ಡಿವಿಜಿ ಸುದ್ದಿ, ದಾವಣಗೆರೆ: ವಿಶೇಷ ಚೇತನ ಮಕ್ಕಳು ನ್ಯೂನ್ಯತೆ ಹೊಂದಿದ್ದರೂ ಸಹ ಬಹಳ ಚುರುಕು ಮತ್ತು ಬುದ್ಧಿವಂತರಾಗಿರುತ್ತಾರೆ. ಅವರು ದೇವರ ಪ್ರತಿರೂಪ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.
ದಿವ್ಯಾಂಗ ವ್ಯಕ್ತಿಗಳ ಕೌಶಲ್ಯಾಭಿವೃದ್ಧಿ, ಪುನರ್ವಸತಿ ಮತ್ತು ಸಬಲೀಕರಣಗಳ ಸಂಯುಕ್ತ ಪ್ರಾದೇಶಿಕ ಕೇಂದ್ರ ಆಯೋಜಿಸಿದ್ದ ವಿಶೇಷ ಚೇತನರಿಗೆ ಅಡಿಪ್ ಯೋಜನೆಯಲ್ಲಿ ಶ್ರವಣ ಯಂತ್ರ ಮತ್ತು ಟಿ.ಎಲ್.ಎಂ. ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ದಿವ್ಯಾಂಗ ವ್ಯಕ್ತಿಯೂ ವಿಶೇಷ ಪತ್ರಿಭೆ ಹೊಂದಿತ್ತಾರೆ. ಅವರಿಗೆ ಯಾವುದೇ ಅನ್ಯಾಯವಾಗದಂತೆ ಸರ್ಕಾರಿ ಸೌಲಭ್ಯಗಳು ದೊರೆಯಬೇಕು. ಇ ದಾವಣಗೆರೆಯಲ್ಲಿ ಸ್ಥಾಪಿತವಾಗಿರುವ ಸಿ.ಆರ್.ಸಿ ಕೇಂದ್ರದ ಸದುಪಯೋಗವಾಗಬೇಕು ಎಂದರು.
ಸಿ.ಆರ್.ಸಿ ಕಟ್ಟಡ ನಿರ್ಮಾಣಕ್ಕಾಗಿ ಕೊಗ್ಗನೂರಿನಲ್ಲಿ 8 ಎಕರೆ ಮತ್ತು ವಡ್ಡನಹಳ್ಳಿಯಲ್ಲಿ 2 ಎಕರೆ ಒಟ್ಟು 10 ಎಕರೆ ಜಮೀನನ್ನು ಮಂಜೂರು ಮಾಡಲಾಗಿದ್ದು, ವಿಕಲಚೇತನರ ಪುನರ್ವಸತಿಗಾಗಿ ಆಧುನಿಕ ಮತ್ತು ಸಂಪೂರ್ಣ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಈ ಯೋಜನೆಗೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ 60 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು.
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಜಿ.ಎಸ್.ಶಶಿಧರ್ ಪ್ರಾಸ್ತಾವಿಕವಾಗಿ ಮಾತನಾಡಿ,ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಾಕ್ ಮತ್ತು ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಜಿಲ್ಲೆಯಲ್ಲಿರುವ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುವಂತೆ ಚರ್ಚಿಸಿಲಾಗಿತ್ತು. ಅದರಂತೆ ಈ ವರ್ಷದಲ್ಲಿ ಸುಮಾರು 50 ಜನರಿಗೆ ಉದ್ಯೋಗ ಒದಗಿಸುವ ಗುರಿ ಹೊಂದಲಾಗಿದ್ದು, ಅರ್ಹ ವಿಕಲಚೇತನರು ಡಿ. 20 ರೊಳಗೆ ಅರ್ಜಿ ಸಲ್ಲಿಸಿ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಮಹಂತೇಶ್ ಬೀಳಗಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ವೀರೆಶ್ ಹನಗವಾಡಿ ಸಿ.ಆರ್ಸಿ ಕೇಂದ್ರದ ನಿರ್ದೇಶಕ ಜ್ಞಾನವೇಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 115 ಶ್ರವಣ ದೋಷ ಮಕ್ಕಳಿಗೆ ಶ್ರವಣಯಂತ್ರ, 22 ಬೌದ್ಧಿಕ ನ್ಯೂನ್ಯತೆ ಇರುವರಿಗೆ ಟಿ.ಎಲ್.ಎಮ್. ಕಿಟ್ ವಿತರಣೆ ಮಾಡಲಾಯಿತು.



