ಮಳೆಗಾಲದಲ್ಲಿ ಕೆಮ್ಮು, ಶೀತ, ಸಣ್ಣ ಪ್ರಮಾಣದ ಜ್ವರ ಸಾಮಾನ್ಯ. ಇದಕ್ಕೆಲ್ಲ ಮನೆಯಲ್ಲಿಯೇ ಕಷಾಯಗಳಿಂದ ಪರಿಹಾರ ಕಂಡುಕೊಳ್ಳಬಹುದು.
ಈ ವರ್ಷ ಕೊರೊನಾದಿಂದಾಗಿ ಪರಿಸ್ಥಿತಿ ತುಂಬಾ ಭಿನ್ನವಾಗಿದೆ. ಇಂಥ ಸಾಮಾನ್ಯ ಸಮಸ್ಯೆ ಕಂಡು ಬಂದರೂ ಅದು ಕೋವಿಡ್-19 ಲಕ್ಷಣಗಳಿರಬಹುದೇ ಎಂಬ ಭಯ ಶುರುವಾಗುತ್ತದೆ.

ಇನ್ನು ಸಣ್ಣ-ಪುಟ್ಟ ಸಮಸ್ಯೆಗಳಿಗೆ ಆಸ್ಪತ್ರೆಗೆ ಹೋಗಲು ಜನ ಭಯಪಡುತ್ತಿದ್ದಾರೆ. ಮಳೆಗಾಲದಲ್ಲಿ ಡೆಂಗ್ಯೂ, ಟೈಫಾಯ್ಡ್, ಕಾಲರಾ ಈ ರೀತಿಯ ಗಂಭೀರ ಸಮಸ್ಯೆಯೂ ಕಾಡಬಹುದು. ಆದ್ದರಿಂದ ಮಳೆಗಾಲದಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳನ್ನು ಸೇವಿಸಬೇಕು. ಜೊತೆ ಆಯುರ್ವೇದ ಕಷಾಯದಿಂದ ಕೆಮ್ಮು, ಶೀತ, ಸಾಮಾನ್ಯ ಜ್ವರ ಕಡಿಮೆ ಮಾಡುವ ಪರಿಣಾಮಕಾರಿಯಾದ ಮನೆಮದ್ದಾಗಿದೆ.
ತುಳಸಿ ಕಷಾಯ
ಒಂದು ಮುಷ್ಠಿಯಷ್ಟು ಕೃಷ್ಣ ತುಳಸಿಯನ್ನು ತೆಗೆದುಕೊಳ್ಳಿ. ತುಳಸಿಯನ್ನು ತೊಳೆದು ಕಾಳು ಮೆಣಸು ಹಾಗೂ ಶುಂಠಿ ಜೊತೆ ರುಬ್ಬಿ ನಂತರ ಇದನ್ನು 2 ಲೀಟರ್ ನೀರಿಗೆ ಹಾಕಿ ಕುದಿಸಿ, ನೀರು ಒಂದು ಲೀಟರ್ ಆಗುವಷ್ಟು ಹೊತ್ತು ಕುದಿಸಿ, ನಂತರ ಸೋಸಿ, ಸ್ವಲ್ಪ ಜೇನು ಸೇರಿಸಿ ಕುಡಿಯಿರಿ.
ಚಕ್ಕೆ ಕಷಾಯ
ಒಂದು ಕಪ್ ನೀರಿಗೆ ಅರ್ಧ ಚಮಚ ಚಕ್ಕೆ ಪುಡಿ ಹಾಕಿ ಚೆನ್ನಾಗಿ ಕುದಿಸಿ. ಆ ನೀರಿಗೆ ಜೇನು ಹಾಕಿ ಕುಡಿಯಿರಿ.
ಅಮೃತ ಬಳ್ಳಿಯ ಕಷಾಯ
ಅಮೃತ ಬಳ್ಳಿ ಎಲೆಯನ್ನು ರುಬ್ಬಿ, ಅರ್ಧ ಚಮಚ ಪೇಸ್ಟ್ ಅನ್ನು 1 ಕಪ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ನಂತರ ತಣ್ಣಗಾದ ಮೇಲೆ ಕುಡಿಯಿರಿ. ಇದು ಜೀರ್ಣಕ್ರಿಯೆಗೆ ಸಹಕಾರಿ ಹಾಗೂ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಿಸುತ್ತದೆ.
ಸಲಹೆ: ಈ ಕಷಾಯಗಳನ್ನು ದಿನದಲ್ಲಿ ಒಮ್ಮೆ ತಯಾರಿಸಿಟ್ಟರೆ ಬೇಕಾದಾಗ ಬಿಸಿ ಮಾಡಿ ಕುಡಿಯಿರಿ. ದಿನದಲ್ಲಿ ಎರಡು ಲೋಟಕ್ಕಿಂತ ಹೆಚ್ಚು ಕಷಾಯ ಕುಡಿಯಬೇಡಿ.



