ಡಿವಿಜಿ ಸುದ್ದಿ, ದಾವಣಗೆರೆ: ಮಹಾನಗರ ಪಾಲಿಕೆಯ 45 ನೇ ವಾರ್ಡ್ ನಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಿಲ್ಲವೆಂದು ಕರೂರು ಗ್ರಾಮಸ್ಥರು ಮತದಾನ ಬಹಿಷ್ಕರಿಸುವುದಾಗಿ ಘೋಷಣೆ ಕೂಗಿದರು. ಕೊನೆಗೆ ಜಿಲ್ಲಾಧಿಕಾರಿಯ ಸ್ಥಳಕ್ಕೆ ಭೇಟಿ ನೀಡಿ ಮತದಾನ ಬಹಿಷ್ಕರಿಸದಂತೆ ಮನವೊಲಿಸಿದ ನಂತರ ಕರೂರು ಗ್ರಾಮಸ್ಥರು ಮತದಾನ ಬಹಿಷ್ಕಾರ ಹಿಂಪಡೆದರು.
ಬೆಳಗ್ಗೆಯಿಂದಲೇ ಪ್ರತಿಭಟನೆ ಆರಂಭವಾಗಿತ್ತು. ಮಧ್ಯಾಹ್ನದ ಹೊತ್ತಿಗೆ ಪ್ರತಿಭಟನೆ ತೀವ್ರತೆ ಪಡೆಯುತ್ತಿದ್ದಂತೆ ಮಹಾ ನಗರ ಪಾಲಿಕೆ ಆಯುಕ್ತ ಮಂಜುನಾಥ್ ಸ್ಥಳಕ್ಕೆ ಆಗಮಿಸಿ ಮನವೊಲಿಸುವ ಪ್ರಯತ್ನ ಮಾಡಿದರು. ಅವರ ಮನವೊಲಿಕೆಗೂ ಗ್ರಾಮಸ್ಥರು ಪ್ರತಿಭಟನೆ ಬಿಡಲಿಲ್ಲ. ಪ್ರಭಾರ ಜಿಲ್ಲಾಧಿಕಾರಿ ಬಂದು ಮನವೊಲಿಕೆ ಪ್ರಯತ್ನಕ್ಕೂ ಪ್ರತಿಭಟನಾ ನಿರತರು ಸೊಪ್ಪು ಹಾಕಲಿಲ್ಲ. ಕೊನೆಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಏನೇ ಇದ್ದರೂ, ಚುನಾವಣೆ ನಂತರ ನಾನೇ ಖುದ್ದಾಗಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ನಂತರ ಪ್ರತಿಭಟನಕಾರರು ಪ್ರತಿಭಟನೆ ವಾಪಸ್ಸು ಪಡೆದರು.
ನವೆಂಬರ್ 15 ನಂತರ ಕರೂರಿಗೆ ಬರುವುದಾಗಿ ಡಿಸಿ ಭರವಸೆ
ಕರೂರಿನಲ್ಲಿನ ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವುದು ನನ್ನ ಗಮನಕ್ಕೆ ಬಂದ ತಕ್ಷಣ ಇಲ್ಲಿಗೆ ಬಂದಿದ್ದೇನೆ. ನಿಮ್ಮ ವಾರ್ಡ್ ನಲ್ಲಿ ಏನೇ ಸಮಸ್ಯೆ ಇದ್ದರೂ, ಚುನಾವಣೆ ನಂತರ ಎಲ್ಲಾ ಅಧಿಕಾರಿಗಳೊಂದಿಗೆ ನಾನೇ ಖುದ್ದಾಗಿ ಬರುತ್ತೇನೆ. ಆಗ ಎಲ್ಲಾ ಸಮಸ್ಯೆಗೂ ಅಧಿಕಾರಿಗಳ ಜೊತೆ ಪರಿಹಾರ ಕಂಡುಕೊಳ್ಳೋಣ ಎಂದು ಡಿಸಿ ಪ್ರತಿಭಟನಕಾರರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಪ್ರತಿಭಟನಕಾರರು ಮತದಾನ ಬಹಿಷ್ಕಾರ ನಿರ್ಧರ ವಾಪಸ್ಸು ಪಡೆದರು.
ಸ್ಮಾರ್ಟ್ ಸಿಟಿ ದಾವಣಗೆರೆಯಿಂದ ಕೇವಲ 2 ಕಿ.ಮೀ ದೂರದಲ್ಲಿರುವ ಕರೂರು ಗ್ರಾಮಕ್ಕೆ ಅಗತ್ಯ ಮೂಲ ಸೌಕರ್ಯ ನಿರ್ಮಿಸುವಲ್ಲಿ ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿದ್ದಾರೆ. ಕುಡಿಯುವ ನೀರು, ಬೀದಿ ದೀಪ, ವ್ಯವಸ್ಥಿತ ರಸ್ತೆ, ಶಾಲೆ, ಸ್ಮಶಾನ, ಬಸ್ ಸೌಕರ್ಯವಿಲ್ಲ ಎಂದು ಗ್ಗ್ರಾಮಸ್ಥರು ಡಿಸಿ ಎದುರು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.
ಪ್ರತಿಭಟನೆಯಲ್ಲಿ ಕೆ.ಜಿ. ಶಂಭುನಾಥ್, ಹನುಮಂತಪ್ಪ ಕರೂರು, ಸೈಯದ್ ಖಲಿ, ಸಿಕಂದರ್, ಮುಜೀಜ್, ಕೆ.ಪಿ. ಫಕ್ಕೀರಪ್ಪ, ಎ.ಕೆ. ಬಸವರಾಜ್, ಸಚಿನ್, ಹನುಮಂತಪ್ಪ ಯಾದವ್, ಮಂಜುನಾಥ್ ಇಟ್ಟಿಗುಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



