ಸಿರಿಗೆರೆ: ಸಂಸ್ಕೃತ ಮತ್ತು ಕನ್ನಡ ಭಾಷೆಗಳು ತಾಯಿ–ಮಗಳಿದ್ದಂತೆ. ಇತ್ತೀಚೆಗೆ ಅತ್ತೆ–ಸೊಸೆ ಸಂಬಂಧದ ರೀತಿ ಬದಲಾದಂತೆ ಕಾಣುತ್ತಿವೆ ಎಂದು ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ತರಳಬಾಳು ಶಿಕ್ಷಣ ಸಂಸ್ಥೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಆಯೋಜಿಸಿದ್ದ `ಆದಿಕವಿ’ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಶ್ರೀಗಳು, ಸಾಮಾನ್ಯವಾಗಿ ತಪ್ಪನ್ನು ಜನರು ಮಾಡುವುದಿಲ್ಲ. ಜನನಾಯಕರು ಮಾಡುತ್ತಾರೆ. ಸಾಮಾಜಿಕ ಹೊಣೆಗಾರಿಕೆ ಮರೆಯುತ್ತಾರೆ. ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಭಕ್ತರು ಬರುವ ಮುನ್ಸೂಚನೆ ಸಿಕ್ಕಿತು. ಕೊರೊನಾ ಸೋಂಕಿನ ಸಂದರ್ಭದಲ್ಲಿ ಜನದಟ್ಟಣೆ ಸೇರುವುದು ಸರಿಯಲ್ಲ. ಭಕ್ತರು ಬರದಂತೆ ಸೂಚನೆ ನೀಡುವುದು ಕಷ್ಟವಾಯಿತು. ಆದರೂ, ಜನ ಸೇರದಂತೆ ನೋಡಿಕೊಳ್ಳಲಾಯಿತು ಎಂದು ಹೇಳಿದರು.

ಕೊರೊನಾ ಸೋಂಕಿನ ಕಾರಣ ದಿಂದ ವರ್ಷದಿಂದ ಸಭೆ ಸಮಾರಂಭಗಳಿಗೆ ಹೋಗದೆ ಮೌನವಾಗಿರುವುದು ಅನಿ ವಾರ್ಯವಾಗಿತ್ತು. ಸಾಹಿತ್ಯ, ಸಂಸ್ಕೃತಿಯ ಮೇಲಿನ ಪ್ರೀತಿಯಿಂದ ಕೊಡುತ್ತಿರುವ ಆದಿಕವಿ ಪ್ರಶಸ್ತಿ ಸ್ವೀಕರಿಸಲೂ ಆಗದೆ, ನಿರಾಕರಿಸಲೂ ಆಗದೆ ಲೌಖಿಕ ಭಾವನೆಗೆ ಒಳಗಾಗುವ ಆತಂಕವಿತ್ತು ಎಂದರು. ಪ್ರಶಸ್ತಿಯೊಂದಿಗೆ ನೀಡಿದ 1 ಲಕ್ಷ ನಗದನ್ನು ಸಿರಿಗೆರೆಯ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪುರಸ್ಕರಿಸಲು ದತ್ತಿ ನಿಧಿ ಸ್ಥಾಪಿಸಲು ಮೀಸಲಿಡಲಾಗುವುದು ಎಂದು ಶ್ರೀಗಳು ತಿಳಿಸಿದರು.
ಧರ್ಮಜಾಗರಣ ಸಹಸಂಯೋಜಕ ಡಾ.ಹನುಮಂತ ಮಳಲಿ ಮಾತನಾಡಿ ಯೋಗ, ಭರತನಾಟ್ಯ, ಸಂಗೀತ, ಸೊನ್ನೆ ಎಲ್ಲವನ್ನೂ ವಿಶ್ವಕ್ಕೆ ಕೊಡುಗೆ ನೀಡಿದವರು ಭಾರತೀಯರು. ಇತ್ತೀಚೆಗೆ ವಚನಗಳನ್ನು ಅನೇಕರು ತಮ್ಮ ಮೂಗಿನ ನೇರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಎಂದು ಅಭಿಪ್ರಯಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್.ವೇಣು ಗೋಪಾಲ್ ಮಾತನಾಡಿ, ತರಳಬಾಳು ಜಗದ್ಗುರು ರಾಜ್ಯದಲ್ಲಿ 200 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವುದನ್ನು ಕೇಳಿ ಆಶ್ಚರ್ಯವಾಯಿತು. ಶ್ರೀಗಳ ಸಂಸ್ಕೃತ ಮತ್ತು ಕಂಪ್ಯೂಟರ್ ಆಳವಾದ ಜ್ಞಾನವಿದೆ ಎಂದರು.
ಶ್ರೀಗಳು ಬೋಧಕರಾಗಿ, ಉಪಾಧ್ಯಾಯರಾಗಿ, ಆಚಾರ್ಯರಾಗಿ, ಗುರುಗಳಾಗಿ, ಪ್ರವಾದಿಗಳಾಗಿ ದೇವರಾಗುವ ದಾರಿಯಲ್ಲಿ ಸಾಗುತ್ತಿದ್ದಾರೆ. ದಾನ, ಸಮರ್ಪಣೆ, ಸೇವೆಗಳ ಮೂಲಕ ತ್ಯಾಗ ಮೂರ್ತಿಗಳಾಗಿದ್ದಾರೆ. ಅವರ ಸೇವೆ ಅಪಾರ ಮತ್ತು ಅನುಪಮ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಾಗ್ದೇವಿ ಪ್ರಶಸ್ತಿ ಪುರಸ್ಕೃತ ಡಾ.ಶಂಕರ ರಾಜಾರಾಮನ್, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್, ನಾಕಿಕೆರೆ ತಿಪ್ಪೇಸ್ವಾಮಿ, ಆದಿಕವಿ ಪುರಸ್ಕಾರದ ಪ್ರಾಯೋಜಕ ಉದ್ಯಮಿ ಎಸ್.ಜಯರಾಮ್, ಪರಿಷತ್ತಿನ ಉಪಾಧ್ಯಕ್ಷ ಹರಿಪ್ರಕಾಶ್ ಕೋಣೆಮನೆ ಉಪಸ್ಥಿತರಿದ್ದರು.