ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆ ಮತ ಎಣಿಕೆಯಲ್ಲಿ ಮೋಸ ನಡೆದಿದೆ. ಆಡಳಿತಾರೂಢ ಎನ್ಡಿಎ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೆವಾಲಾ ಆರೋಪಿಸಿದ್ದಾರೆ.
ಕಿಶನ್ಗಂಜ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ 1,266 ಮತಗಳಿಂದ ಜಯಗಳಿಸಿದ್ದಾರೆ. ಆದರೂ ಅವರಿಗೆ ಗೆಲುವಿನ ಪ್ರಮಾಣಪತ್ರ ನೀಡಿಲ್ಲ. ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಲಾಗುತ್ತಿದೆ. ಜನರ ತೀರ್ಪನ್ನು ಅಪಹರಿಸಲಾಗುತ್ತಿದೆ ಎಂದು ಸುರ್ಜೆವಾಲಾ ಮಂಗಳವಾರ ತಡರಾತ್ರಿ ಟ್ವೀಟ್ ಮಾಡಿದ್ದಾರೆ.
ಸಕ್ರಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಯು 600 ಮತಗಳಿಂದ ಗೆದ್ದಿದ್ದಾರೆ. ಆದರೆ ಅವರು 1,700 ಮತಗಳಿಂದ ಸೋತಿದ್ದಾರೆ ಅಂತ ಘೋಷಿಸಲಾಗಿದೆ ಎಂದು ಸುರ್ಜೆವಾಲಾ ಆರೋಪಿಸಿದ್ದಾರೆ.
ಇದಕ್ಕೂ ಮುನ್ನ, ಮಂಗಳವಾರ ರಾತ್ರಿ ಮಹಾಘಬಂಧನದ ನಾಯಕರು ಅಧಿಕಾರದ ದುರ್ಬಳಕೆ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಆದರೆ ಮತಎಣಿಕೆಯಲ್ಲಿ ಅಕ್ರಮ ನಡೆದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡಿತ್ತು.



