ನವದೆಹಲಿ: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಣ ಭಿನ್ನಮತ ಹೆಚ್ಚಾಗಿದೆ. ಈ ಇಬ್ಬರ ನಾಯಕರ ಭಿನ್ನಮತದ ನಡುವೆ ಅವಕಾಶಕ್ಕಾಗಿ ಬಿಜೆಪಿ ಯತ್ನಿಸುತ್ತಿದೆ.
ಶಾಸಕರನ್ನು ಖರೀದಿಸುವ ಆರೋಪದ ತನಿಖೆಗೆ ಸಂಬಂಧಿಸಿ ಪೈಲಟ್ಗೆ ಪೊಲೀಸರು ನೀಡಿದ ನೋಟಿಸ್ ನೀಡಿದ್ದಾರೆ. ಇದರಿಂದ ಕಾಂಗ್ರೆಸ್ ನಲ್ಲಿ ಭಿನ್ನಮತ ಇನ್ನಷ್ಟು ತೀವ್ರಗೊಂಡಿದೆ. ಭಿನ್ನಮತ ಶಮನಕ್ಕೆ ಕಾಂಗ್ರೆಸ್ ಹೈಕಮಾಂಡ್ ಹರಸಾಹಸ ಪಡುತ್ತಿದೆ. ಇನ್ನೊಂದೆಡೆ ತಮ್ಮ 16 ಶಾಸಕರೊಂದಿಗೆ ಪೈಲಟ್ ಅವರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು ಪಕ್ಷದ ನಾಯಕರನ್ನು ಭೇಟಿ ಮಾಡಲು ಬಯಸಿದ್ದಾರೆ. ಕಾಂಗ್ರೆಸ್ ಪಕ್ಷದ ಖಜಾಂಚಿ ಅಹ್ಮದ್ ಪಟೇಲ್ ಅವರನ್ನು ಪೈಲಟ್ ಅವರು ಶನಿವಾರ ರಾತ್ರಿ ಭೇಟಿಯಾಗಿದ್ದರು. ಆ ಬಳಿಕ ಅವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಹಾಗಾಗಿ, ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಇದೇ ವೇಳೆ, ಗೆಹ್ಲೋಟ್ ಅವರು ಜೈಪುರದಲ್ಲಿ ಶಾಸಕರ ಸಭೆ ಕರೆದಿದ್ದು, ಕತೂಹಲಕ್ಕೆ ಕಾರಣವಾಗಿದೆ.
ಬಿಜೆಪಿ ಮುಖಂಡ ಶಾಸಕರ ಖರೀದಿಗೆ ಸಂಚು ರೂಪಿಸಿದ್ದರ ಬಗ್ಗೆ ವಿಚಾರಣೆ ಮಾಡಲು ನೇಮಿಸಿದ್ದ ವಿಶೇಷ ಕಾರ್ಯಪಡೆ ಪೊಲೀಸರು, ಇಬ್ಬರ ವಿಚಾರಣೆ ಆರಂಭಿಸಿದ್ದರು. ಘಟನೆ ಸಂಬಂಧ ಹೇಳಿಕೆ ದಾಖಲಿಸುವಂತೆ ಸೂಚಿಸಿ ಗೆಹ್ಲೋಟ್ ಹಾಗೂ ಪೈಲಟ್ಗೆ ಎಸ್ಒಜಿ ನೋಟಿಸ್ ನೀಡಿತ್ತು. ಇದರಿಂದ ಕೋಪಗೊಂಡ ಪೈಲಟ್, ರಾಜ್ಯದಲ್ಲಾಗುತ್ತಿರುವ ಬೆಳವಣಿಗೆಗಳನ್ನು ಕಾಂಗ್ರೆಸ್ ಹೈಕಮಾಂಡ್ಗೆ ವಿವರಿಸಲು ದೆಹಲಿಗೆ ಬಂದಿದ್ದರು.
200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಕಾಂಗ್ರೆಸ್ಗೆ 124 ಶಾಸಕರ ಬೆಂಬಲವಿದೆ. ಕಾಂಗ್ರೆಸ್ನ 107 ಶಾಸಕರು, 10 ಮಂದಿ ಪಕ್ಷೇತರರು, ಬಿಟಿಪಿ ಹಾಗೂ ಸಿಪಿಎಂನ ತಲಾ ಇಬ್ಬರು ಹಾಗೂ ಆರ್ಎಲ್ಡಿಯ ಒಬ್ಬ ಶಾಸಕ ಗೆಹ್ಲೋಟ್ ಸರ್ಕಾರವನ್ನು ಬೆಂಬಲಿಸಿದ್ದಾರೆ.

ಸರ್ಕಾರ ಉರುಳಿಸುವ ಯತ್ನ ನಡೆಯುತ್ತಿದೆ ಎಂಬ ಆರೋಪವನ್ನು ಬಿಜೆಪಿ ಅಲ್ಲಗಳೆದಿದೆ. ಕಾಂಗ್ರೆಸ್ ಸರ್ಕಾರವು ಆಂತರಿಕ ಕಚ್ಚಾಟದಿಂದ ಎರಡು ಬಣಗಳಾಗಿ ಒಡೆದಿದೆ. ಸರ್ಕಾರವು ಸ್ವತಃ ತೊಂದರೆಯಲ್ಲಿ ಸಿಲುಕಿಕೊಂಡಿದೆ. ಸರ್ಕಾರವನ್ನು ಮುನ್ನಡೆಸುವುದು ಹಾಗೂ ರಕ್ಷಿಸಿಕೊಳ್ಳುವುದು ಮುಖ್ಯಮಂತ್ರಿಯ ಜವಾಬ್ದಾರಿ’ ಎಂದು ರಾಜಸ್ಥಾನ ವಿಧಾನಸಭೆಯ ಬಿಜೆಪಿ ಉಪನಾಯಕ ರಾಜೇಂದ್ರ ರಾಥೋಡ್ ತಿಳಿಸಿದ್ದಾರೆ.
ಸಚಿನ್ ಪೈಲಟ್ ಅವರನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಡೆಗಣಿಸುತ್ತಿರುವುದು ಬೇಸರ ಮೂಡಿಸಿದೆ. ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ಕಾಂಗ್ರೆಸ್ನಲ್ಲಿ ಬೆಲೆ ಇಲ್ಲ ಎಂಬುದನ್ನು ಇದು ತೋರಿಸುತ್ತದೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಕಾಂಗ್ರೆಸ್ನಲ್ಲಿದ್ದ ಸಿಂಧಿಯಾ ಅವರು ಮಾರ್ಚ್ನಲ್ಲಿ ಬಿಜೆಪಿ ಸೇರಿದ್ದಾರೆ. ಸಿಂಧಿಯಾ ಮತ್ತು ಅವರ ಬೆಂಬಲಿಗ ಶಾಸಕರು ಬಿಜೆಪಿ ಸೇರಿದ್ದರಿಂದ ಮಧ್ಯಪ್ರದೇಶದ ಕಾಂಗ್ರೆಸ್ ನೇತೃತ್ವದ ಸರ್ಕಾರವು ಪತನವಾಗಿದೆ



