ಡಿವಿಜಿ ಸುದ್ದಿ, ದಾವಣಗೆರೆ : ಸ್ಲಂ ನಿವಾಸಿಗಳಿಗೆ ಏ.14 ರವರೆಗೆ ಒಂದು ಲೀಟರ್ ಹಾಲು ನೀಡಲು ರಾಜ್ಯ ಸರ್ಕಾರ ಆದೇಶಿಸಿದ್ದು ಎಲ್ಲಾ ಸ್ಲಂ ನಿವಾಸಿಗಳಿಗೆ ಸರ್ಮಪಕವಾಗಿ ಪೂರೈಕೆಯಾಗಬೇಕು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್. ಈಶ್ವರಪ್ಪ ಹೇಳಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಮಾಯಕೊಂಡದ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕೊರೊನಾ-19 ನಿಯಂತ್ರಣ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ,ಸ್ಲಂ ನಿವಾಸಿಗಳ ಕುಂಟುಬ ಮತ್ತು ಅಲೆಮಾರಿಗಳಿಗೆ ಏ. 14 ರ ವರೆಗೆ ರಾಜ್ಯ ಆದೇಶದಂತೆ ಕುಂಟುಂಬ ಒಂದಕ್ಕೆ ಒಂದು ಲೀಟರ್ ಹಾಲು ಪೂರೈಕೆಯಾಗಬೇಕು ಎಂದು ಹೇಳಿದರು.
ಔಷಧಿಗಳು ಮತ್ತು ತರಕಾರಿ ತೆಗೆದುಕೊಳ್ಳಲು ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ಮಸೀದಿ, ಚರ್ಚ್ ಹಾಗೂ ದೇವಸ್ಥಾನಗಳಲ್ಲಿ ಸಾಮೂಹಿಕ ಪ್ರಾಥನೆಗೆ ಅವಕಾಶವಿಲ್ಲ ಎಂದು ಆದೇಶಿಸಲಾಗಿದೆ. ಹಳ್ಳಿಗಳಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಸಿಬ್ಬಂದಿಗಳು ಮನೆ, ಮನೆಗಳಿಗೆ ತೆರಳಿ ಕೊರೊನಾ ತಡೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಅವರಿಗೆ ಯಾರದರು ತೊಂದರೆ ನೀಡಿದರೆ ಅವರ ಮೇಲೆ ಪ್ರಕರಣ ದಾಖಲು ಮಾಡಿ ಎಂದು ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ರಾಜೀವ್ ಅವರಿಗೆ ಸೂಚಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದರು.
ನವದೆಹಲಿ ನಿಜಾಮುದ್ದಿನ್ ಮಸೀದಿ ಸಮಾವೇಶದಲ್ಲಿ ಸಾಮೂಹಿಕವಾಗಿ ಪ್ರಾಥನೆ ಮಾಡಿದ ವ್ಯಕ್ತಿಗಳು ಯಾರದರು ಇದ್ದರೆ ತಪಾಸಣೆ ಮಾಡಿ ಕ್ವಾಂರಟೈನ್ನಲ್ಲಿ ಇಡಬೇಕು ಎಂದ ಅವರು ದಾವಣಗೆರೆ ಮತ್ತು ಹರಿಹರ ಹೊರತುಪಡಿಸಿ ಉಳಿದ ಎಲ್ಲಾ ತಾಲ್ಲೂಕುಗಳಲ್ಲಿ ಕೋಳಿ ಮತ್ತು ಮೊಟ್ಟೆ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
ದಾವಣಗೆರೆ ತಹಶಿಲ್ದಾರ್ ಸಂತೋಷಕುಮಾರ್ ಮಾತನಾಡಿ, ಜಿಲ್ಲಾಡಳಿತ ಹಾಗೂ ಕೆಲವು ಇಲಾಖೆಗಳ ಸಹಕಾರದೊಂದಿಗೆ ದಾವಣಗೆರೆಯಲ್ಲಿ ಒಟ್ಟು 4 ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಿದ್ದೇವೆ. ಹೋಬಳಿ ಮತ್ತು ಗ್ರಾಮಗಳಿಗೆ ಗಾಡಿಗಳ ಮೂಲಕ ತರಕಾರಿ ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡಿದ್ದೇವೆ. ದಿನಸಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಜನರಿಗೆ ಅನೂಕೂಲವಾಗುವಂತೆ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಹಣ್ಣು ತರಕಾರಿಗಳನ್ನು ಖರೀದಿಸಲು ಅವಕಾಶ ಮಾಡಲಾಗಿದ್ದು ಸಾಮಾಜಿಕ ಅಂತರ ಕಾಯ್ದುಕೊಂಡು ಜನರು ಖರೀದಿಸಬೇಕು. ಹೊರ ರಾಜ್ಯದಿಂದ 126 ಜನರು, ಹೊರ ಜಿಲ್ಲೆಯಿಂದ 4554 ಜನರು ಒಟ್ಟಾರೆ 4682 ಜನರ ಮೇಲೆ ನಿಗಾ ವಹಿಸಲಾಗಿದೆ. ಬೆಂಗಳೂರು ಮತ್ತು ಹೊರ ರಾಜ್ಯದಿಂದ ಬಂದಂತಹ ವ್ಯಕ್ತಿಗಳನ್ನು ದಿನನಿತ್ಯ ಜ್ವರ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಸಚಿವರಿಗೆ ಮಾಯಕೊಂಡ ಕ್ಷೇತ್ರದ ಪರಿಸ್ಥಿತಿ ವಿವರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ ಮಾತನಾಡಿ ಒಟ್ಟು 50,000 ವಿದ್ಯಾರ್ಥಿಗಳಿದ್ದಾರೆ. 46,000 ವಿದ್ಯಾರ್ಥಿಗಳಿಗೆ 21 ದಿನಗಳಿಗೆ ಆಗುವಷ್ಟು ಅಕ್ಕಿ, ಬೇಳೆ ವಿತರಣೆಯಾಗಿದೆ. ಇನ್ನು 4,000 ವಿದ್ಯಾರ್ಥಿಗಳಿಗೆ ಅಕ್ಕಿ, ಬೇಳೆ ವಿತರಣೆಯಾಗಿಲ್ಲ ಜಿಲ್ಲಾಡಳಿತದೊಂದಿಗೆ ಸೇರಿ ವಿತರಣೆ ಮಾಡಿ ಎಂದರು.
ಮಾಯಕೊಂಡ ಕ್ಷೇತ್ರದ ಶಾಸಕ ಪ್ರೊ. ಲಿಂಗಣ್ಣ ಮಾತನಾಡಿ, ಕೋವಿಡ್-19 ವಿರುದ್ದ ನಮ್ಮ ಜಿಲ್ಲಾಡಳಿತ ಮತ್ತು ಎಲ್ಲಾ ಅಧಿಕಾರಿಗಳು ತುಂಬಾ ಶ್ರಮವಹಿಸಿ ಕೆಲಸ ನಿರ್ವಹಿಸುತ್ತಿದ್ದಾರೆ ಅವರಿಗೆ ನಾನು ಆಭಾರಿಯಾಗಿದ್ದೆನೆ. ಮಾಯಕೊಂಡ ಕ್ಷೇತ್ರದಲ್ಲಿ ರೈತರಿಗೆ ಅನೂಕೂಲವಾಗುವಂತೆ 5 ತಾಸಿಗಿಂತ ಹೆಚ್ಚು ಅವಧಿ ವಿದ್ಯುತ್ ಪೂರೈಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ರೈತರು ಬೆಳೆದ ತರಕಾರಿ, ಹಣ್ಣುಗಳಿಗೆ ಸಮತೋಲಿತವಾದ ದರ ನೀಡಲು ಪ್ರಯತ್ನಿಸುತ್ತಿದ್ದೇವೆ. ಮಾಯಕೊಂಡ ಕ್ಷೇತ್ರ ಹೂಕೋಸು ಮತ್ತು ಸಿಹಿಕುಂಬಳ ಬೆಳೆಯಲಾಗುತ್ತಿದ್ದು, ರೈತರು ಈ ತರಕಾರಿಯನ್ನು ಹಾಳು ಮಾಡದೇ ಕೋಲ್ಡ್ ಸ್ಟೋರೇಜ್ನಲ್ಲಿ ಇರಿಸಬೇಕೆಂದರು. ಕುಡಿಯುವ ನೀರಿನ ಸಮಸ್ಯೆ ನಮ್ಮ ಜಿಲ್ಲೆಯಲ್ಲಿ ಇಲ್ಲ. ಇದ್ದರೆ ಕೂಡಲೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ನೀರಿನ ವ್ಯವಸ್ಥೆಯನ್ನು ಮಾಡುತ್ತೆವೆ. ಸಾರ್ವಜನಿಕರಿಗೆ ಅನೂಕೂಲವಾಗುವಂತೆ ದಿನಸಿ ಅಂಗಡಿ, ಬೇಕರಿ, ಹಣ್ಣಿನ ಅಂಗಡಿ ತೆರೆಯಲು ಅವಕಾಶ ನೀಡಿದ್ದೇವೆ ಎಂದು ಸಚಿವರಿಗೆ ವಿವರಿಸಿದರು.
ಎಎಸ್ಪಿ ರಾಜೀವ್ ಮಾತನಾಡಿ ಮಾಯಕೊಂಡ ಕ್ಷೇತ್ರದ ಪ್ರತಿ ಪೆಟ್ರೋಲ್ ಬಂಕ್ಗಳಿಗೆ ಒಬ್ಬ ಪೇದೆಯನ್ನು ನಿಯೋಜಿಸಿದ್ದು, ಅನಗತ್ಯವಾಗಿ ಬರುವ ಸಾರ್ವಜನಿಕರಿಗೆ ಪೆಟ್ರೋಲ್ ನೀಡದೇ ವಾಹನವನ್ನು ಸೀಜ್ ಮಾಡುತ್ತಿದ್ದೇವೆ. ಹಾಗೂ ಅಗತ್ಯವಿರುವವರೆಗೆ ಮಾತ್ರ ಪೆಟ್ರೋಲ್ ನೀಡುತ್ತಿದ್ದೇವೆ ಎಂದರು.
ದಾವಣಗೆರೆ ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ್ ಮಾತನಾಡಿ, 43 ಜನರನ್ನು ಹೋಂ ಕ್ವಾರೆಂಟೈನ್ನಲ್ಲಿ ಇರಿಸಲಾಗಿದ್ದು, 8 ಜನರನ್ನು ಚಿಗಟೇರಿ ಆಸ್ಪತ್ರೆಯಲ್ಲಿ ಅವಲೋಕನ ಅವಧಿಯಲ್ಲಿ ಇರಿಸಲಾಗಿದೆ ಎಂದರು.
ಇದೆ ಸಂದರ್ಭದಲ್ಲಿ ಡಾ. ಶಿವಕುಮಾರ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50,000 ರೂಗಳನ್ನು ಸಚಿವರಿಗೆ ದೇಣಿಗೆ ನೀಡಿದರು.
ಸಭೆಯಲ್ಲಿ ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ , ಹೆಚ್ಚುವರಿ ಪೋಲಿಸ್ ವರಿಷ್ಟಾಧಿಕಾರಿ ರಾಜೀವ್, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಡಿಹೆಚ್ಓ ಡಾ.ರಾಘವೇಂದ್ರ ಸ್ವಾಮಿ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.