ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ನಗರದ ಭಾಷಾನಗರದಲ್ಲಿ ಇಂದು ಕೊರೊನಾ ಹೊಸ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆ ಲಾಕ್ಡೌನ್ ಸಡಿಲಿಕೆಯನ್ನು ಈ ಕ್ಷಣದಿಂದ ಜಾರಿಗೆ ಬರುವಂತೆ ಪಾಲಿಕೆ ವ್ಯಾಪ್ತಿಯ 45 ವಾರ್ಡುಗಳಲ್ಲಿ ಹಿಂಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆಯಷ್ಟೇ ಜಿಲ್ಲೆ ಗ್ರೀನ್ ಝೋನ್ಗೆ ಪ್ರವೇಶವಿತ್ತು. ನಗರದಲ್ಲಿ ಇಂದು ಮತ್ತೊಂದು ಪ್ರಕರಣ ಪತ್ತೆ ಹಿನ್ನೆಲೆ ಅಂಗಡಿ ಮುಗ್ಗಟು ತೆರೆಯಲುನೀಡಿದ್ದ ಸಡಿಲಿಕೆಯನ್ನು ವಾಪಸ್ ಪಡೆಯಲಾಗಿದೆ ಎಂದು ತಿಳಿಸಿದರು.
ಭಾಷಾನಗರದ 35 ವರ್ಷದ ಮಹಿಳೆಯೋರ್ವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಬಂದಿದ್ದು, ರೋಗಿ ಸಂಖ್ಯೆ 533 ಆಗಿದ್ದಾರೆ. ನಗರ ಆರೋಗ್ಯ ಕೇಂದ್ರದಲ್ಲಿ ಶುಶ್ರೂಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇವರನ್ನು ಈಗಾಗಲೇ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಆರಂಭಿಸಲಾಗಿದೆ ಎಂದರು.
ಹಾಗೂ ಈ ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 20 ಜನರನ್ನು ಹೋಟೆಲ್ ಒಂದರಲ್ಲಿ ಐಸೋಲೇಷನ್ನಲ್ಲಿ ಇಡಲಾಗಿದೆ. ಇವರ ಸಂಪರ್ಕದಲ್ಲಿದ್ದ 35 ಜನರ ಗಂಟಲು ದ್ರವ ಮಾದರಿಯನ್ನು ಇಂದು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಇವರು ಕೆಲಸ ಮಾಡುತ್ತಿದ್ದ ನಗರ ಆರೋಗ್ಯ ಕೇಂದ್ರವನ್ನು ಬಂದ್ ಮಾಡಲಾಗಿದೆ.
ಕಂಟೈನ್ಮೆಂಟ್ ಮತ್ತು ಬಫರ್ ಝೋನ್ ಗುರುತಿಸುವಿಕೆ : ಈ ಮಹಿಳೆ ವಾಸಿಸುತ್ತಿದ್ದ ಮನೆಯನ್ನು ಎಪಿಸೆಂಟರ್ ಎಂದು ಗುರುತಿಸಿ ಈ ಎಪಿಸೆಂಟರ್ನ 100 ಮೀಟರ್ ವ್ಯಾಪ್ತಿ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಿ, ಈ ಪ್ರದೇಶವನ್ನು ಅಗತ್ಯ ವಸ್ತುಗಳು ಮತ್ತು ವೈದ್ಯಕೀಯ ಸೇವೆ ಹೊರತುಪಡಿಸಿ ಸಂಪೂರ್ಣ ಸೀಲ್ಡೌನ್ ಮಾಡಲಾಗುವುದು.
ನಾಳೆಯಿಂದಲೇ ಸಕ್ರಿಯ ಸರ್ವೆಲೆನ್ಸ್ ನಡೆಸಲಾಗುವುದು. ಹಾಗೂ ಎಪಿಸೆಂಟರ್ನಿಂದ 5 ಕಿ.ಮೀ ವ್ಯಾಪ್ತಿ ಪ್ರದೇಶವನ್ನು ಬಫರ್ ಝೋನ್ ಎಂದು ಗುರುತಿಸಿದ್ದು, ಇಲ್ಲಿಯೂ ಸಹ ಸರ್ವೆಲೆನ್ಸ್ ನಡೆಯಲಿದೆ. ಪ್ರಸ್ತುತ ಕ್ವಾರೆಂಟೈನ್ ಮಾಡಲು ನಗರದಲ್ಲಿ ಹೋಟೆಲ್ಗಳಲ್ಲಿ 740 ರೂಂಗಳನ್ನು ಕಾಯ್ದಿರಿಸಲಾಗಿದೆ.
ಈ ಮಹಿಳೆಯ ಸೆಕೆಂಡರಿ ಕಾಂಟಾಕ್ಟ್ಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚಲಾಗುವುದು. ಈ ಮಹಿಳೆ ಏ.23 ರಂದು ಮಹಿಳೆಯೋರ್ವರಿಗೆ ಹೆರಿಗೆ ಮಾಡಿಸಿದ್ದು, ನಂತರ ತಮಗೆ ಸುಸ್ತು ಮತ್ತು ಸ್ವಲ್ಪ ಜ್ವರ ಕಾಣಿಸಿಕೊಂಡಿದೆ ಎಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಾಗ ತಿಳಿಸಿದ್ದಾರೆ. ಆದ ಕಾರಣ ಆ ಮಹಿಳೆಯನ್ನೂ ಪತ್ತೆ ಹಚ್ಚಿ ಅವರನ್ನೂ ಪರೀಕ್ಷೆಗೆ ಒಳಪಡಿಸಿ ಕ್ರಮ ಕೈಗೊಳ್ಳಲಾಗುವುದು. ಹಾಗೂ ಸೋಂಕಿತ ಮಹಿಳೆಯ ಅಕ್ಕನ ಮನೆ ನಿಟುವಳ್ಳಿಯಲ್ಲಿ ಇದ್ದು ಸೋಂಕಿತಳ ಮಗ ಅಲ್ಲಿಗೆ ಹೋಗಿ ಬಂದಿದ್ದಾನೆ ಎನ್ನಲಾಗಿದ್ದು ಅಲ್ಲಿರುವ ಅವರ ಸಂಬಂಧಿಕರನ್ನೂ ಪರೀಕ್ಷಿಸಿ ಕ್ರಮ ವಹಿಸಲಾಗುವುದು ಎಂದರು.
ಇನ್ಸಿಡೆಂಟ್ ಕಮಾಂಡರ್ ನೇಮಕ : ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ರನ್ನು ಈ ಕಂಟೈನ್ಮೆಂಟ್ ಝೋನ್ ನಿರ್ವಹಣೆಗಾಗಿ ಇನ್ಸಿಡೆಂಟ್ ಕಮಾಂಡರ್ ಎಂದು ನೇಮಕ ಮಾಡಲಾಗಿದ್ದು ನಿಯಮಾನುಸಾರ ಇವರು ಇಲ್ಲಿ ಕ್ರಮ ಕೈಗೊಳ್ಳುವರು. ಕಂಟೈನ್ಮೆಂಟ್ ಝೋನ್ನಲ್ಲಿನ ಪ್ರತಿ ಮನೆ ಸರ್ವೇ ಮಾಡಲಾಗುವುದು. ಹಾಗೂ ಏರಿಯಾ ಡಿಸ್ಇನ್ಫೆಕ್ಷನ್ ಕೆಲಸ ಮಾಡಲಾಗುವುದು.
ಈ ಪ್ರದೇಶಗಳಿಗೆ ಅಗತ್ಯ ವಸ್ತುಗಳು, ವೈದ್ಯಕೀಯ ಸೇವೆ ಹೊರತುಪಡಿಸಿ ಯಾವುದೇ ಖಾಸಗಿ ವಾಹನಗಳ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಪಾಲಿಕೆ ವ್ಯಾಪ್ತಿಯ 45 ವಾರ್ಡುಗಳು ಸೇರಿದಂತೆ ಕಲ್ಪನಹಳ್ಳಿ, ಪುಟಗನಾಳ್, ಬೇತೂರು, ಬೂದಾಳ್, ದೇವಿಕೆರೆ ಹೀಗೆ ನಗರ ವ್ಯಾಪ್ತಿಗೊಳಪಡುವ ಕೆಲವು ಗ್ರಾಮಗಳಿಗೂ ನಿನ್ನೆ ಘೋಷಿಸಿದ್ದ ಸಡಿಲಿಕೆಯನ್ನು ನಿರ್ಬಂಧಿಸಿ ಅಗತ್ಯ ವಸ್ತುಗಳ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಲಾಗುವುದು.
ಮನವಿ : ಈ ಸೋಂಕಿತ ಮಹಿಳೆಯಿಂದ ಕಳೆದ 15 ದಿನಗಳಿಂದ ಚಿಕಿತ್ಸೆ, ಶುಶ್ರೂಷೆ ಪಡೆದವರು ಅಥವಾ ಸಂಪರ್ಕಕ್ಕೆ ಬಂದವರು ಜಿಲ್ಲಾಸ್ಪತ್ರೆಗೆ ಬಂದು ಪರೀಕ್ಷೆಗೆ ಒಳಗಾಗುವಂತೆ ಈ ಮೂಲಕ ಮನವಿ ಮಾಡಿದರು.
ಕೃಷಿ ಚಟುವಟಿಕೆಗಾಗಿ ವಿವಿಧ ತಾಲ್ಲೂಕು ಮತ್ತು ಹಳ್ಳಿಗಳಿಂದ ದಾವಣಗೆರೆಗೆ ರೈತರು ಬರುವುದನ್ನು ನಿಲ್ಲಿಸಿದರೆ ಒಳಿತು. ಇಲ್ಲಿ ಸೋಂಕಿರುವುದರಿಂದ ಆದಷ್ಟು ತಾಲ್ಲೂಕು ಕೇಂದ್ರಗಳಲ್ಲೇ ಗೊಬ್ಬರ, ಬೀಜ, ಪರಿಕರ ಕೊಳ್ಳಬೇಕು. ಕೃಷಿಕರಿಗೆ ಸಹಕಾರಿಯಾಗುವಂತೆ ದಾವಣಗೆರೆಯಲ್ಲಿ ಅಗ್ರಿ ವಾರ್ ರೂಂ ಮಾಡುವ ಚಿಂತನೆ ಮಾಡಲಾಗುತ್ತಿದ್ದು, ಇದರ ಮೂಲಕ ಕೃಷಿಕರ ಮನೆ ಬಾಗಿಲಿಗೆ ಕೃಷಿ ಚಟುವಟಿಕೆಗೆ ಸಂಬಂಧಿಸಿದ ವಸ್ತುಗಳನ್ನು ತಲುಪಿಸುವ ಬಗ್ಗೆ ಯೋಚಿಸಲಾಗುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ, ಅಗತ್ಯ ಸೇವೆ ಹೊರತುಪಡಿಸಿ ಎಲ್ಲ ಚಟುವಟಿಕೆಗಳನ್ನು ಕಂಟೈನ್ಮೆಂಟ್ ಮತ್ತು ಬಫರ್ ಝೋನ್ಗಳಲ್ಲಿ ನಿರ್ಬಂಧಿಸಲಾಗುವುದು. ನಗರದಲ್ಲಿರುವ 10 ಚೆಕ್ಪೋಸ್ಟ್ಗಳು 24*7 ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸಲಿವೆ. ಯಾರೂ ಕೂಡ ಅನಾವಶ್ಯಕವಾಗಿ ಓಡಾಡಬಾರದು. ಒಂದು ಪಕ್ಷ ಓಡಾಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ ಇದ್ದರು.