ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ಲಾಕ್ಡೌನ್ ಸಡಿಲಿಕೆ ನಂತರ ಜೆಲ್ಲಿ, ಎಂ-ಸ್ಯಾಂಡ್ ಹಾಗೂ ಸಿಮೆಂಟ್ ದರ ಒಮ್ಮೆಲೆ ಏರಿಕೆಯಾಗಿರುವುದರಿಂದ ಕಾಮಗಾರಿ ನಿರ್ವಹಿಸಲು ಕಷ್ಟವಾಗುತ್ತಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಬೆಲೆ ಇಳಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ದಾವಣಗೆರೆ ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹೆಚ್.ಜಯಣ್ಣ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ವಾರದಿಂದ ಕಾಮಗಾರಿ ಪ್ರಾರಂಭ ಮಾಡಲು ಅನುಮತಿ ನೀಡಲಾಗಿದೆ ಆದರೆ ಸಾಮಗ್ರಿಗಳ ಬೆಲೆ ಹೆಚ್ಚಳವಾಗಿರುವುದರಿಂದ ಕಾಮಗಾರಿ ಪ್ರಾರಂಭಿಸಲು ಯೋಚನೆ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಲಾಕ್ಡೌನ್ ಮುನ್ನ 20 ಎಂಎಂ ಜೆಲ್ಲಿ 1 ಅಡಿಗೆ 28 ರಿಂದ 30 ರೂ ಹಾಗೂ 40 ಎಂ ಎಂ ಜೆಲ್ಲಿ 1 ಅಡಿಗೆ 25 ರೂ, ಎಂ-ಸ್ಯಾಂಡ್ ಒಂದು ಟನ್ ಗೆ 900 ರೂ ಹಾಗೂ ಸಿಮೆಂಟ್ 1 ಚೀಲಕ್ಕೆ 300 ರೂ ಮಾರುಕಟ್ಟೆಯಲ್ಲಿ ಲಭ್ಯವಿತ್ತು. ಆದರೆ ಲಾಕ್ಡೌನ್ ತೆರವಾದ ಬಳಿಕ ಜೆಲ್ಲಿಗೆ 50 ರೂ, ಎಂ-ಸ್ಯಾಂಡ್ 1200 ಹಾಗೂ ಸಿಮೆಂಟ್ 430 ರಂತೆ ದರ ಏರಿಕೆಯಾಗಿದೆ ಎಂದರು.
ಈ ಬಗ್ಗೆ ಪ್ರಶ್ನಿಸಿದರೆ ದಾವಣಗೆರೆ ತಾಲ್ಲೂಕು ಮತ್ತು ಹರಪನಹಳ್ಳಿ ಕ್ರಷರ್ ಮಾಲೀಕರು ತೆರಿಗೆ ನೆಪ ಹೇಳಿದರೆ, ಸಿಮೆಂಟ್ ಕಂಪನಿಗಳ ವಿತರಕರು ಲಾಕ್ ಡೌನ್ ನಷ್ಟ ಹೇಳಿ ದರ ಏರಿಕೆಯ ಉತ್ತರ ನೀಡುತ್ತಿದ್ದಾರೆ. ಆದರೆ ಈ ಬಗ್ಗೆ ಯಾರೊಂದಿಗೂ ಸಭೆ ಮಾಡಿಲ್ಲ ಯಾರನ್ನೂ ಹೇಳದೆ ಕೇಳದೆ ಈ ರೀತಿ ಏಕಾಏಕಿ ದರ ಏರಿಕೆ ಮಾಡಿದರೆ ಗುತ್ತಿಗೆದಾರರು ಸಾಮಗ್ರಿ ತೆಗೆದುಕೊಳ್ಳಲು ಕಷ್ಟವಾಗುತ್ತದೆ.ಹೀಗಾಗಿ ಈ ಕೂಡಲೇ ಕ್ರಷರ್ ಮಾಲೀಕರು ಮತ್ತು ಸಿಮೆಂಟ್ ಕಂಪನಿಯ ವಿತರಕರೊಂದಿಗೆ ಸಭೆ ನಡೆಸಿ ಈ ಮೊದಲಿನಂತೆ ದರ ವಿಧಿಸಲು ಆದೇಶಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆರ್.ವಿರೂಪಾಕ್ಷಪ್ಪ,ಕೆ.ಶಿವಕುಮಾರ್,ಹೆಚ್ ಚಂದ್ರಪ್ಪ, ಡಿ. ಈಶ್ವರ್, ಎ.ಎಂ ರಾಮಣ್ಣ ಮತ್ತಿತರರಿದ್ದರು.



