ಡಿವಿಜಿ ಸದ್ದಿ, ದಾವಣಗೆರೆ: ರಾಜ್ಯದ ರೈತರು ಬೆಳೆ ಸಮೀಕ್ಷೆ ಆಪ್ನ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಕರೆ ನೀಡಿದರು.
ಹೊನ್ನಾಳಿ ತಾಲೂಕಿನ ಮಾಸಡಿ ಗ್ರಾಮದ ಮೆಕ್ಕೆಜೋಳದ ಹೊಲದಲ್ಲಿ ರೈತರಿಂದಲೇ ಬೆಳೆ ಸಮೀಕ್ಷೆ ಕಾರ್ಯವನ್ನು ಉದ್ಘಾಟಿಸಿ ಮಾತನಾಡಿದರು.
ಬೆಳೆ ಸಮೀಕ್ಷೆ ಆಪ್ನಲ್ಲಿ ರೈತರು ತಮ್ಮ ಜಮೀನುಗಳಲ್ಲಿನ ಬೆಳೆಗಳ ಸಮೀಕ್ಷೆಯ ಸಮಗ್ರ ವಿವರಗಳನ್ನು ನೀಡಿದರೆ ಮುಂದಿನ ದಿನಗಳಲ್ಲಿ ಸರಕಾರದ ಸವಲತ್ತು ಪಡೆಯಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ರೈತರಿಂದಲೇ ಬೆಳೆ ಸಮೀಕ್ಷೆ ಕಾರ್ಯವನ್ನು ಪ್ರಾರಂಭಿಸಿ ಇಂದಿಗೆ ನಾಲ್ಕು ದಿನಗಳಾಗಿವೆ. ಈ ಅಲ್ಪ ಅವಧಿಯಲ್ಲಿ 1,52,951 ರೈತರು ತಮ್ಮ ಜಮೀನುಗಳ ಬೆಳೆ ವಿವರಗಳನ್ನು ಆಪ್ನಲ್ಲಿ ದಾಖಲಿಸಿದ್ದಾರೆ. ಇದರಿಂದ ರೈತರು ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿದ್ದಾರೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ ಎಂದು ಹೇಳಿದರು.
ರಾಜ್ಯದ 2.10 ಲಕ್ಷ ರೈತರ ಪೈಕಿ ಕಳೆದ ಬಾರಿ 1.50 ಲಕ್ಷ ರೈತರು ಮಾತ್ರ ಬೆಳೆ ಸಮೀಕ್ಷೆ ವಿವರ ನೀಡಿದ್ದರು. ಇದಕ್ಕೆ ಮುಖ್ಯ ಕಾರಣ 60 ಲಕ್ಷ ರೈತರ ಜಮೀನುಗಳ ಪೋಡಿ ಕಾರ್ಯ ಆಗಿಲ್ಲದಿರುವುದು. ಆ ಹಿನ್ನೆಲೆಯಲ್ಲಿ ಒಂದೇ ಸರ್ವೇ ನಂಬರ್ನಲ್ಲಿ ಇರುವ ಐದಾರು ರೈತರ ಜಮೀನುಗಳ ವಿವರಗಳನ್ನು ಅಪ್ಲೋಡ್ ಮಾಡಲು ಆಗುತ್ತಿರಲಿಲ್ಲ. ಆದ್ದರಿಂದ, ಈ ಬಾರಿ ತೊಂದರೆ ಉದ್ಭವಿಸಬಾರದು ಎಂಬ ಉದ್ದೇಶದಿಂದ ರೈತರಿಂದಲೇ ಬೆಳೆ ಸಮೀಕ್ಷೆ ಕಾರ್ಯ ನಡೆಸಲು ಹಾಗೂ ವಿವರಗಳನ್ನು ಆಪ್ಗೆ ಅಪ್ಲೋಡ್ ಮಾಡಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.



