ಡಿವಿಜಿಸುದ್ದಿ.ಕಾಂ, ಹರಿಹರ: ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಹರಿಹರಕ್ಕೆ ಆಗಮಿಸಲಿದ್ದು, ಸಿದ್ದರಾಮಯ್ಯ ಸ್ವಾಗತಕ್ಕೆ ಜಿಲ್ಲಾ ಕಾಂಗ್ರೆಸ್ ಸೇರಿದಂತೆ ಹರಿಹರ ತಾಲ್ಲೂಕು ಘಟಕ ಭರದ ಸಿದ್ಧತೆ ಮಾಡಿಕೊಂಡಿದ್ದು, ಸ್ವಾಗತಕ್ಕೆ ಕ್ಷಣ ಗಣನೆ ಶುರುವಾಗಿದೆ.ಮಿನಿ ವಿಧಾನಸೌಧದ ಬಳಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್ ಅನ್ನು ಶಾಸಕ ರಾಮಪ್ಪ ನಿನ್ನೆ ರಾತ್ರಿ ಭೇಟಿ ನೀಡಿ ಪರಿಶೀಲಿಸಿದರು.

ಸಿದ್ಧರಾಮಯ್ಯ ಅವರ ನೆಚ್ಚಿನ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಹರಿಹರಕ್ಕೆ ಆಗಮಿಸಲಿದ್ದು, ಇದೇ ವೇಳೆ ವಾಲ್ಮೀಕಿ ಜಯಂತಿಯನ್ನು ಹರಿಹರದಲ್ಲಿಯೇ ಆಚರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇವತ್ತು ಹರಿಹರ ನಗರಕ್ಕೆ ಕಾಂಗ್ರೆಸ್ ಮತ್ತು ಸಿದ್ಧರಾಮಯ್ಯ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇದೆ.

ಪಕ್ಕಿರಸ್ವಾಮಿ ಮಠದಿಂದ ತೆರದ ವಾಹನದಲ್ಲಿ ಹರಿಹರದ ಪ್ರಮುಖ ಬೀದಿಯಲ್ಲಿ ಸಿದ್ದರಾಮಯ್ಯ ಮೆರವಣಿಗೆ ನಡೆಯಲಿದ್ದು, ಇಂದಿರಾ ಕ್ಯಾಂಟೀನ್ ಉದ್ಘಾಟನೆ ನಂತರ ಹಳೆ ಪಿ.ಬಿ ರಸ್ತೆಯ ಬೃಹತ್ ವೇದಿಕೆಯಲ್ಲಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವರಾದ ಜಮೀರ್ ಅಹ್ಮದ್, ಹೆಚ್. ಆಂಜನೇಯ, ಎಸ್.ಎಸ್.ಮಲ್ಲಿಕಾರ್ಜುನ, ಎಂ.ಎಲ್.ಸಿ ಅಬ್ದುಲ್ ಜಬ್ಬಾರ್, ಮೋಹನ್ ಕೊಂಡಜ್ಜಿ, ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಭಾಗವಹಿಸಲಿದ್ದು, ಶಾಸಕ ಎಸ್. ರಾಮಪ್ಪನವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ತಾಲ್ಲೂಕು ಘಟಕದ ಎಸ್.ಎಂ. ವಸಂತ, ನಾಗರತ್ನಮ್ಮ, ಶಂಕರ್ ಖಟಾವಕರ್, ಜಿ.ಪಂ ಮಾಜಿ ಸದಸ್ಯ ಎನ್. ನಾಗೇಂದ್ರಪ್ಪ, ಮುಖಂಡರಾದ ಬಿ.ರೇವಣಸಿದ್ದಪ್ಪ, ಗೀತಾ ಕದರಮಂಡಲಗಿ, ನಿಖಿಲ್ ಕೊಂಡಜ್ಜಿ, ಅಮರಾವತಿ ರೇವಣಸಿದ್ದಪ್ಪ ಭಾಗ್ಯದೇವಿ, ವಿದ್ಯಾರಾಣಿ ಸೇರಿದಂತೆ ಸಾವಿರಾರು ಸಿದ್ಧರಾಮಯ್ಯ ಅಭಿಮಾನಿಗಳು ಭಾಗಿಯಾಗಲಿದ್ದಾರೆ.



