Connect with us

Dvgsuddi Kannada | online news portal | Kannada news online

ಹರಪನಹಳ್ಳಿ ಜಿಲ್ಲಾ ಕೇಂದ್ರಕ್ಕೆ ಆಗ್ರಹಿಸಿ ಸಿಎಂ ಬಳಿ ಸರ್ವ ಪಕ್ಷ ನಿಯೋಗ : ಕರುಣಾಕರ ರೆಡ್ಡಿ

ಹರಪನಹಳ್ಳಿ

ಹರಪನಹಳ್ಳಿ ಜಿಲ್ಲಾ ಕೇಂದ್ರಕ್ಕೆ ಆಗ್ರಹಿಸಿ ಸಿಎಂ ಬಳಿ ಸರ್ವ ಪಕ್ಷ ನಿಯೋಗ : ಕರುಣಾಕರ ರೆಡ್ಡಿ

ಡಿವಿಜಿ ಸುದ್ದಿ, ಹರಪನಹಳ್ಳಿ: ತಾಂತ್ರಿಕವಾಗಿ ಹೊಸಪೇಟೆ ಜಿಲ್ಲೆ ಕೇಂದ್ರ ಮಾಡಲು ಸಾಧ್ಯವಿಲ್ಲ. ಹಡಗಲಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು ಎಲ್ಲವೂ ಸಮೀಪದಲ್ಲಿದ್ದು, ಹರಪನಹಳ್ಳಿ ಜಿಲ್ಲಾ ಕೇಂದ್ರವಾಗಲು ಸೂಕ್ತ ಸ್ಥಳವಾಗಿದೆ.  ಜಿಲ್ಲಾ ಕಚೇರಿಗಳನ್ನು ತೆರೆಯಲು ಸಾಕಷ್ಟು ಜಮೀನು ಕೂಡ ಇದೆ. ಹೀಗಾಗಿ ಹರಪನಹಳ್ಳಿ ಜಿಲ್ಲಾ ಕೇಂದ್ರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಶಾಸಕ ಜಿ.ಕರುಣಾಕರರೆಡ್ಡಿಹೇಳಿದರು.

ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಶನಿವಾರ ಶಾಸಕ ಜಿ.ಕರುಣಾಕರರೆಡ್ಡಿ ಅಧ್ಯಕ್ಷತೆಯಲ್ಲಿ ಹರಪನಹಳ್ಳಿ ಜಿಲ್ಲಾ ಕೇಂದ್ರ ಹೋರಾಟದ ರೂಪರೇಷೆ ತಯಾರಿಸಲು ಸರ್ವ ಪಕ್ಷ ಸಭೆಯ ಅಧ್ಯಕ್ಷತೆವಹಿಸಿದ್ದ ಶಾಸಕ ಜಿ.ಕರುಣಾಕರರೆಡ್ಡಿ ಮಾತನಾಡಿದರು.

ಹೊಸಪೇಟೆ ಜಿಲ್ಲಾ ಕೇಂದ್ರ ಮಾಡುವಂತೆ ಸಿಎಂಗೆ ಮನವಿ ಕೊಟ್ಟಿದ್ದಾರೆ.  ನಾವು ಕೂಡ ಹರಪನಹಳ್ಳಿಯನ್ನು ಜಿಲ್ಲೆ ಮಾಡುವಂತೆ ಒತ್ತಾಯಿಸಿ ಶೀಘ್ರವೇ ಮುಖ್ಯಮಂತ್ರಿಗಳ ಬಳಿ ನಿಯೋಗ ಕರೆದುಕೊಂಡು ಹೋಗೋಣ. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ದಿನಾಂಕ ನಿಗದಿಗೊಳಿಸಲಾಗುವುದು. ಜಿಲ್ಲಾ ಹೋರಾಟವನ್ನು ರಾಜಕೀಯ ಲಾಭಕ್ಕೆ ಬಳಕೆ ಮಾಡಿಕೊಳ್ಳುವುದು ಬೇಡ. ನಾನು ಜನಪ್ರತಿನಿಧಿಯಾಗಿ ನನ್ನ ಕೆಲಸ ಮಾಡುತ್ತೇನೆ. ಸಿಎಂ ಬಳಿ ನಿಯೋಗ ತೆರಳಿದಾಗ ಮುಖ್ಯಮಂತ್ರಿಗಳ ಪ್ರತಿಕ್ರಿಯೆ ನೋಡಿಕೊಂಡು ಹೋರಾಟದ ಮುಂದಿನ ರೂಪರೇಷೆಗಳನ್ನು ಚರ್ಚಿಸೋಣ ಎಂದರು.

ಹೋರಾಟಗಾರರು ಹೋರಾಟಕ್ಕೆ ಶಾಸಕರು ಬೆಂಬಲ ಕೊಡಬೇಕು ಹೇಳುತ್ತಿದ್ದಾರೆ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಹರಪನಹಳ್ಳಿಯನ್ನು ಜಿಲ್ಲಾ ಕೇಂದ್ರ ಮಾಡಲು ಶಕ್ತಿ ಮೀರಿ ಶ್ರಮಿಸುತ್ತೇನೆ. ಜಿಲ್ಲೆಯಾದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆ ಆಗುವುದರ ಜೊತೆಗೆ ಅಭಿವೃದ್ದಿ ಹೊಂದಲಿದೆ. ಹೀಗಾಗಿ ಜಿಲ್ಲೆಗಾಗಿ ಸದನದ ಒಳಗೆ ಮತ್ತು ಹೊರಗೆ ಎರಡು ಕಡೆಗೂ ನಾನು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷ ವರಸದ್ಯೋಜಾತ ಸ್ವಾಮೀಜಿ ಮಾತನಾಡಿ, ಜಿಲ್ಲಾ ಹೋರಾಟಕ್ಕೆ ಶಾಸಕರು ಭಾಗಿರುವುದರಿಂದ ಹೋರಾಟಕ್ಕೆ ಸರಿಯಾದ ಮಾರ್ಗ ಸಿಕ್ಕಂತಾಗಿದೆ. ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕೊಟ್ಟಿರುವ ಹರಪನಹಳ್ಳಿ ಜಿಲ್ಲಾ ಕೇಂದ್ರವಾದಲ್ಲಿ ಅಭಿವೃದ್ದಿ ಹೊಂದಲಿದೆ. ಜಿಲ್ಲಾ ಹೋರಾಟದ ಕಿಚ್ಚು ಗ್ರಾಮಾಂತರ ಪ್ರದೇಶಕ್ಕೂ ಹಬ್ಬಬೇಕಿದ್ದು, ನಮ್ಮ ಧ್ವನಿ ಮುಖ್ಯಮಂತ್ರಿಗಳ ಗಮನಕ್ಕೆ ತರಲು ಸಿಎಂ ಬಳಿ ನಿಯೋಗ ಕರೆದುಕೊಂಡು ಹೋಗಬೇಕು. ಜನಪ್ರತಿನಿಧಿಗಳು ಸದನದಲ್ಲಿ ಒಳಗೆ, ಜನರು ಹೊರಗೆ ಹೋರಾಟ ಮಾಡಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು.

ನೀಲಗುಂದ ಗುಡ್ಡದ ವಿರಕ್ತಮಠ ಚನ್ನಬಸವ ಶಿವಯೋಗಿ ಸ್ವಾಮೀಜಿ ಮಾತನಾಡಿ, ಬೆಂಕಿಯಿಂದ ತೆಗೆದು ಬಾಣಲೆಗೆ ಹಾಕಿದಂತೆ ದಾವಣಗೆರೆ ಜಿಲ್ಲೆಯಿಂದ ಬಳ್ಳಾರಿಗೆ ಹರಪನಹಳ್ಳಿ ಸೇರಿಸಲಾಗಿದೆ. ಇದೀಗ ಬಳ್ಳಾರಿಯಿಂದ ಪುನಃ ಹೊಸಪೇಟೆ ಜಿಲ್ಲೆಗೆ ಸೇರಿಸುವ ಹುನ್ನಾರ ನಡೆಯುತ್ತಿದೆ. ಮುಖ್ಯಮಂತ್ರಿಗಳ ಬಳಿ ಹೋರಾಟಗಾರರನ್ನು ಕರೆದುಕೊಂಡು ಹೋಗಿ ಪ್ರಬಲವಾಗಿ ನಮ್ಮ ಹಕ್ಕು ಪ್ರತಿಪಾದಿಸಬೇಕಿದೆ. ತಾಲೂಕಿನಲ್ಲಿ ಸ್ಥಳೀಯರೇ ಶಾಸಕರು ಆಗಬೇಕು ಎಂಬ ಕೂಗಿದೆ. ಹರಪನಹಳ್ಳಿಯನ್ನು ಜಿಲ್ಲೆ ಮಾಡಿದಲ್ಲಿ ಕರುಣಾಕರರೆಡ್ಡಿ ಅವರು ನಿಜಕ್ಕೂ ಸ್ಥಳಿಯರೇ ಆಗುತ್ತಾರೆ. ಸದ್ಯ ಶಾಸಕರು ತ್ಯಾಗದ ಮೂಲಕ ಹೋರಾಟ ನಡೆಸಬೇಕಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡರಾದ ಎಂ.ರಾಜಶೇಖರ್, ಎಂ.ವಿ.ಅಂಜಿನಪ್ಪ, ಡಿ.ಅಬ್ದುಲ್‌ರಹಿಮಾನ ಸಾಬ್ ಮಾತನಾಡಿ, ಹೈ.ಕ ಸೌಲಭ್ಯ ಪಡೆಯಲು ಮಾಜಿ ಶಾಸಕ ಎಂ.ಪಿ.ರವೀಂದ್ರ ಅವರು ಸರ್ಕಾರದ ಮೇಲೆ ರಾಜೀನಾಮೆ ಒತ್ತಡ ತಂದು ಸೌಲಭ್ಯ ಪಡೆಯುವಲ್ಲಿ ಯಶಸ್ವಿಯಾದರು. ರೈಲು, ರಾಜ್ಯ ಹೆದ್ದಾರಿ ಸೇರಿದಂತೆ ಎಲ್ಲಾ ಸಂಪರ್ಕ ಹೊಂದಿರುವ ಹರಪನಹಳ್ಳಿ ಜಿಲ್ಲೆ ಆಗುವ ಎಲ್ಲಾ ಅರ್ಹತೆ ಹೊಂದಿದ್ದು, ಶಾಸಕರ ನೇತೃತ್ವದಲ್ಲಿ ನಡೆಯುವ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿದರು.

ಜಿಲ್ಲಾ ಹೋರಾಟ ಸಮಿತಿಯ ಇದ್ಲಿ ರಾಮಪ್ಪ ಮಾತನಾಡಿ, ಹೈ.ಕ ಸೌಲಭ್ಯ ಹರಪನಹಳ್ಳಿಯಿಂದ ಕೈ ತಪ್ಪಿದಾಗ ಸರ್ಕಾರಕ್ಕೆ ಹಠಕ್ಕೆ ಬಿದ್ದು ಎಂ.ರವೀಂದ್ರ ಅವರು ಸೌಲಭ್ಯ ದೊರೆಕಿಸುವಲ್ಲಿ ಯಶಸ್ವಿಯಾದರು. ತಮ್ಮ ಶಾಸಕ ಸ್ಥಾನ ಹೋದರೂ ಪರವಾಗಿ ಜಿಲ್ಲೆ ಮಾಡಿ ಎಂದು ಹಠ ಮಾಡಬೇಕಿದೆ. ಇಚ್ಚಾಶಕ್ತಿಯಿಂದ ಜಿಲ್ಲಾ ಹೋರಾಟದ ನೇತೃತ್ವವಹಿಸಿಕೊಂಡು ಸರ್ಕಾರದ ಭಾಗವಾಗಿ ಕೆಲಸ ಮಾಡಬೇಕು. ಪಶ್ಚಿಮ ತಾಲೂಕುಗಳ ಶಾಸಕರ ಸಮನ್ವಯ ಸಮಿತಿ ರಚಿಸಿಕೊಂಡು ಅವರ ಸಹಕಾರದಿಂದ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಹೋರಾಟ ಸಮಿತಿಯ ಹೊಸಹಳ್ಳಿ ಮಲ್ಲೇಶ್ , ವಕೀಲ ಗಂಗಾಧರ ಗುರುಮಠ ಪ್ರೋ.ತಿಮ್ಮಪ್ಪ, ಕರವೇ ಬಸವರಾಜ್ ಹುಲಿಯಪ್ಪನವರ್, ನಿಚ್ಚವ್ವನಹಳ್ಳಿ ಭೀಮಪ್ಪ, ಬೂದಿಹಾಳ್ ಸಿದ್ದೇಶ್, ಮತ್ತಿಹಳ್ಳಿ ಅಜ್ಜಣ್ಣ, ಪಾಟೀಲ್ ಬೆಟ್ಟನಗೌಡ, ಗುಡಿಹಳ್ಳಿ ಹಾಲೇಶ್, ಕೂಲಹಳ್ಳಿ ಚಿನ್ಮಯ ಸ್ವಾಮೀಜಿ ಮಾತನಾಡಿದರು. ವಿವಿಧ ಪಕ್ಷ ಮತ್ತು ಸಂಘಟನೆ ಮುಖಂಡರಾದ ಬೇಲೂರು ಅಂಜಪ್ಪ, ಟಿ.ವೆಂಕಟೇಶ್, ಶಿಕಾರಿ ಬಾಲಪ್ಪ, ಪ್ರೊ..ಡಿ.ಬಿ.ಬಡಿಗೇರ, ಚಿಕ್ಕೇರಿ ಬಸಪ್ಪ, ಎಂ.ಪಿ.ನಾಯ್ಕ, ಬಾಗಳಿ ಕೊಟ್ರೇಶಪ್ಪ, ಎಚ್.ಎಂ.ಜಗದೀಶ್, ಯರಬಾಳು ಹನುಮಂತಪ್ಪ, ಎಲ್.ಮಂಜ್ಯನಾಯ್ಕ, ಸತ್ತೂರು ಹಾಲೇಶ್, ರಾಘವೇಂದ್ರ ಶೆಟ್ಟಿ, ಸಣ್ಣ ಹಾಲಪ್ಪ, ಟಿ.ಲೋಕೇಶ್, ಡಾ.ಮಲ್ಕಪ್ಪ, ಎಂ.ಟಿ.ಬಸವನಗೌಡ, ಹೆಚ್.ಎಂ.ಅಶೋಕ್, ಎಸ್.ಪಿ.ಲಿಂಬ್ಯಾನಾಯ್ಕ, ಇಸ್ಮಾಯಿಲ್ ಯಲಿಗಾರ್ ಇತರರಿದ್ದರು.

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಹರಪನಹಳ್ಳಿ

To Top