ಡಿವಿಜಿ ಸುದ್ದಿ, ದಾವಣಗೆರೆ: ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ತೋಟಗಾರಿಕೆ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಖ್ಯಾತ ವೈದ್ಯ, ಸಮಾಜ ಸೇವಕರಾದ ಶಾಂತಾಭಟ್ ಅವರನ್ನು ಸನ್ಮಾನಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಕೆ.ಹೆಚ್ ಕಾರ್ಯಕ್ರಮವ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಸಮಾನತೆಯನ್ನು ತರಲು ಇದು ಸಕಾಲವಾಗಿದೆ. ಮೂಡನಂಬಿಕೆಗಳನ್ನು ಹೊರಗಿಟ್ಟು ಬದುಕನ್ನು ನೆಮ್ಮದಿಯತ್ತ ಕೊಂಡೊಯ್ಯುವ ಕೆಲಸವಾಗಬೇಕಾಗಿದೆ ಎಂದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮನರ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ರೇಷ್ಮಾಪರ್ವಿನ್ ಮಾತನಾಡಿ, ಮನೆ ಮತ್ತು ಸಮಾಜದಲ್ಲಿ ಹೆಣ್ಣು ಗಂಡು ಎಂಬ ಬೇಧವಿಲ್ಲದೆ ದೇಶದ ಉನ್ನತಿಗಾಗಿ ಸಮಾನವಾಗಿ ಶ್ರಮಿಸುವ ಕಾಲಘಟ್ಟ ಇದಾಗಿದೆ. ಕೃಷಿ ತಂತ್ರಜ್ಞಾನಗಳನ್ನು ಬಳಸುವಲ್ಲಿ ಮಹಿಳೆಯರ ಪಾತ್ರವೇ ಹಿರಿದಾದುದು ಎಂದು ಶ್ಲಾಘಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಶಾಂತಾಭಟ್, ಹೆಣ್ಣು ಭ್ರೂಣ ಹತ್ಯೆ ಒಂದು ಘೋರ ಪಾಪ. ಹೆಣ್ಣು ಗಂಡುಗಳೆರಡು ಸೃಷ್ಠಿಯ ಕೊಡುಗೆಗಳು. ಮನೆಯನ್ನು ಬೆಳೆಸುವಲ್ಲಿ ಪುರುಷರ ಸಾಮರ್ಥ್ಯದಷ್ಟೇ ಮಹಿಳೆಯರ ಸೇವೆ ಅಗತ್ಯವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೆವಿಕೆ ಮುಖ್ಯಸ್ಥ ಡಾ. ದೇವರಾಜ ಟಿ.ಎನ್, ಹುಟ್ಟು ನಮ್ಮ ಆಯ್ಕೆಯಲ್ಲ, ಹಾಗೆಯೇ ಲಿಂಗವೂ ಕೂಡ ಆಯ್ಕೆಯಲ್ಲ. ಬದುಕಿನ ಬಂಡಿಗೆ ಗಂಡು, ಹೆಣ್ಣು ಎರಡು ಗಾಲಿಗಳಿದ್ದಂತೆ. ಪ್ರಾಚೀನ ಭಾರತದ ಗಾರ್ಗೇಯಿ, ಮೈತ್ರೇಯಿರವರಿಂದ ಆಧುನಿಕ ಭಾರತದ ಕಲ್ಪನಾ ಚಾವ್ಲಾ, ಸುನಿತಾ ಮಿಲಿಯಂ ಅವರಂತೆ ಅದ್ವೀತೀಯ ಸಾಧನೆಗೈದ ಮಹಿಳೆಯರು ಮಾದರಿ ಎಂದರು.



