ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು (ಫೆ.27) ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 13 ನೇ ಕಂತು ಬಿಡುಗಡೆ ಮಾಡಲಿದ್ದಾರೆ. 8 ಕೋಟಿಗೂ ಹೆಚ್ಚು ಅರ್ಹ ರೈತರಿಗೆ ಒಟ್ಟು 16,800 ಕೋಟಿ ರೂಪಾಯಿಗಳ ಆರ್ಥಿಕ ಪ್ರಯೋಜನಗಳ 13 ನೇ ಕಂತನ್ನು ಪ್ರಧಾನಿ ವರ್ಗಾಯಿಸುವರು.
ಇಂದು ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿಯೇ 13 ನೇ ಕಂತಿನ ಬಿಡುಗಡೆ ಮಾಡುವರು. ಬೆಳಗಾವಿಯಲ್ಲಿ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಡಿಬಿಟಿ ಮೂಲಕ ರೈತರ ಖಾತೆಗೆ ಪಿಎಂ ಕಿಸಾನ್ 13 ನೇ ಕಂತು ವರ್ಗಾವಣೆಗೆ ಚಾಲನೆ ನೀಡುವರು. ಪಿಎಂ-ಕಿಸಾನ್ ಯೋಜನೆಯಡಿ ಅರ್ಹ ಪ್ರತಿ ರೈತರಿಗೆ ಪ್ರಧಾನಮಂತ್ರಿ 2000 ರೂಪಾಯಿಗಳನ್ನು ಬಿಡುಗಡೆ ಮಾಡಲಿದ್ದಾರೆ. ವರ್ಷಕ್ಕೆ ಮೂರು ಕಂತುಗಳಲ್ಲಿ 6,000 ರೂ. ನೀಡಲಾಗುವುದು. ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ. ವಿತರಿಸಲಾಗುತ್ತದೆ.



