Connect with us

Dvgsuddi Kannada | online news portal | Kannada news online

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೊಡಗನೂರು ವಿಜಯಕುಮಾರ್ ಅವರಿಗೆ ಮನೆ ನಿರ್ಮಿಸಲು ಕೈಜೋಡಿಸಿ: ಜಿಲ್ಲಾಧಿಕಾರಿ

ದಾವಣಗೆರೆ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೊಡಗನೂರು ವಿಜಯಕುಮಾರ್ ಅವರಿಗೆ ಮನೆ ನಿರ್ಮಿಸಲು ಕೈಜೋಡಿಸಿ: ಜಿಲ್ಲಾಧಿಕಾರಿ

ಡಿವಿಜಿ ಸುದ್ದಿ, ದಾವಣಗೆರೆ: ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಹಾಗೂ ದಾವಣಗೆರೆ ಹೆಮ್ಮೆಯ ಕಲಾವಿದ ಕೊಡಗನೂರು ಜಯಕುಮಾರ್  ಅವರು ಸದ್ಯ ಸಂಕಷ್ಟದ ಸ್ಥಿತಿಯಲ್ಲಿದ್ದು, ಅವರಿಗೆ ಸೂರು ನಿರ್ಮಿಸಿಕೊಡಲು ಎಲ್ಲಾ ಅಧಿಕಾರಿಗಳು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಜನಸ್ಪಂದನ ಸಭೆಗೆ ಆಗಮಿಸಿದ ಹಿರಿಯ ಕಲಾವಿದ ಕೊಡಗನೂರು ವಿಜಯಕುಮಾರ್ , ದಾವಣಗೆರೆಯಲ್ಲಿ ಒಂದು ಸೂರಿನ ವ್ಯವಸ್ಥೆ ಮಾಡಿಕೊಡಬೇಕೆಂದು ಮನವಿ ಮಾಡಿದರು. ಅನಾರೋಗ್ಯದಿಂದ ಬಳಲುತ್ತಿರುವ ಇವರು ತಮ್ಮ ಮಗನ ಸಹಾಯದಿಂದ ಸಭೆಗೆ ಹಾಜರಾಗಿದ್ದರು.

ಜಿಲ್ಲಾಧಿಕಾರಿ, ಸಿಇಓ ಇತರರು ಸೇರಿದಂತೆ ಅಧಿಕಾರಿಗಳು ಎದ್ದು ನಿಂತು ಕೈಮುಗಿದು ಅರ್ಜಿ ಸ್ವೀಕರಿಸಿದರು. ನೀವು ವೈಯಕ್ತಿಕವಾಗಿಯೇ ಬಂದು ಅರ್ಜಿ ನೀಡಬಹುದಿತ್ತು. ನೀವು ಇಲ್ಲಿ ಅರ್ಜಿ ಸಲ್ಲಿಸಿ, ಜನಸ್ಪಂದನದ ಗೌರವ ಹೆಚ್ಚಿಸಿದ್ದೀರಿ. ನಿಮ್ಮ ಬಗ್ಗೆ ನಮಗೆ ಹೆಮ್ಮೆ ಮತ್ತು ಗೌರವ ಇದೆ. ಮನೆ ಒದಗಿಸಿಕೊಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತಿಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜನಸ್ಪಂದನ ಸಭೆ ಬಳಿಕ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ನಡೆಸಿದ  ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ  ಅವರು, ಕೊಡಗನೂರು ವಿಜಯ ಕುಮಾರ್ ಅವರ  ಸದ್ಯದ ಪರಿಸ್ಥಿತಿ ಅಷ್ಟು ಸರಿಯಿಲ್ಲ. ಅನಾರೋಗ್ಯದಿಂದ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಇವರಿಗೆ ಮನೆ ಅಥವಾ ನಿವೇಶನ ಇಲ್ಲ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಜನಸ್ಪಂದನ ಸಭೆಗೆ ಆಗಮಿಸಿ ಯಾವುದಾದರೂ ಯೋಜನೆಯಡಿ ಮನೆ ಒದಗಿಸುವಂತೆ ಮನವಿ ಮಾಡಿದ್ದಾರೆ. ಇಂತಹ ವ್ಯಕ್ತಿಗೆ ನಾವೆಲ್ಲರೂ ಕೂಡಿ ಒಂದು ಸೂರಿನ ವ್ಯವಸ್ಥೆ ಮಾಡೋಣ ಎಂದರು.
ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಇದಕ್ಕೆ ಸಹಮತ ವ್ಯಕ್ತಪಡಿಸಿದಾಗ ಜಿಲ್ಲಾಧಿಕಾರಿಗಳು, ಎಷ್ಟು ದಿನಗಳ ಒಳಗೆ ಈ ವ್ಯವಸ್ಥೆ ಮಾಡಲಾಗುವುದು ಎನ್ನುವುದನ್ನೂ ಮುಂದೆ ಚರ್ಚಿಸೋಣ. ನಾವು ನಮ್ಮ ಕೆಲಸವನ್ನು ಕರ್ತವ್ಯವೆಂದು ಮಾಡಬಾರದು, ಬದಲಾಗಿ ಸಂತೋಷದಿಂದ ಈ ಕಾರ್ಯ ಮಾಡುತ್ತಿದ್ದೇನೆ ಅಂದುಕೊಳ್ಳಬೇಕು. ಈ ನಿಟ್ಟಿನಲ್ಲಿ ನಾವೆಲ್ಲ ನಮ್ಮ ಕೆಲಸವನ್ನು ಸಂತಸ, ಹುರುಪಿನಿಂದ ಮಾಡಿದಾಗ ಅದು ಸಾರ್ಥಕವಾಗುತ್ತದೆ ಎಂದರು.

ಸಭೆಯಲ್ಲಿ ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ, ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ, ಡಿಡಿಎಲ್‍ಆರ್ ರಾಮಾಂಜನೇಯ, ಕೆಎಸ್‍ಆರ್‍ಟಿಸಿ ಡಿಸಿ ಸಿದ್ದೇಶ್ವರ್, ಡಿಡಿಪಿಐ ಪರಮೇಶ್ವರಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.

 

 

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top