ಡಿವಿಜಿ ಸುದ್ದಿ, ದಾವಣಗೆರೆ: ಸ್ಥಳೀಯ ಶಾಸಕರು, ಕಾರ್ಪೊರೇಟರ್ ಹಾಗೂ ಧಾರ್ಮಿಕ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇನ್ನೆರಡು ತಿಂಗಳಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ನಗರದ ಅಖ್ತರ್ರಾಜಾ ಸರ್ಕಲ್ ರಿಂಗ್ ರೋಡ್ ರಸ್ತೆಯಿಂದ ಅಹಮದ್ ನಗರ, ಭಾಷಾ ನಗರ, ಆಜಾದ್ ನಗರ ಮುಖ್ಯರಸ್ತೆಯ ಅಗಲೀಕರಣದ ಸಂಬಂಧ ಜಿಲ್ಲಾಡಳಿತ ತಂಡದೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು.

ಅರ್ಧಕ್ಕೆ ನಿಂತಂತಹ ಸ್ಮಾರ್ಟ್ಸಿಟಿ ಕೆಲಸಗಳಿಗೆ ಚಾಲನೆ ನೀಡುವ ದೃಷ್ಠಿಯಿಂದ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಅತಿಕ್ರಮಣ, ಒತ್ತುವರಿಯನ್ನು ಸರಿಪಡಿಸಿ ಜೊತೆಗೆ ತೆರವುಗೊಳಿಸುವುದರ ಮೂಲಕ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
ಸ್ಥಳ ಪರೀಶಿಲನೆ ನಂತರ ಮೇಯರ್ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತದೆ. ಈಗಾಗಲೇ ಮುಖಂಡರು, ಧಾರ್ಮಿಕ ಸಮಿತಿಯವರು ರಸ್ತೆ ಅಗಲೀಕರಣಕ್ಕೆ ಒತ್ತುವರಿ ತೆರವುಗೊಳಿಸಲು ನಮ್ಮಗಳ ಅಡ್ಡಿಯಿಲ್ಲ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಇದೊಂದು ಮಾದರಿ ರಸ್ತೆಯಾಗಬೇಕು ಎನ್ನುವ ಮಹತ್ವಾಕಾಂಕ್ಷೆ ನಮ್ಮದಾಗಿದೆ. ಇದಕ್ಕೆ ಎಲ್ಲರೂ ಸಹಕರಿಸಿದ್ದಾರೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಕೊರೊನಾ ಹಿನ್ನೆಲೆಯಲ್ಲಿ ಅನೇಕ ಚಟುವಟಿಕೆಗಳು ನಿಂತಿದ್ದವು. ಆದರೆ ಇದೀಗ ಈ ಎಲ್ಲ ಚಟುವಟಿಕೆಗಳು ಹಾಗೂ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗಿವೆ. ನಮಗೂ ಸಾಕಷ್ಟು ನಿರ್ದೇಶನ ಹಾಗೂ ಕಾಲಮೀತಿ ಇದೆ. ಈ ಕಾಲಮಿತಿಯೊಳಗೆ ಭೌತಿಕತೆಯೊಂದಿಗೆ ಆರ್ಥಿಕ ಪ್ರಗತಿ ಸಾಧಿಸಬೇಕಾಗಿದೆ ಎಂದರು.
ಮೇಯರ್ ಬಿ.ಜಿ.ಅಜಯ್ ಕುಮಾರ್ ಮಾತನಾಡಿ, ಸುಮಾರು ಮೂವತ್ತು ವರ್ಷದಿಂದ ರಸ್ತೆ ಅಗಲೀಕರಣವಾಗದ ಹಿನ್ನೆಲೆಯಲ್ಲಿ ಈ ಭಾಗದ ಧಾರ್ಮಿಕ ಮುಖಂಡರು ಹಾಗೂ ಸಾಕಷ್ಟು ಜನರು ಮನವಿ ಸಲ್ಲಿಸಿದ್ದರು. ಆದಷ್ಟು ಬೇಗ ರಸ್ತೆ ತೆರವುಗೊಳಿಸಿ 60 ಅಡಿ ರಸ್ತೆ ನಿರ್ಮಿಸಬೇಕು ಎಂಬುದು ಅವರ ಒತ್ತಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿನ ಜನರ ಓಡಾಟಕ್ಕೆ ರಸ್ತೆ ಅಭಿವೃದ್ಧಿಪಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಮಹಾನಗರಪಾಲಿಕೆ ಇಂಜಿನಿಯರ್ಸ್ಗಳು ಸರ್ವೇ ಮಾಡುತ್ತಿದ್ದಾರೆ. ಸರ್ವೇ ಮಾಡಿದ ನಂತರ ಯಾರ ಜಾಗ ಎಷ್ಟು ತೆರವುಗೊಳಿಸಬೇಕೆಂದು ಚರ್ಚಿಸಿ ಶಾಸಕರು ಹಾಗೂ ಡಿಸಿ ಅವರೊಂದಿಗೆ ಸೇರಿಕೊಂಡು ಕಾನೂನಿನ ಅಡಿಯಲ್ಲಿ ಏನಾದ್ರೂ ಅನುಕೂಲ ಕಲ್ಪಿಸುವ ಅವಕಾಶವಿದ್ದರೆ ವ್ಯವಸ್ಥೆ ಮಾಡಲಾಗುವುದು ಎಂದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.



