ಡಿವಿಜಿ ಸುದ್ದಿ: ದಾವಣಗೆರೆ: ನಗರದ ಹೈಸ್ಕೂಲ್ ಮೈದಾನದಲ್ಲಿ ತಾತ್ಕಾಲಿಕವಾಗಿ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ನಿರ್ಮಾಣ ವಿಚಾರ ಈಗ ರಾಜಕೀಯ ಬಣ್ಣ ಪಡೆದುಕೊಂಡಿದೆ.
ಹೈಸ್ಕೂಲ್ ಮೈದಾನದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡುವುದರಿಂದ ಕ್ರೀಡಾಪಟುಗಳಿಗೆ, ಹಿರಿಯನಾಗರಿಕರಿಗೆ, ವಾಯು ವಿಹಾರಿಗಳಿಗೆ ತೊಂದರೆ ಉಂಟಾಗುತ್ತದೆ ಎಂದು ಜಿಲ್ಲಾ ಕ್ರೀಡಾಪಟುಗಳ ಸಂಘ ವಿರೋಧ ವ್ಯಕ್ತಪಡಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿ ಸುದ್ದಿಗೋಷ್ಠಿ ನಡೆಸಿದ ದಾವಣಗೆರೆ ಉತ್ತರ ವಿಧಾನಸಭೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು, ಜಿಲ್ಲಾ ಕ್ರೀಡಾಪಟುಗಳ ಸಂಘದ ದ್ವಂದ್ವ ನಿಲುವಿಗೆ ವಿರೋಧ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಲಿಕೆ ಸದಸ್ಯ ಅಜಯ್ ಕುಮಾರ್, ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರಿಗೆ ಈ ಹಿಂದೆ ಶಾಮನೂರು ಶಿವಶಂಕರಪ್ಪ ಹಳೇ ಬಸ್ ನಿಲ್ದಾಣ ವನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಿದ್ದಾಗ ಯಾವುದೇ ಪರಿಸರ ಮಾಲಿನ್ಯ ಉಂಟಾಗಿರಲಿಲ್ಲವೇ..? ಇದಲ್ಲದೆ ಆಟದ ಮೈದಾನದಲ್ಲಿ ಶಾಶ್ವತ ಟೆನ್ನಿಸ್ ಕೋರ್ಟ್ ನೆಪದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಲು ಅವಕಾಶ ಕೊಟ್ಟಿದ್ದಾರೆ. ಆಗ ದಿನೇಶ್ ಶೆ್ಟ್ಟಿ ಅವರಿಗೆ ಕ್ರೀಡಾಪಟುಗಳ ಮೇಲಿನ ಕಳಕಳಿ ಎಲ್ಲಿ ಹೋಗಿತ್ತು ಎಂದು ಪ್ರಶ್ನೆ ಮಾಡಿದರು.
ಇನ್ನು ಹಳೇ ಬಸ್ ನಿಲ್ದಾಣವನ್ನು ಹೈಸ್ಕೂಲ್ ಮೈದಾನಕ್ಕೆ ಸ್ಥಳಾಂತರಿಸುವಾಗ ಕೆ. ದಿನೇಶ್ ಶೆಟ್ಟಿ ಅವರೇ ಅನುಮತಿ ಪತ್ರ ಕೊಟ್ಟಿದ್ದಾರೆ. ಬಹುಶಃ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಶಾಮನೂರು ಶಿವಶಂಕರಪ್ಪ ಹೆಸರಿನಲ್ಲಿ ಇಲ್ಲದ ಕಾರಣ ವಿರೋಧ ವ್ಯಕ್ತಪಡಿಸುತ್ತಿರಬೇಕು ಎಂದರು.
ಹೈಸ್ಕೂಲ್ ಮೈದಾನದಲ್ಲಿ ಕೆಎಸ್ ಆರ್ ಟಿಸಿಯ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಾಣ ಮಾಡಲು ಬೇರೆ ಕಡೆ ಜಾಗ ಇಲ್ಲ. ಖಾಸಗಿ ಬಸ್ ನಿಲ್ದಾಣ ಮತ್ತು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಅಕ್ಕಪಕ್ಕದಲ್ಲಿ ಇರುವುದರಿಂದ ಸಾರ್ವಜನಿಕರು ಅನುಕೂಲವಾಗುತ್ತದೆ. ಹೀಗಾಗಿ ತಾತ್ಕಲಿಕವಾಗಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಂಗನಗೌಡರು,ವಸಂತ್ ಕುಮಾರ್,ಕೆ.ಎನ್. ಹನುಮಂತಪ್ಪ,ಶಿವರಾಜ್ ಪಾಟೀಲ್,ಬಸವರಾಜಯ್ಯ, ರಾಜೇಶ್,ಸುರೇಶ್,ಪ್ರಕಾಶ್ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.



