ಡಿವಿಜಿ ಸುದ್ದಿ, ದಾವಣಗೆರೆ: ಈ ಬಾರಿ ವೋಟ್ ಹಾಕಬೇಕು ಅಂತಾ ಇದ್ದೆ. ಆದರೆ, ಏನು ಮಾಡದು ವೋಟರ್ ಲಿಸ್ಟ್ ನಲ್ಲಿ ನನ್ನ ಹೆಸರೇ ಇಲ್ಲ.. ಹೀಗೆ ಇನ್ಮುಂದೆ ಕೊರಗುವ ಅವಶ್ಯಕತೆ ಇಲ್ಲ. ಜಿಲ್ಲಾಡಳಿತ ಜ.7 ಮತ್ತು 8 ರಂದು 18 ವರ್ಷ ಮೇಲ್ಪಟ್ಟವರಿಗೆ ಮಿಂಚಿನ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬನ್ನಿ ಉತ್ಸಾಹದಿಂದ ಪಾಲ್ಗೊಂಡು ನಿಮ್ಮ ಮತದಾನದ ಹಕ್ಕು ಪಡೆದುಕೊಳ್ಳಿ..
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರರ ಮಿಂಚಿನ ನೋಂದಣಿ ಕಾರ್ಯಕ್ರಮ ಅನುಷ್ಟಾನದ ಕುರಿತು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಅಧ್ಯಕ್ಷತೆ ಸಭೆ ನಡೆಯಿತು. ಸಭೆಯ ನಂತರ ಮಾತನಾಡಿದ ಅವರು, ಜ.1 ಕ್ಕೆ 18 ವರ್ಷ ಪೂರೈಸುವ ಯುವ ಮತದಾರರು ನಮೂನೆ-6 ನ್ನು ಅಂತರ್ಜಾಲದಲ್ಲಿ ಅಥವಾ ನೇರವಾಗಿ ಭರ್ತಿ ಮಾಡಿ, ಪೂರಕ ದಾಖಲಾತಿಗಳೊಂದಿಗೆ ತಮ್ಮ ಹತ್ತಿರದ ಮತಗಟ್ಟೆ ಅಧಿಕಾರಿಗಳಿಗೆ ನೀಡುವ ಮೂಲಕ ನೋಂದಾಯಿಸಿಕೊಳ್ಳಬಹುದು. ಎಲ್ಲ ಕಾಲೇಜು, ವಿಶ್ವವಿದ್ಯಾನಿಲಯದ ಹಾಗೂ ವಿವಿಧ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು ತಮ್ಮ ವಿದ್ಯಾರ್ಥಿಗಳಿಗೆ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಜಿಪಂ ಸಿಇಓ, ಸ್ವೀಪ್ ಸಮಿತಿ ಅಧ್ಯಕ್ಷತೆಯಲ್ಲಿ ಪಾಲಿಕೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಶೈಕ್ಷಣಿಕ ಸಂಸ್ಥೆಗಳು, ಎಲ್ಲಾ ಪ್ರೌಢಶಾಲೆಗಳು ಹಾಗೂ ಕಾಲೇಜುಗಳ ವಿದ್ಯಾರ್ಥಿಗಳನ್ನೊಂಡು ಜ.06 ರಂದು ಬೆಳಿಗ್ಗೆ 9.30 ಕ್ಕೆ ನಗರದಲ್ಲಿ ಪ್ರಭಾತ್ ಪೇರಿಯನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು.
ಆಯೋಗವು ನಿಗದಿಪಡಿಸಿದ ಲೋಗೊ “Proud to be a Voter-Ready to Vote” ಎಂಬ ಘೋಷಣೆ ಹೊಂದಿದ ಬ್ಯಾಡ್ಜ್ನ್ನು ಯುವ ಮತದಾರರಿಗೆ ವಿತರಿಸಬೇಕು. ಹಾಗೂ ಆಯೋಗ ತಯಾರಿಸಿರುವ ಚುನಾವಣಾ ಚಲನ ಚಿತ್ರಗಳನ್ನು ಪ್ರದರ್ಶಿಸಲು ಕ್ರಮ ಕೈಗೊಳ್ಳಬೇಕು ಎಂದರು.
ರಾಷ್ಟ್ರೀಯ ಚುನಾವಣಾ ದಿನ
ಹೊಸದಾಗಿ ನೋಂದಾಯಿಸಿದ ಮತದಾರರಿಗೆ ಜ.25 ಏರ್ಪಡಿಸಲಾಗುವ ರಾಷ್ಟ್ರೀಯ ಚುನಾವಣಾ ದಿನದಂದು ಎಪಿಕ್ ಕಾರ್ಡ್ನ್ನು ವಿತರಿಸಲಾಗುವುದು. ಇದಕ್ಕೆ ಪೂರ್ವಭಾವಿಯಾಗಿ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳ ವತಿಯಿಂದ ಹಾಗೂ ಸ್ವೀಪ್ ಸಮಿತಿ ಮೂಲಕ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸಿ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಬೇಕು.
ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ದಾವಣಗೆರೆ, ಹರಿಹರ ಮತ್ತು ಜಗಳೂರು ತಾಲ್ಲೂಕುಗಳ ಒಳಗೊಳ್ಳುತ್ತವೆ. ಪದವೀಧರರ ಕ್ಷೇತ್ರದ ಚುನಾವಣೆ ಸಮೀಪವಿದ್ದು, ಕರಡು ಮತದಾರರ ಪಟ್ಟಿಯೂ ಪ್ರಕಟಗೊಂಡಿದೆ. ಇದುವರೆಗೆ 13 ಸಾವಿರ ಪದವೀಧರರು ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಜ.2, 3 ಮತ್ತು 4 ರಂದು ಮಿಂಚಿನ ನೋಂದಣಿ ನಡೆಸಲಾಗುವುದು. ಪದವೀಧರರು ಈ ಸದವಕಾಶ ಬಳಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳ್ಳಬೇಕು ಎಂದರು.
ಸಭೆಯಲ್ಲಿ ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಚುನಾವಣಾ ತಹಶೀಲ್ದಾರ್ ಪ್ರಸಾದ್, ಜಿ.ಪಂ. ನ ಪಿಎಇಓ ಶಾರದ, ತಾಲ್ಲೂಕುಗಳ ತಹಶೀಲ್ದಾರರು, ನಗರದ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಬಿಎಲ್ಓಗಳು, ಇತರೆ ಸಿಬ್ಬಂದಿಗಳು ಹಾಜರಿದ್ದರು.