ಡಿವಿಜಿ ಸುದ್ದಿ, ಹರಪನಹಳ್ಳಿ :ತಾಲೂಕಿನ ಅರಸೀಕೆರೆ ಹೋಬಳಿಯಾದ್ಯಂತ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯನ್ನು ನಿಲ್ಲಿಸಿ, ಕಾನೂನಿನ ನಿಯಮಾನುಸಾರವಾಗಿ ನಡೆಸಬೇಕು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಸೂಚನೆ ನೀಡಿದರು.
ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಮಂಗಳವಾರ ಕಲ್ಲು ಕ್ವಾರಿ ಕಾರ್ಮಿಕರು ಹಾಗೂ ಮಾಲೀಕರು ನಡೆಸಿದ ಧರಣಿಯಲ್ಲಿ ಮನವಿ ಸ್ವೀಕರಿಸಿ ಮಾತನಾಡಿದರು.
‘ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಕುಟುಂಬಗಳು ಅಧಿಕವಾಗಿವೆ. ಪಾರಂಪರಿಕ ಕಲ್ಲು ಒಡೆಯುವ ಕಾರ್ಮಿಕರು ಗಣಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿದಲ್ಲಿ 15 ದಿನಗೊಳಗಾಗಿ ಅನುಮತಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಆದರೆ, ಪಾರಂಪರಿಕರ ಹೆಸರಲ್ಲಿ ಕಾನೂನು ನಿಯಮಗಳನ್ನು ಗಾಳಿಗೆ ತೂರಿ ವ್ಯಾಪಕವಾಗಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಕುರಿತು ದೂರುಗಳ ದಾಖಲಾಗಿವೆ. ಅಗತ್ಯ ಪ್ರಮಾಣಕ್ಕಿಂತ ಅಧಿಕವಾಗಿ ಗಣಿಗಾರಿಕೆ ನಡೆಸುತ್ತಿರುವವರು ಅಗತ್ಯ ದಾಖಲೆಗಳನ್ನು ಒದಗಿಸಿ ಪರವಾನಿಗೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದಕ್ಕೂ ಮೊದಲು ಉಚ್ಚಂಗಿದುರ್ಗ, ಹಿರೇಮೆಗಳಗೆರೆ, ಚಟ್ನಿಹಳ್ಳಿ, ಸತ್ತೂರು ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಬರುವ ಸಾವಿರಾರು ಕಲ್ಲು ಒಡೆಯುವ ಕಾರ್ಮಿಕರು ರಸ್ತೆಗೆ ಇಳಿದು ಕಲ್ಲು ಪರವಾನಗಿ ನಿಯಮಗಳನ್ನು ಸಡಿಲೀಕರಿಸಿ ಸಹಕರಿಸಬೇಕು ಎಂದು ಆಗ್ರಹಿಸಿದರು.
ತಹಶೀಲ್ದಾರ್ ನಾಗವೇಣಿ ಅವರಿಗೆ ಘೇರಾವ್ ಹಾಕಿ ಅಧಿಕಾರಿಗಳ ಧೋರಣೆ ವಿರುದ್ಧ ಘೋಷಣೆಗಳನ್ನು ಕೂಗಿದರು. 1972 ರಿಂದಲೂ ಕಲ್ಲು ಬಂಡೆಗಳನ್ನು ಒಡೆದು ಜೀವನ ಸಾಗಿಸುತ್ತಿದ್ದೇವೆ. ಅದೇ ಪಾರಂಪರೆಯಿಂದ ಶಿಕ್ಷಣವನ್ನು ಪಡೆಯದೆ ಕಲ್ಲು ಕ್ವಾರಿಯಲ್ಲಿಯೇ ಜೀವನ ಸಾಗಿಸುತ್ತಿದ್ದೇವೆ. ಈಚೆಗೆ ಹರಪನಹಳ್ಳಿ ತಾಲೂಕನ್ನು ದಾವಣಗೆರೆ ಜಿಲ್ಲೆಯಿಂದ ಬೇರ್ಪಡಿಸಿ ಬಳ್ಳಾರಿಗೆ ಸೇರಿಸಿದ್ದಾಗಿನಿಂದಲೂ ಅಧಿಕಾರಿಗಳು ಕುಂಟು ನೆಪಗಳನ್ನು ಒಡ್ಡಿ ಕೆಲಸಕ್ಕೆ ಅಡ್ಡಿ ಪಡಿಸುತ್ತಿದ್ದಾರೆ. ಪರವಾನಿಗಾಗಿ 250 ಕಿ.ಮೀ ದೂರದ ಬಳ್ಳಾರಿಗೆ ಅಲೆದು ಸಾಕಾಗಿದೆ. ಕೈಗಳಿಗೆ ಕೆಲಸವೂ ಇಲ್ಲದೆ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈಗಿರುವ ಕಾನೂನು ನಿಯಮಗಳನ್ನು ಸಡಿಲೀಕರಿಸಿ ಅಧಿಕಾರಿಗಳು ಸ್ಥಳದಲ್ಲಿಯೇ ಪರವಾನಿಗೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತೆರಿಗೆ ವಂಚನೆ ಪ್ರಕರಣ ಆರೋಪದಡಿಯಲ್ಲಿ ಇಲಾಖೆಯಿಂದ ಸಿ.ಫಾರಂ ಪಡೆದುಕೊಂಡಿದ್ದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಲಿ ದೂರು ದಾಖಲಿಸಿದ್ದಾರೆ. ಇದಕ್ಕೂ ಮೊದಲೇ ಈ ಕ್ರಷರ್ ಗಳ ಮೇಲೆ ದೂರು ದಾಖಲಾಗಿತ್ತು. ಅಧಿಕಾರಿಗಳು ದೂರು ಹಿಂಪಡೆದು ದಾಖಲೆಗಳನ್ನು ಒದಗಿಸುವಲ್ಲಿ ಸಹಕರಿಸಬೇಕು. ಉಚ್ಚಂಗಿದುರ್ಗ ಗ್ರಾಮದ ಸರ್ವೇ ನಂ 399/ಈ, 271 ಜಮೀನಿಗೆ ಸಂಬಂಧಿಸಿದಂತೆ ಸೆಕ್ಷೆನ್ 4 ರಿಂದ 17 ಕ್ಕೆ ರವಾನಗೆ ಆಗಿದೆ. ಕಂದಾಯ ಇಲಾಖೆ, ಅರಣ್ಯ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗ್ರಾಮ ಸಭೆ ನಡೆಸುವುದರ ಮೂಲಕ ಕಾರ್ಮಿಕರ ಪರ ಸರಕಾರಕ್ಕೆ ವರದಿ ಸಲ್ಲಿಸುವಂತೆ ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಪ್ರಸನ್ನ ಕುಮಾರ್, ಬಳ್ಳಾರಿ ಜಿಲ್ಲೆ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಮಹಾವೀರ ಜೈನ್, ಹೊಸಪೇಟೆ ಗಣಿ ಭೂ ವಿಜ್ಞಾನ ಅಧಿಕಾರಿ ಎಸ್.ಎನ್ ಹರ್ಷವರ್ಧನ್, ತಹಶೀಲ್ದಾರ್ ನಾಗವೇಣಿ, ಸಬ್ ಇನ್ಸ್ಪೆಕ್ಟರ್ ವೀರಬಸಪ್ಪ ಕುಸಲಾಪುರ, ರಾಜಸ್ವನಿರೀಕ್ಷಕ ಶ್ರೀಧರ್ ಮುಖಂಡರಾದ ಸಿದ್ದಪ್ಪ, ವಿಶ್ವನಾಥ್, ಫಣಿಯಾಪುರ ಲಿಂಗರಾಜ ಇತರರು ಇದ್ದರು.



