ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಡಕ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅಣ್ಣಾಮಲೈ, ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. 2021ರ ಏಪ್ರಿಲ್ನಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅಣ್ಣಾಮಲೈ ತಯಾರಿ ನಡೆಸಿದ್ದಾರೆ.

ಫೇಸ್ ಬುಕ್ ನಲ್ಲಿ ನಿನ್ನೆ ನೇರ ಪ್ರಸಾರದಲ್ಲಿ ಮಾತನಾಡಿದ ಅವರು, ಮುಂಬರುವ ತಮಿಳುನಾಡು ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಘೋಷಿಸಿದರು. ಕೆ. ಅಣ್ಣಾಮಲೈ, ಅದಕ್ಕಾಗಿ ತಮಿಳುನಾಡಿನಲ್ಲಿರುವ ತಮ್ಮ ಊರಿನಲ್ಲಿ ಇದ್ದುಕೊಂಡೇ ಕೆಲಸ ಆರಂಭಿಸಿರುವುದಾಗಿ ಹೇಳಿದ್ದಾರೆ.
ಮಿಸ್ ಯೂ ಕರ್ನಾಟಕ ಎಂದು ಮಾತು ಆರಂಭಿಸಿದ ಅಣ್ಣಾಮಲೈ, ಕರ್ನಾಟಕದ ಜನರ ಪ್ರೀತಿಗೆ ನಾನು ಅಭಾರಿ. ಜನರ ಜೊತೆ ಇದ್ದು ರಾಜಕೀಯ ವ್ಯವಸ್ಥೆ ಸುಧಾರಣೆ ಮಾಡುವ ಆಸೆ ಇದೆ. ಹೀಗಾಗಿ, ರಾಜೀನಾಮೆ ನೀಡಿ ಸ್ವಂತ ಊರಿಗೆ ಬಂದಿದ್ದೇನೆ ಎಂದರು.
ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಯಾಗಿ 10 ವರ್ಷ ಕೆಲಸ ಮಾಡಿದ್ದೇನೆ. ನನ್ನದೇ ಕೆಲವು ಆಲೋಚನೆಗಳಿವೆ. ಕುಟುಂಬದ ಜೊತೆ ಸಮಯ ಕಳೆಯಬೇಕು. ಕೃಷಿ ಮಾಡಬೇಕು. ತಮಿಳುನಾಡು ರಾಜಕೀಯಕ್ಕೆ ಹೋಗಬೇಕು. ವ್ಯವಸ್ಥೆ ಬದಲಾವಣೆ ಮಾಡಬೇಕು. ಕೆಲಸ ಮಾಡುವ ಅಧಿಕಾರಿಗಳಿಗೆ ಒಳ್ಳೆಯ ವಾತಾವರಣ ಕಲ್ಪಿಸಿಕೊಡಬೇಕು ಎಂಬ ಆಸೆ ಇದೆ. ಅದಕ್ಕೆ ತಕ್ಕಂತೆ ಶ್ರಮ ಪಡುತ್ತಿದ್ದೇನೆ ಎಂದು ಮನದಾಳ ಹಂಚಿಕೊಂಡರು.
ಮದ್ಯದ ಆದಾಯ ಮೇಲಿನ ಅವಲಂಬನೆ ಬದಲಾಗಲಿ
ಎಲ್ಲ ಸರ್ಕಾರಗಳು ಆರ್ಥಿಕ ನಿರ್ವಹಣೆಯನ್ನೂ ಹಳೇ ಪದ್ಧತಿಯಲ್ಲೇ ಕಳಪೆಯಾಗಿ ನಿರ್ವಹಣೆ ಮಾಡುತ್ತಿವೆ. ಮದ್ಯದ ಆದಾಯವನ್ನೇ ನೆಚ್ಚಿಕೊಂಡು ಇಂದಿಗೂ ಬಜೆಟ್ ಮಾಡುತ್ತಿವೆ.ಯಾವ ಸರ್ಕಾರವೂ ಮದ್ಯದ ಆದಾಯ ಬೇಡ ಎನ್ನುವುದಿಲ್ಲ. ಇದು ತಪ್ಪಾ? ಸರಿಯಾ? ಎಂಬುದನ್ನು ನಿರ್ಧಾರ ಕಷ್ಟ . ಆದರೆ, ಗ್ರಾಮೀಣ ಭಾಗದಲ್ಲಿ ಮದ್ಯ ಮಾರಾಟ ತಪ್ಪು. ಮದ್ಯದಿಂದ ಕೆಟ್ಟದ್ದೇ ಜಾಸ್ತಿ ಆಗುತ್ತದೆ. ಒಳ್ಳೆಯದು ಕಡಿಮೆ ಎಂದರು.



