ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲಾ ಪಂಚಾಯತಿ ಅಧ್ಯಕ್ಷರ ಸ್ಥಾನಕ್ಕೆ ನ.11 ರಂದು ನಡೆದ ಚುನಾವಣೆಯಲ್ಲಿ ಹೊದಿಗೆರೆ ಜಿ.ಪಂ. ಕ್ಷೇತ್ರದ ಯಶೋಧಮ್ಮ ಮರುಳಪ್ಪ ಅವರು ಜಿ.ಪಂ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಯಶೋಧಮ್ಮ ಒಬ್ಬರೇ ಎರಡು ನಾಮಪತ್ರ ಸಲ್ಲಿಸಿದ್ದರು. ಬೇರೆ ನಾಮಪತ್ರ ಸಲ್ಲಿಸಿದ ಹಿನ್ನೆಲೆ ಯಶೋಧಮ್ಮಅವಿರೋಧವಾಗಿ ಆಯ್ಕೆಯಾದರು. ಹೊದಿಗೆರೆ ಜಿ.ಪಂ ಕ್ಷೇತ್ರದ ಸದಸ್ಯರಾದ ಯಶೋಧಮ್ಮ ಮರುಳಪ್ಪ ಅವರಿಗೆ ಕೆ.ವಿ.ಶಾಂತಕುಮಾರಿ, ಬಿ.ಎಂ.ವಾಗೀಶ್ಸ್ವಾಮಿ ಸೂಚಕರಾಗಿದ್ದರು.
ಬೆಂಗಳೂರು ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ಚುನಾವಣೆ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಒಟ್ಟು 29 ಸದಸ್ಯರ ಬಲವಿದ್ದು, 16 ಕೋರಂ ಅವಶ್ಯಕತೆ ಇತ್ತು. ಸದಸ್ಯರ ಹಾಜರಾತಿ ಪಡೆಯಲಾಗಿದ್ದು, ಅಗತ್ಯ ಕೋರಂ ಸಾಭಿತಾದ ನಂತರ ಯಶೋಧಮ್ಮ ಮರುಳಪ್ಪ ಇವರನ್ನು ಜಿ.ಪಂ ನೂತನ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಾದೇಶಿಕ ಆಯುಕ್ತರು ಘೋಷಿಸಿದರು.
ಸಭೆಯಲ್ಲಿ ಜಿ.ಪಂ ಸದಸ್ಯರು, ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ, ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ.ಜಿ, ಜಿ.ಪಂ. ಉಪಕಾರ್ಯದರ್ಶಿ ಆನಂದ್ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.
ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ಸದಸ್ಯರು ಇತರೆ ಮುಖಂಡರು ನೂತನ ಅಧ್ಯಕ್ಷರಿಗೆ ಅಭಿನಂದಸಿದರು.
ಜಿ.ಪಂ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ಯಶೋಧಮ್ಮ ಮರುಳಪ್ಪ, ಜಿ ಪಂ ವತಿಯಿಂದ ರೈತಪರವಾದ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ಉತ್ತಮ ರಸಗೊಬ್ಬರ, ಕೃಷಿ ಹೊಂಡಗಳ ನಿರ್ಮಾಣ, ಕೃಷಿ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುವುದು. ಹಾಗೂ ಕುಡಿಯುವ ನೀರು, ರಸ್ತೆ ಅಭಿವೃದ್ಧಿ ಸೇರಿದಂತೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.



