ದಾವಣಗೆರೆ: ದಾವಣಗೆರೆ-ಚಿತ್ರದುರ್ಗ- ತುಮಕೂರು ನೇರ ರೈಲ್ವೆ ಮಾರ್ಗ ಯೋಜನೆಯ ಶೇ.85ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣ ಗೊಂಡಿದೆ.ಇನ್ನು ಶೇ15ರಷ್ಟು ಬಾಕಿ ಉಳಿದಿರುವ ಭೂಸ್ವಾಧೀನ ಪ್ರಕ್ರಿಯೆ ಮುಗಿಸಲಾಗುವುದು ಎಂದು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
2027 ಕ್ಕೆ ಯೋಜನೆ ಪೂರ್ಣ
ಸುದ್ದಿಗಾರರೊಂದಿಗೆ ಮಾತನಾಡಿ, ಈ ಸಂಬಂಧ ಮೇ.17 ರಂದು ಚಿತ್ರದುರ್ಗದಲ್ಲಿ ರೈಲ್ವೆ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಸಭೆ ಕರೆಯಲಾಗಿದೆ. ಸಂಸದ ಗೋವಿಂದ ಕಾರಜೋಳ, ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. 2027 ಕ್ಕೆ ಯೋಜನೆ ಪೂರ್ಣಗೊಳ್ಳಲಿದೆ ಎಂದರು.
50 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜಬೆಗೆ ಚಾಲನೆ
ಕರ್ನಾಟಕದಲ್ಲಿ ಸುಮಾರು 40ರಿಂದ 50 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ 39 ಸಾವಿರ ಕೋಟಿ ರೂಪಾಯಿ ವೆಚ್ಚದ ವಿವಿಧ ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮೇ.15ರಂದು ಗದಗ-ಕುಷ್ಠಗಿ ರೈಲ್ವೆ ಯೋಜನೆ ಲೋಕಾರ್ಪಣೆ ಮಾಡುತ್ತೇವೆ ಎಂದರು.
ಸಿಂಧನೂರು-ರಾಯಚೂರು, ಲೋಕಾಪುರ-ಕಾಚಿಗುಡ ರೈಲ್ವೆ ಯೋಜನೆ ಒಂದೂವರೆ ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, 2026, 2027, 2028ರ ಒಳಗೆ ಎಲ್ಲಾ ಹಳೆಯ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು. ಇನ್ಮುಂದೆ ಅಪ್ರೋಚ್ ರಸ್ತೆಗಳ ನಿರ್ಮಾಣಕ್ಕೆ ಭೂಸ್ವಾಧೀನ ರಾಜ್ಯ ಸರ್ಕಾರ ಮಾಡಬೇಕು. ಉಳಿದ ಎಲ್ಲ ಪ್ರಕ್ರಿಯೆಯನ್ನು ಭಾರತ ಸರ್ಕಾರ ಮಾಡುತ್ತದೆ. ರೈಲ್ವೆ ಮೇಲ್ಸೇತುವೆ ಮತ್ತು ಕೆಳ ಸೇತುವೆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
ಲೆವಲ್ ಕ್ರಾಸಿಂಗ್ ಸಮಸ್ಯೆಗಳಿಗೆ ಮುಕ್ತಿ
ಲೆವಲ್ ಕ್ರಾಸಿಂಗ್ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯಂತೆ ಲೆವಲ್ ಕ್ರಾಸಿಂಗ್ ಸಮಸ್ಯೆಗಳಿಗೆ ಮುಕ್ತಿ ನೀಡಲಾಗುವುದು ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಲೆವಲ್ ಕ್ರಾಸಿಂಗ್ ಇರುವ ಕಡೆಗಳಲ್ಲಿ ಹಂತ ಹಂತವಾಗಿ ಕೆಳ ಅಥವಾ ಮೇಲ್ಸೇತುವೆ ನಿರ್ಮಾಣ ಮಾಡಿ ಆಗುವಂತಹ ಅಪಘಾತಗಳನ್ನು ತಗ್ಗಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಕವಚ್ ಯೋಜನೆ
ಹಿಂದಿಗಿಂತಲೂ ಈಗ ಅಪಘಾತಗಳ ಸಂಖ್ಯೆ ಕಡಿಮೆ ಆಗಿವೆ. ಅಪಘಾತಗಳನ್ನು ತಡೆಗಟ್ಟಲು ಕವಚ್ ಯೋಜನೆ ರೂಪಿಸಲಾಗಿದೆ. ಒಂದು ಲಕ್ಷ ಕಿ.ಮೀ.ದೂರ ಹಳಿ ಇದೆ. ಕರ್ನಾಟಕದಲ್ಲಿ 1 ಸಾವಿರದಿಂದ 2 ಸಾವಿರ ಕಿ.ಮೀ. ದೂರ ಪ್ರಾಯೋಗಿಕವಾಗಿ ಕವಚ್ ಯೋಜನೆ ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ. ಇದರಿಂದ ರೈಲುಗಳು ಎಷ್ಟೇ ವೇಗದಲ್ಲಿ ಬಂದರೂ 50 ಮೀಟರ್ ಅಂತರದಲ್ಲಿ ನಿಲ್ಲುತ್ತದೆ. ಇದರಿಂದ ಅಪಘಾತಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಸ್ಥಳೀಯ ಭಾಷೆಗಳಲ್ಲಿ ರೈಲ್ವೆ ನೇಮಕಾತಿ ಪರೀಕ್ಷೆ
ಕನ್ನಡ ಸೇರಿದಂತೆ 10 ಸ್ಥಳೀಯ ಭಾಷೆಗಳಲ್ಲಿ ರೈಲ್ವೆ ನೇಮಕಾತಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಆದರೆ ಬೇರೆ ರಾಜ್ಯಗಳ ಅಭ್ಯರ್ಥಿಗಳು ರೈಲ್ವೆ ನೇಮಕಾತಿ ಪರೀಕ್ಷೆ ಬರೆಯಲು ಆಸಕ್ತಿ ತೋರಿಸಿದಂತೆ ಕರ್ನಾಟಕದ ಅಭ್ಯರ್ಥಿಗಳು ಆಸಕ್ತಿ ತೋರಿಸುತ್ತಿಲ್ಲ. ರಾಜ್ಯದ ಅಭ್ಯರ್ಥಿಗಳು ರೈಲ್ವೆ ಪರೀಕ್ಷೆ ಬರೆದು ಉದ್ಯೋಗ ಪಡೆದುಕೊಳ್ಳಬೇಕು ಎಂದರು..