ನವದೆಹಲಿ: ಇಡೀ ದೇಶದಲ್ಲಿಯೇ ಕಳೆದ ವರ್ಷ (2023) ಕ್ಷೀಣಿಸಿದ್ದ ಮುಂಗಾರು ಈ ವರ್ಷ ಸಮೃದ್ಧವಾಗಿ ಮಳೆ ಸುರಿಸಲಿದೆ ಎಂದು ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ. ಹಿಂದಿನ ವರ್ಷ ಹವಮಾನದಲ್ಲಿ ಎಲ್ ನಿನೋ ಪ್ರಭಾವದಿಂದ ಮುಂಗಾರು ಮಳೆ ಸಕಾಲಕ್ಕೆ ಬರದೇ ರೈತರು ತೀವ್ರ ಸಂಕಷ್ಠಕ್ಕೆ ಸಿಲುಕಿದ್ದರು.
ಜಾಗತಿಕ ಹವಾಮಾನದ ಮೇಲೆ ಪರಿಣಾಮ ಬೀರುವ ಸಮಭಾಜಕ ಪೆಸಿಫಿಕ್ ಸಾಗರದ ಉಷ್ಣತೆ ಎಲ್ ನಿನೋ ಸ್ಥಿತಿ ದುರ್ಬಲವಾಗಿದ್ದು, ಜೂನ್ ವೇಳೆಗೆ ಉತ್ತಮ ಮಳೆಯಾಗಲಿದೆ ಎಂದು ಕನಿಷ್ಟ ಎರಡು ಜಾಗತಿಕ ಮಟ್ಟದ ಏಜೆನ್ಸಿಗಳು ಹೇಳಿವೆ.
ಭಾರತದಲ್ಲಿನ ಹವಾಮಾನ ವಿಜ್ಞಾನಿಗಳು, ಬೆಳವಣಿಗೆಗಳನ್ನು ವಿಶ್ಲೇಷಣೆ ಮಾಡಿದ್ದು, ಜೂನ್-ಆಗಸ್ಟ್ ವೇಳೆಗೆ ಲಾ ನಿನಾ ಪರಿಸ್ಥಿತಿಗಳು ಸುಧಾರಿಸಲಿದ್ದು ಕಳೆದ ವರ್ಷಕ್ಕಿಂತ ಈ ವರ್ಷ ಮಾನ್ಸೂನ್ ಮಳೆ ಉತ್ತಮವಾಗಿರಬಹುದು ಎಂದು ಹೇಳಿದ್ದಾರೆ. ಹವಾಮಾನ ಮಾದರಿಗಳು ನಿಖರವಾದ ಮುನ್ಸೂಚನೆಗಳನ್ನು ಮಾಡಲು ಕಷ್ಟಕರವಾದರೂ ಹವಾಮಾನ ತಜ್ಞರು ಈ ಬಾರಿ ಉತ್ತಮ ಮಳೆ ಎಂದಿದ್ದಾರೆ.
ಭೂ ವಿಜ್ಞಾನ ಸಚಿವಾಲಯದ ಮಾಜಿಕಾರ್ಯದರ್ಶಿ ಮಾಧವನ್ ರಾಜೀವನ್ ಮಾತನಾಡಿ, ಜೂನ್-ಜುಲೈ ವೇಳೆಗೆ ಲಾ ನಿನಾ ಅಭಿವೃದ್ಧಿಗೊಳ್ಳುವ ಉತ್ತಮ ಸಂಭವನೀಯತೆ ಇದೆ. ಎಲ್ ನಿನೋ ENSO- ತಟಸ್ಥ ಪರಿಸ್ಥಿತಿಗಳಿಗೆ ಪರಿವರ್ತನೆಯಾದರೂ, ಈ ವರ್ಷ ಮಾನ್ಸೂನ್ ಕಳೆದ ವರ್ಷಕ್ಕಿಂತ ಉತ್ತಮವಾಗಿರಬೇಕು” ಎಂದು ಅವರು ಹೇಳಿದ್ದಾರೆ. ನೈಋತ್ಯ ಮುಂಗಾರು ಭಾರತದ ವಾರ್ಷಿಕ ಮಳೆಯ ಸುಮಾರು 70 ಪ್ರತಿಶತವನ್ನು ನೀಡುತ್ತದೆ, ಇದು ಜಿಡಿಪಿಯ ಸುಮಾರು 14 ಪ್ರತಿಶತವನ್ನು ಹೊಂದಿರುವ, ಮತ್ತು 1.4 ಶತಕೋಟಿ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕೃಷಿ ಕ್ಷೇತ್ರಕ್ಕೆ ನಿರ್ಣಾಯಕವಾಗಿದೆ.
ಯುನೈಟೆಡ್ ಸ್ಟೇಟ್ಸ್ನ ನ್ಯಾಷನಲ್ ಓಷಿಯಾನಿಕ್ ಅಂಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ (NOAA) ಕಳೆದ ವಾರ ಏಪ್ರಿಲ್-ಜೂನ್ ವೇಳೆಗೆ ಎಲ್ ನಿನೋ ENSO-ತಟಸ್ಥವಾಗಿ ಪರಿವರ್ತನೆಯಾಗುವ ಸಾಧ್ಯತೆ 79 ಪ್ರತಿಶತವಿದೆ ಮತ್ತು ಜೂನ್-ಆಗಸ್ಟ್ನಲ್ಲಿ ಲಾ ನಿನಾ ಅಭಿವೃದ್ಧಿಗೊಳ್ಳುವ ಸಾಧ್ಯತೆ 55 ಪ್ರತಿಶತವಿದೆ ಎಂದು ಹೇಳಿದೆ.