ಪೂರ್ವ – ಪಶ್ಚಿಮ ಉತ್ತರ – ದಕ್ಷಿಣ
ಕರುನಾಡಿನ ಜಿಲ್ಲೆಗಳಿಗಿದುವೆ ಸೇತುವೆ
ಮಲೆನಾಡು – ಬಯಲು ಸೀಮೆಯ
ಸಿರಿ ಸೊಬಗಿನ ಸಂಸ್ಕೃತಿಯ ಚೆಲುವೆ.
ಜಗ ಜಟ್ಟಿ ಮಲ್ಲರ ಜಂಗೀ ಕುಸ್ತಿಯಿಲ್ಲಿ
ಟಗರು ಕಾಳಗದ ಮೋಜು ಮಸ್ತಿಯಿಲ್ಲಿ
ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹವಿಲ್ಲಿ
ದುರ್ಗಾಂಬಿಕ ದೇವಿಯ ಪವಾಡ ಕ್ಷೇತ್ರವಿಲ್ಲಿ.
ತುಂಗಭದ್ರಾ ನದಿ ಹರಿಯುವಿಕೆಯ ಒಡಲು
ಜಗರಕ್ಷಿಸೋ ಹರಿಹರರ ನೆಲೆಯ ಮಡಿಲು
ಖಾರ ಮಂಡಕ್ಕಿ ಮೆಣಸಿನಕಾಯಿ ಘಮಲು
ಗರಿಗರಿ ನವನೀತ ದೋಸೆ ರುಚಿಯಮಲು.
ಕನ್ನಡ ಸುಲಿದ ಬಾಳೆಯ ಹಣ್ಣಿನಂದದೆಂದ
ಮಹಾಲಿಂಗ ರಂಗ ಕವಿಯ ಜನ್ಮಭೂಮಿ
ಜ್ಞಾನ ವಿಜ್ಞಾನ ತಂತ್ರಜ್ಞಾನ ವೈದ್ಯಕೀಯದ
ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಕರ್ಮಭೂಮಿ.
ಏಷ್ಯಾದ ಎರಡನೇ ದೊಡ್ಡ ಕೆರೆಯಿರುವುದಿಲ್ಲಿ
ಭಾರತದ ದೊಡ್ಡ ಗಾಜಿನ ಮನೆಯಿರುವುದಿಲ್ಲಿ
ಕದಂಬ ಗಂಗ ಚಾಲುಕ್ಯ ಹೊಯ್ಸಳರ ಕಲೆಯಿಲ್ಲಿ
ದುಷ್ಟಶಕ್ತಿಗಳ ಬಿಡಿಸೋ ಅಜ್ಜಯ್ಯನ ನೆಲೆಯಿಲ್ಲಿ.
ಚಿಕ್ಕಮಗಳೂರು ಶಿವಮೊಗ್ಗ ಹಾವೇರಿ ಬಳ್ಳಾರಿ
ಚಿತ್ರದುರ್ಗ ಜಿಲ್ಲೆಗಳ ಗಡಿರೇಖೆಯು ನಮಗಿಲ್ಲಿ
ಕದಂಬ ಗಂಗ ಚಾಲುಕ್ಯ ಹೊಯ್ಸಳ ರಾಷ್ಟ್ರಕೂಟ
ಪಾಳೇಗಾರರ ಗತವೈಭವ ಕುರುಹುಗಳಿರುವುದಿಲ್ಲಿ.
ಜಿ.ಹೆಚ್.ಪಟೇಲರು ಧೀರೇಂದ್ರ ಗೋಪಾಲರಂತಹ
ಮಾತಿನಮಲ್ಲರ ನಾಡಿಗೆ ನೀಡಿದ್ದು ನಮ್ಮಯ ಜಿಲ್ಲೆ
ದಣಿದು ಬಂದ ಜನ ಜಾನುವಾರುಗಳಿಗೆ ನೀರುಣಿಸಿ
ದಣಿವಾರಿಸಿದ ದವಣಕೆರೆ ಹೆಸರಿನ ನಮ್ಮಯ ಜಿಲ್ಲೆ.
ಶಿವಮೂರ್ತಿ.ಹೆಚ್. ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಜಗದ್ಗುರು ರೆಸಿಡೆನ್ಸಿಯಲ್ ಸ್ಕೂಲ್
ಅನುಭವಮಂಟಪ, ದಾವಣಗೆರೆ.
ದೂ.ಸಂ.9740050150.



