ಡಿವಿಜಿ ಸುದ್ದಿ, ದಾವಣಗೆರೆ:ಕೊರೊನಾ ವಿರುದ್ಧ ಸಮರ ಸಾರಲು ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ದಾನಿಗಳು ಸೇರಿದಂತೆ ಎಲ್ಲರೂ ಕೈಜೋಡಿಸಬೇಕಿದೆ. ದಾವಣಗೆರೆ ಕೊರೊನಾ ಮುಕ್ತ ಜಿಲ್ಲೆಯಾಗಿಸುವಲ್ಲಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ತಿಳಿಸಿದರು.
ಇಂದು ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕೋವಿಡ್ 19 ನಿಯಂತ್ರಣ ಹಾಗೂ ಲಾಕ್ಡೌನ್ ಹಿನ್ನೆಲೆ ಜಿಲ್ಲೆಯಲ್ಲಿ ಕೈಗೊಳ್ಳಲಾದ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಟ್ಟಡ ಕಾರ್ಮಿಕರು, ವಲಸಿಗರು ಸೇರಿದಂತೆ ಬಡವರಿಗೆ ಊಟ, ವಸತಿ ಸೇರಿದಂತೆ ಎಲ್ಲ ರೀತಿಯ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದ್ದು, ದೇಶದ ಬೆನ್ನೆಲುಬಾದ ರೈತರ ಚಟುವಟಿಕೆಗಳಿಗೆ ಯಾವುದೇ ತೊಂದರೆ ಕಾರ್ಯ ನಿರ್ವಹಿಸಬೇಕಿದೆ.
ಆರೋಗ್ಯ, ಪೊಲೀಸ್, ಆಹಾರ, ಕಂದಾಯ ಸೇರಿದಂತೆ ಕೋವಿಡ್ಗೆ ಸಂಬಂಧಿಸಿದಂತೆ ಎಲ್ಲ ಇಲಾಖೆಗಳು ಸಮನ್ವಯದೊಂದಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಸರ್ವೇಕ್ಷಣಾಧಿಕಾರಿ ಸೇರಿದಂತೆ ಆರೋಗ್ಯ ಇಲಾಖೆಯು ಕೊವಿಡ್ 19 ಹಿನ್ನೆಲೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ಕೋವಿಡ್ ಪರೀಕ್ಷೆಗಳ ಸಂಖ್ಯೆ ಹೆಚ್ಚಬೇಕು ಎಂದರು.
ಎಲ್ಲ ಅಧಿಕಾರಿಗಳು ಸಮರ್ಥವಾಗಿ ಹಾಗೂ ಎಚ್ಚರಿಕೆಯಿಂದ ಕ್ರಮ ವಹಿಸುವ ಮೂಲಕ ಸಾರ್ವಜನಿಕರ ರಕ್ಷಣೆಯಲ್ಲಿ ತೊಡಗಬೇಕು ಹಾಗೂ ಜೊತೆಗೆ ಪಾಲಿಕೆ ಸದಸ್ಯರು ಈ ಕಾರ್ಯದಲ್ಲಿ ಕೈಜೋಡಿಸಬೇಕು. ರೇಷನ್ಕಾರ್ಡಿಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ ಎಷ್ಟಿದೆ ಅವರಿಗೂ ಪಡಿತರ ನೀಡುವ ವ್ಯವಸ್ಥೆಯನ್ನು ಈ ದಿನದಿಂದಲೇ ಮಾಡಬೇಕು ಎಂದರು.
ಶಾಸಕರಾದ ಶಿವಶಂಕರಪ್ ಮಾತನಾಡಿ, ನಗರದಲ್ಲಿ ವಲಸಿಗ ಕಾರ್ಮಿಕರು, ನಿರ್ಗತಿಕರಿಗೆ ಸಮರ್ಪಕವಾಗಿ ಆಹಾರಕಿಟ್ ವಿತರಣೆಯಾಗುತ್ತಿಲ್ಲ. ಜಿಲ್ಲಾಡಳಿತದ ಗೋಡಾನ್ನಲ್ಲಿ ದಾಸ್ತಾನಿಟ್ಟರೆ ಸಾಲದು ಅದನ್ನು ಸರಿಯಾಗಿ ಹಂಚಬೇಕು. ಬೆಳಗಾವಿಯಿಂದ ಬಂದವರು ಸೇರಿದಂತೆ ನಿನ್ನೆ ಸುಮಾರು ಎರಡು ಸಾವಿರದಷ್ಟು ಜನರು ಆಹಾರಕಿಟ್ಗಾಗಿ ಸೇರಿದ್ದರು. ಪಾಲಿಕೆ ಸದಸ್ಯರಿಂದ ಆಯಾ ವಾರ್ಡ್ಗಳ ಬಡವರ, ನಿರ್ಗತಿಕರ ಮಾಹಿತಿ ಪಡೆದು, ಸದಸ್ಯರನ್ನೊಳಗೊಂಡು ಅಂತಹವರಿಗೆ ಆಹಾರದ ಕಿಟ್ಗಳ ವಿತರಣೆಯಾಗಬೇಕು.
ಈ ಬಗ್ಗೆ ಕಾರ್ಮಿಕ ಸಚಿವರೊಂದಿಗೆ ಮಾತನಾಡಿದ್ದು, ಜಿಲ್ಲೆಯಲ್ಲಿ ಎಷ್ಟೇ ಕಾರ್ಮಿಕರಿದ್ದರೂ ಅವರಿಗೆ ಆಹಾರದ ವ್ಯವಸ್ಥೆ ಮಾಡಲಾಗುವುದು. ಎಸ್ಡಿಆರ್ಎಫ್ ನಿಧಿಯಲ್ಲಿಯೂ ಅವರಿಗೆ ಅಗತ್ಯವಾದ ಊಟ, ವಸತಿ ಇತರೆ ಖರೀದಿಗೆ ಜಿಲ್ಲಾಡಳಿತಕ್ಕೆ ಅಧಿಕಾರ ನೀಡಲಾಗಿದೆ ಎಂದಿದ್ದಾರೆ. ಈ ಪ್ರಕಾರ ಡಿಸಿಯವರು ಕ್ರಮ ಕೈಗೊಳ್ಳಬೇಕೆಂದರು.
ಸಂಸದರಾದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಎಲ್ಲರನ್ನೂ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜನ್ಧನ್ ಖಾತೆಗೆ ರೂ.500, ಕಿಸಾನ್ ಸಮ್ಮಾನ್ ನಿಧಿಗೆ ರೂ.2000, ಮೂರು ತಿಂಗಳು ಉಚಿತ ಅನಿಲ, 2 ತಿಂಗಳ ಪಡಿತರ ಸೇರಿದಂತೆ ಅನೇ ಸವಲತ್ತು ನೀಡಿದ್ದು, ದಾನಿಗಳೂ ಕೂಡ ಕಿಟ್ಗಳನ್ನು ನೀಡುತ್ತಿದ್ದಾರೆ.
ಈ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಿದರೆ ಮಾತ್ರ ರಕ್ಷಣೆ ಸಾಧ್ಯವಾಗುತ್ತದೆ ಎಂದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ 1806 ಕಾರ್ಮಿಕರನ್ನು ಗುರುತಿಸಲಾಗಿದೆ. ಇದರಲ್ಲಿ 377 ಕಾರ್ಮಿಕರು ಅನ್ಯರಾಜ್ಯದಿಂದ ಬಂದಿದ್ದಾರೆ. ಹರಿಹರದಲ್ಲಿ 27 ಜನರು, ನ್ಯಾಮತಿಯಲ್ಲಿ 31, ಹೊನ್ನಾಳಿಯಲ್ಲಿ 10 ಜನರಿದ್ದಾರೆ. ಮಾಲೀಕರ ಶೆಲ್ಟರ್ನಲ್ಲಿ ಸುಮಾರು 720 ಕಾರ್ಮಿಕರಿದ್ದು, 790 ಜನರು ವಿವಿಧೆಡೆ ಶೆಲ್ಟರ್ಗಳಿದ್ದಾರೆ ಇವರೆಲ್ಲರಿಗೂ ಆಹಾರದ ಕಿಟ್ಗಳನ್ನು ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಶೇ.91 ಪಡಿತರ ವಿತರಣೆಯಾಗಿದೆ. ಜೊತೆಗೆ 3271 ಕಿಟ್ಗಳನ್ನು ದಾನಿಗಳಿಂದ ಸಂಗ್ರಹಿಸಿ ನೀಡಲಾಗುತ್ತಿದೆ ಎಂದರು.
ಶಾಸಕ ಎಂ.ಪಿ.ರೇಣುಕಾಚಾರ್ಯ , ಕೆಲವರು ಸಾಲ ಮಾಡಿ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳನ್ನು ಖರೀದಿಸಿದ್ದು ಅವರ ಬಿಪಿಎಲ್ ಕಾರ್ಡನ್ನು ರದ್ದುಪಡಿಸಲಾಗಿದೆ. ಅವರೂ ಕೂಡ ಬಡವರೇ. ಇದರಿಂದ ಅವರಿಗೆ ತುಂಬಾ ತೊಂದರೆಯಾಗಿದ್ದು ಅವರಿಗೆ ಪಡಿತರ ಕೊಡಿಸಬೇಕೆಂದು ಉಸ್ತುವಾರಿ ಸಚಿವರಿಗೆ ಕೋರಿದರು.