ಡಿವಿಜಿಸುದ್ದಿ.ಕಾಂ, ಜಗಳೂರು: ಕೇಂದ್ರ ಸರಕಾರ ಈರುಳ್ಳಿ ರಪ್ತು ನಿಷೇಧ ಮಾಡಿರುವುದನ್ನು ಖಂಡಿಸಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ತಾಲೂಕು ಕಛೇರಿಯ ಮುಂಭಾಗ ರೈತರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು. ಕೇಂದ್ರ ಸರಕಾರ ಈರುಳ್ಳಿ ರಪ್ತು ನಿಷೇಧಕ್ಕೆ ಇತ್ತೀಚೆಗೆ ಸೆ.29 ರಂದು ಆದೇಶ ಮಾಡಿದ್ದರಿಂದ ರೈತರು ಅಲ್ಪ ಸ್ವಲ್ಪ ಮಳೆಗೆ ಬೆಳೆದ ಈರುಳ್ಳಿಗೆ ಉತ್ತಮ ಬೆಲೆ ಸಿಗದೇ ನಷ್ಟ ಅನುಭವಿಸುವಂತಾಗಿದೆ.
ಬೆಳೆದ ಬೆಳೆಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಸಿಗದೆ ಬಿತ್ತನೆ ಮಾಡಲು ತಂದ ಸಾಲವನ್ನು ಸಹ ತೀರಿಸಲಾಗದಂತಹ ಪರಿಸ್ಥಿತಿ ಉದ್ಭವಿಸಿದ್ದು ಕೇಂದ್ರ ಸರಕಾರ ಈರುಳ್ಳಿ ರಪ್ತು ನಿಷೇಧ ಮಾಡಿರುವುದು ಅವೈಜ್ಞಾನಿಕವಾಗಿದ್ದು ಪ್ರತಿ ಕ್ವಿಂಟಾಲ್ ಈರುಳ್ಳಿಯನ್ನು ಬೆಳೆಯಲು ರೈತರು 1 ಸಾವಿರದಿಂದ ಒಂದುವರೆ ಸಾವಿರದವರೆಗೂ ಖರ್ಚು ಆಗಲಿದ್ದು ಪ್ರತಿ ಎಕರೆಗೆ 35 ಸಾವಿರದಿಂದ 40 ಸಾವಿರ ಖರ್ಚು ತಗುಲಿದೆ .
ಆದರೆ ಕೇಂದ್ರ ಸರಕಾರ ಈರುಳ್ಳಿ ರಪ್ತು ನಿಷೇಧ ಮಾಡಿದ್ದರಿಂದ ಕೇಂದ್ರ ಸರಕಾರ ಪ್ರತಿ ಕ್ವಿಂಟಾಲ್ಗೆ 3500 ರಿಂದ 4000 ರೂ ಬೆಂಬಲ ಬೆಲೆ ನೀಡಬೇಕು. ಈ ಜತೆ ಈರುಳ್ಳಿ ಮೇಲಿನ ರಪ್ತು ನಿಷೇಧವನ್ನು ಕೂಡಲೇ ತೆರವುಗೊಳಿಸಬೇಕೆಂದು ಆಗ್ರಹಿಸಿದರು.



