ಡಿವಿಜಿ ಸುದ್ದಿ, ದಾವಣಗೆರೆ: ಬಿಸಿಯೂಟ ತಯಾರಿಕರ ಕಳೆದ 4 ತಿಂಗಳ ವೇತನವನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಎಐಟಿಯುಸಿ ರಾಜ್ಯ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಅನುದಾನಿತ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಬಿಸಿಯೂಟ ತಯಾರಕರು ಕಳೆದ 17 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ರಾಜ್ಯದಾದ್ಯಂತ 1 ಲಕ್ಷ 18 ಸಾವಿರದಷ್ಟಿರುವ ಬಿಸಿಯೂಟ ತಯಾರಕರು ಕನಿಷ್ಟ ವೇತನದ ಕಾಯ್ದೆಗೆ ಒಳಪಡದೆ ಗೌರವ ಸಂಭಾವನೆಯಾಗಿ 2,700 ರೂ ಹಾಗೂ ಸಹಾಯಕ ಅಡುಗೆಯವರು 2,600 ನೀಡಲಾಗುತ್ತಿದೆ. ಈ ವೇತನದಲ್ಲಿ ಜೀವನ ನಡೆಸುವುದು ಕಷ್ಟಕರವಾಗಿದೆ.
ಹುದ್ದೆ ಖಾಯಂಗೊಳಿಸಬೇಕು, ಕನಿಷ್ಟ ವೇತನ ಕೊಡಬೇಕು, ಇ.ಎಸ್.ಐ, ಪಿ.ಎಫ್, ನಿವೃತ್ತಿ ವೇತನ, ಇಡುಗಂಟು ಹಣ, ಅಪಘಾತ ಪರಿಹಾರ, ಮರಣ ಪರಿಹಾರ ಜಾರಿ ಸೇರಿದಂತೆ ವಿವಿಧ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟು ನಿರಂತರವಾಗಿ ಹೋರಾಟ ನಡೆಸುವುದರೂ ಸರ್ಕಾರ ಯಾವುದೇ ಸವಲತ್ತುಗಳನ್ನು ನೀಡಿಲ್ಲ ಎಂದು ಆರೋಪಿಸಿದರು.
ಕೋವಿಡ್-19 ಪರಿಣಾಮವಾಗಿ ಬಿಸಿಯೂಟ ತಯಾರಕರು ತೀವ್ರ ಕಷ್ಟದಲ್ಲಿದ್ದಾರೆ. ಶಾಲೆಗಳಲ್ಲಿ ಕೆಲಸವಿಲ್ಲದೇ ಬೇರೆ ಕಡೆ ಕೂಲಿಯಿಲ್ಲದೇ ಪರಿತಪಿಸುತ್ತಿದ್ದಾರೆ. ರಾಜ್ಯದ ಇತರೆ ಅಸಂಘಟಿತ ಕಾರ್ಮಿಕರಿಗೆ ಸರ್ಕಾರದ ವತಿಯಿಂದ ಲಾಕ್ಡೌನ್ ಕಾರಣದಿಂದ 5 ಸಾವಿರ ಪರಿಹರ ಹಣ ನೀಡಿದೆ. ಅದೇ ರೀತಿ ಬಿಸಿಯೂಟ ತಯಾರಕರಿಗೂ ಲಾಕ್ಡೌನ್ ಪರಿಹಾರದ ಹಣ ನೀಡಬೇಕು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಹೆಚ್.ಕೆ.ರಾಮಚಂದ್ರಪ್ಪ, ಆವರಗೆರೆ ಚಂದ್ರು, ಮಹಮದ್ ಭಾಷಾ, ಮಳಲ್ಕೆರೆ ಜಯಮ್ಮ, ಪ್ರಮೀಳಾ, ಸರೋಜ, ಗವಿಗೇಶ್ ಪಾಳಾದ, ವನಜಾಕ್ಷಿ, ಅರುಣ, ಸಿ.ರಮೇಶ, ಬೆಳಲಕೆರೆ ರುದ್ರಮ್ಮ ಉಪಸ್ಥಿತರಿದ್ದರು.



