ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ 2020-21ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯನ್ನು ಜಾರಿಗೊಳಿದ್ದು, ವಿವಿಧ ಬೆಳೆಗಳಿಗೆ ವಿಮೆ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳಲು ಜು.31 ಕೊನೆಯ ದಿನವಾಗಿದೆ.
ಮೆಕ್ಕೆಜೋಳ (ಮಳೆ ಆಶ್ರಿತ) ಬೆಳೆಯನ್ನು ದಾವಣಗೆರೆ, ಹೊನ್ನಾಳಿ, ನ್ಯಾಮತಿ, ಜಗಳೂರು, ಚನ್ನಗಿರಿ ತಾಲ್ಲೂಕಿನ ರೈತರು, ಭತ್ತ (ನೀರಾವರಿ) ಬೆಳೆಗಳನ್ನು ಹರಿಹರ ತಾಲ್ಲೂಕಿಗೆ ಅಧಿಸೂಚನೆ ಮಾಡಲಾಗಿದೆ.
ಈಗಾಗಲೇ ಈ ಯೋಜನೆಯ ಬಗ್ಗೆ ಜಿಲ್ಲೆಯಾದ್ಯಂತ ಕರಪತ್ರ, ಟ್ಯಾಬೂಲೊ ಹಾಗೂ ಪತ್ರಿಕಾ ಪ್ರಕಟಣೆಯ ಮೂಲಕ ಕೃಷಿ ಇಲಾಖೆಯಿಂದ ಹಾಗೂ ವಿಮಾ ಕಂಪನಿಯಿಂದ ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದು, ರೈತರು ಅಧಿಸೂಚಿತ ಬೆಳೆಗಳಿಗೆ ನೋಂದಾವಣೆ ಮಾಡಿಸುತ್ತಿದ್ದಾರೆ.
ಭತ್ತ (ನೀರಾವರಿ), ಭತ್ತ (ಮಳೆಯಾಶ್ರಿತ), ಮೆಕ್ಕೆಜೋಳ (ನೀರಾವರಿ), ಮೆಕ್ಕೆಜೋಳ (ಮಳೆಯಾಶ್ರಿತ), ಜೋಳ (ಮಳೆ ಆಶ್ರಿತ), ಜೋಳ (ನೀರಾವರಿ), ರಾಗಿ (ಮಳೆ ಆಶ್ರಿತ), ರಾಗಿ (ನೀರಾವರಿ). ನವಣೆ (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ಶೇಂಗಾ (ಮಳೆ ಆಶ್ರಿತ), ಶೇಂಗಾ (ನೀರಾವರಿ), ಸಜ್ಜೆ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ) ಬೆಳೆಗಳನ್ನು ಬೆಳೆ ವಿಮೆಗೆ ನೋಂದಾಯಿಸಲು ಈ ತಿಂಗಳ 31ನೇ ತಾರೀಖು ಕೊನೆಯ ದಿನವಾಗಿದೆ.
ಸೂರ್ಯಕಾಂತಿ (ಮಳೆ ಆಶ್ರಿತ) ಹಾಗೂ ಸೂರ್ಯಕಾಂತಿ (ನೀರಾವರಿ) ಬೆಳೆಯನ್ನು ನಮೂದಿಸಲು ಆಗಸ್ಟ್ ತಿಂಗಳ 14ನೇ ತಾರೀಖು ಕೊನೆಯ ದಿನವಾಗಿದ್ದು, ಅಂತಿಮ ಸಮಯದಲ್ಲಿ ಜನದಟ್ಟಣೆಯಾಗುವ ಸಾಧ್ಯತೆಯಿರುವುದರಿಂದ ರೈತರು ಬೆಳೆ ವಿಮೆಗೆ ನೋಂದಾಯಿಸಲು ಕೊನೆಯ ದಿನದವರೆಗೆ ಕಾಯದೆ ಮುಂಚಿತವಾಗಿಯೇ ಅವರವರ ವ್ಯಾಪ್ತಿಯಲ್ಲಿ ಬರುವ ಬ್ಯಾಂಕ್, ಸಹಕಾರ ಸಂಘಗಳಲ್ಲಿ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ / ಖಾತೆ /ಪಾಸ್ ಪುಸ್ತಕ/ ಕಂದಾಯ ರಶೀದಿ ಹಾಗೂ ಆಧಾರ ಸಂಖ್ಯೆ ಮಾಹಿತಿಯನ್ನು ನೀಡಿ, ವಿಮಾ ಕಂತನ್ನು ಪಾವತಿಸಿ ಈ ಯೋಜನೆಯಡಿಯಲ್ಲಿ ನೋಂದಾಯಿಸಲು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.



