ಡಿವಿಜಿ ಸುದ್ದಿ, ದಾವಣಗೆರೆ: ಕೃಷಿ ವಿಸ್ತರಣೆಯಲ್ಲಿ ಡಿಪ್ಲೋಮಾ ಪಡೆದಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಕೃಷಿ ವಿಶ್ವ ವಿದ್ಯಾನಿಲಯ ಪ್ರೊ. ಜಿ. ಆರ್. ಪೆನ್ನೊಬಳಿಸ್ವಾಮಿ ಹೇಳಿದರು.
ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಕಾರ್ಯದರ್ಶಿಗಳಿಗೆ ಡಿಪ್ಲೋಮಾ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಮಟ್ಟದಲ್ಲಿ ರೈತರೊಂದಿಗೆ ನೇರ ಸಂಪರ್ಕದಲ್ಲಿರುವ ಸಂಘದ ಕಾರ್ಯದರ್ಶಿಗಳು ಒಂದು ವರ್ಷದ ಕೃಷಿ ವಿಜ್ಞಾನದಲ್ಲಿ ಡಿಪ್ಲೋಮಾ ಪಡೆದಿದ್ದಾರೆ. ಶಿಫಾರಸ್ಸು ಮಾಡಿರುವ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸಲು ರೈತರಿಗೆ ತಿಳಿಸಿಕೊಡುವ ಮೂಲಕ ಉತ್ಪಾದನಾ ಖರ್ಚನ್ನು ಗಣನೀಯವಾಗಿ ಕಡಿಮೆ ಮಾಡಲು ಅವಕಾಶವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಹಿರಿಯ ವಿಜ್ಞಾನಿ ಡಾ. ದೇವರಾಜ ಟಿ.ಎನ್., ಡಿಪ್ಲೋಮಾ ಪಡೆದಿರುವ ಕಾರ್ಯದರ್ಶಿಗಳು ರೈತರು ಮತ್ತು ಕೃಷಿ ಸಂಶೋಧನಾ ಕೇಂದ್ರಗಳ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕು. ಇದರಿಂದ ರೈತರು ತಮ್ಮ ಸಮಸ್ಯೆಗಳಿಗೆ ದೂರ ಪ್ರಯಾಣ ಮಾಡುವುದು ತಪ್ಪುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕರಾದ ಡಾ. ಶ್ರೀನಿವಾಸ ಚಿಂತಾಲ್, ಸಂಯೋಜಕರಾದ ಶ್ರೀ ಸಿ.ಟಿ. ಚಂದ್ರಪ್ಪ ನವರು, ೪೦ ಕಾರ್ಯದರ್ಶಿಗಳು ಹಾಗೂ ಕೇಂದ್ರದ ಸಿಬ್ಬಂದಿಯವರು ಹಾಜರಿದ್ದರು.



