ಡಿವಿಜಿ ಸುದ್ದಿ, ಬಾಗಲಕೋಟೆ : ಇದು ಜನರಲ್ ಎಲೆಕ್ಷನ್ ಅಲ್ಲ, ಉಪ ಚುನಾವಣೆಯಷ್ಟೇ. 2023ಕ್ಕೆ ಜನರಲ್ ಎಲೆಕ್ಷನ್ ಬರುತ್ತದೆ. ಆಗ ನಾವು ಗೆದ್ದೇಗೆಲ್ಲುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಆರ್ಆರ್ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಭಾರೀ ಹಿನ್ನಡೆಯಾಗಿದೆ. ಬಿಜೆಪಿ ಎದುರು ಕಾಂಗ್ರೆಸ್ ಸೋಲನ್ನು ಅನುಭವಿಸಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಬಾಗಲಕೋಟೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಸೋಲಿನ ಹೊಣೆಯನ್ನು ಡಿಕೆ ಶಿವಕುಮಾರ್ ಯಾಕೆ ಹೊರಬೇಕು? ಯಾರೇ ಅಧ್ಯಕ್ಷರಾದರೂ ಅಷ್ಟೇ. ಸೋಲಿನ ಹೊಣೆಯನ್ನು ಅವರು ಹೊರಬೇಕಾದ ಅಗತ್ಯವಿಲ್ಲ. ಅಧ್ಯಕ್ಷರಾದ ತಕ್ಷಣ ಹೊಣೆ ಹೊರಬೇಕಾ? ಆರ್ಆರ್ ನಗರ ಮತ್ತು ಶಿರಾ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಶಿರಾದಲ್ಲಿ ನಾವು ಗೆಲ್ಲುವ ನಿರೀಕ್ಷೆ ಇತ್ತು. ಆರ್ ಆರ್ ನಗರದಲ್ಲಿ ಫೈಟ್ ಕೊಡುತ್ತೇವೆ ಎಂದುಕೊಂಡಿದ್ದೆವು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಕೊಟ್ಟ ತೀರ್ಪನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ ಎಂದರು.
ಚುನಾವಣೆಯನ್ನು ನಿಷ್ಪಕ್ಷಪಾತ, ಮುಕ್ತವಾಗಿ ನಡೆಸಬೇಕು. ನನಗೆ ಇರುವ ಮಾಹಿತಿ ಪ್ರಕಾರ ಬಿಜೆಪಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.ಬೈ ಎಲೆಕ್ಷನ್ ಬಳಿಕ ಬಿಎಸ್ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯುವ ತಮ್ಮ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಮತ್ತೊಮ್ಮೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.ನನಗಿರುವ ಮಾಹಿತಿ ಪ್ರಕಾರ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗೆ ಇಳಿಯುತ್ತಾರೆ ಎಂದಿದ್ದಾರೆ.
ಉಪ ಚುನಾವಣೆಯಲ್ಲಿ ಹೆಚ್ಡಿ ಕುಮಾರಸ್ವಾಮಿ ಅವರಿಗೆ ಬಿಜೆಪಿ ಗೆಲ್ಲಬೇಕೆಂಬ ಬಯಕೆಯಿತ್ತು. ಹಾಗಾಗಿ, ಅವರು ನನ್ನನ್ನು ಟಾರ್ಗೆಟ್ ಮಾಡಿದರು. ಆರ್ಆರ್ ನಗರದಲ್ಲಿ ಬಿಜೆಪಿ- ಜೆಡಿಎಸ್ ಹೊಂದಾಣಿಕೆ ಆಗಿತ್ತು ಅನಿಸುತ್ತದೆ. ಅದಕ್ಕೆ ಜೆಡಿಎಸ್ ಬಹಳ ಮತ ತೆಗೆದುಕೊಳ್ಳಲಿಲ್ಲ ಎಂದು ದಳಪತಿಗಳನ್ನು ಮಾತಿನಲ್ಲಿಯೇ ಕುಟುಕಿದರು.



