲೇ ಇದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.



