ಡಿವಿಜಿ ಸುದ್ದಿ, ದಾವಣಗೆರೆ: ಕರ್ನಾಟಕದಲ್ಲಿ ಹರಿದಾಸ ಪರಂಪರೆಗೆ ಸುಮಾರು 500 ವರ್ಷಗಳ ಭವ್ಯ ಇತಿಹಾಸವಿದ್ದು, ಕನಕದಾಸರು ಮತ್ತು ಪುರಂಧರದಾಸರು ವೈಚಾರಿಕ ಸಂತರಾಗಿ ಕಾಣುತ್ತಾರೆ ಎಂದು ಮಾಗನೂರು ಬಸಪ್ಪ ಶಾಲೆಯ ಪ್ರಾಥಮಿಕ ಶಾಲಾ ವಿಭಾಗ ಮುಖ್ಯಸ್ಥರು ಶಿರಗಂಬಿ ಅಭಿಪ್ರಾಯಪಟ್ಟರು.
ನಗರದ ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಬೇರುರಿದ ಮೇಲು-ಕೀಳು, ಜಾತಿ-ಮತ ಪಂಥ ಮೀರಿ ಬೆಳೆದವರು ಕನಕ ದಾಸರು. ಭಕ್ತಿ ಪರಂಪರೆಯ ಕಾಲದಲ್ಲಿ ಧೃವತಾರೆಯಂತೆ ಅವತರಿಸಿದ ಕನಕದಾಸರು ತಮ್ಮ ವೈಚಾರಿಕ ಮತ್ತು ಪ್ರತಿಭಟನಾ ನೆಲೆಗಟ್ಟಿನಿಂದ ದಾಸ ಸಾಹಿತ್ಯ ಮೂಲಕ ಕನ್ನಡ ಸಾಹಿತ್ಯಕ್ಕೆ ವೈಚಾರಿಕ ಚಿಂತನೆ ನೀಡಿದರು ಎಂದರು.
ಕನಕ ದಾಸರು ಆದಿಗುರು ಶ್ರೀ ಶಂಕರಾಚಾರ್ಯರು ಪ್ರತಿಪಾದಿಸಿರುವ ಆದೈತ ತತ್ವ ಸಾರವನ್ನ ಅನುಸರಿಸಿದರು. ನಾನು, ನನ್ನದೆಂಬ ಮೋಹ, ಪರಬ್ರಹ್ಮ, ಬದುಕು, ಜೀವನಸಾರವನ್ನು ಬೋಧಿಸಿ ಮನುಜಕುಲ ಒಂದೇ ಎಂಬ ತತ್ವ ಸಾರಿದವರು ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಷಣ ಮಾಡಿದ ಮಾಗನೂರು ಬಸಪ್ಪ ಪ್ರೌಢಶಾಲೆ ಶಿಕ್ಷಕಿ ಕುಸುಮ, ಕನಕದಾಸರ ಬದುಕು ನಮ್ಮೆಲ್ಲರ ಬದುಕಿಗೆ ಆದರ್ಶದ ಹೊತ್ತಿಗೆ. ಅದನ್ನು ಬಿಡಿಸಿ ಎಣಿಸಿ ಪೋಣಿಸಿದ ಪದಗಳನ್ನು ಅಥೈಸಿಕೊಂಡರಷ್ಟೇ ನಾವು ಯಾರು ಎಂದು ನಮಗೆ ಅರಿವಾಗುವುದು.
ಕನಕದಾಸರು ಯಾವುದೋ ಒಂದು ಜಾತಿ ಇಲ್ಲವೇ ಜನಾಂಗದ ಅಭಿಮಾನಕ್ಕೆ, ಆದರಕ್ಕೆ ಮಾತ್ರವೇ ಕಟ್ಟು ಬೀಳಬೇಕಾದ ಕವಿಗಳ ಸಾಲಿಗೆ ಸೇರಿದವರಲ್ಲ. ಕನಕ ಕನ್ನಡ ಭಾಷಾ ಚಿಂತಕ, ಕನ್ನಡಿಗರ ಬದುಕುಗಳ ನಡುವಿನ ಬಿಕ್ಕಟ್ಟೊಳೊಳಗಿಂದ ಹುಟ್ಟಿದ, ನೊಂದ ಬದುಕುಗಳ ನಡುವಿನಿಂದ ಮೇಲೆದ್ದು ಬಂದ ಸಂತ. ಕನಕದಾಸರು ದಯಾ, ಮಥುರಾ, ಕಾಶಿ, ದ್ವಾರಕಾ, ಮೊದಲಾಗಿ ರಾಜಸ್ಥಾನ, ತಮಿಳುನಾಡು, ಆಂಧ್ರವನ್ನು ಸುತ್ತಿದರು ಎಂದರು.
ಯಾವುದೇ ಮತಕ್ಕೆ ಕಟ್ಟು ಬೀಳದೆ ಸರ್ವ ಮತಗಳ ಒಳಿತನ್ನು ಪಡೆದು ಸ್ವಂತ ವ್ಯಕ್ತಿತ್ತ್ವವನ್ನು ಜನಹಿತಕ್ಕಾಗಿ ಬೆಳೆಸಿಕೊಂಡು ಬಾಳಿದವರು, ಉಳಿದವರೂ, ಬಾಳುವಂತೆ ಹೇಳಿದವರು. ದಬ್ಬಾಳಿಕೆಗೆ ಒಳಗಾದವರನ್ನು ಮೇಲೆತ್ತಲು ಪ್ರಯತ್ನಿಸಿದರು. ಕನಕದಾಸರನ್ನು ವ್ಯಕ್ತಿಯನ್ನಾಗಿ ಭಾವಿಸದೆ ಪರಮ ಹರಿಭಕ್ತ ಎಂದಾಗ ನಮ್ಮಲ್ಲೂ ಆ ದೈವೀಕ ಭಾವ ಜಾಗೃತ ವಾಗುವುದು. ಪರಮ ವೈಷ್ಣವನೆನಿಸಿದ ಈ ದಾಸ ಶ್ರೇಷ್ಟನನ್ನು ಮನುಕುಲದ ಪ್ರತಿನಿಧಿಯಗಿ, ಆದರ್ಶಗಳ ಭಂಡಾರಿಯಾಗಿ ಕಾಣಬೇಕಿದೆ ಎಂದರು.
ಕಾರ್ಯಕ್ರಮದ ಸ್ವಾಗತವನ್ನು ಅನ್ನಪೂರ್ಣ ಎಚ್.ಎಂ, ವಂದನಾರ್ಪಣೆಯನ್ನು ರೂಪ, ನಿರೂಪಣೆಯನ್ನು ಪದ್ಮಜ ಎಂ ನಿರ್ವಹಿಸಿದರು. ಸಹಾಯಕ ಪ್ರಾಧ್ಯಾಪಕಿ ಕವಿತಾ ಜಿ.ಎಸ್ ಉಪಸ್ಥಿತರಿದ್ದರು.



