ಹಾಸನ: ರೈತರ ಜಮೀನಿನ ನಮೂನೆ1 ರಿಂದ 5 ಪೋಡಿ ದುರಸ್ಥಿ ಸರಳೀಕೃತ ಕಾರ್ಯಕ್ಕೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಬಾಗೀವಾಳು ಗ್ರಾಮದಲ್ಲಿ ರೈತರ ಜಮೀನಿಂದಲೇ ಅಧೀಕೃತವಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ಚಾಲನೆ ನೀಡಿದರು.
- ರೈತರ ಜಮೀನಿನ ನಮೂನೆ1 ರಿಂದ 5 ಪೋಡಿ ದುರಸ್ಥಿ ಸರಳೀಕೃತ ಕಾರ್ಯಕ್ಕೆ ಚಾಲನೆ
- ರಾಜ್ಯದಲ್ಲಿ ಒಟ್ಟು 1,96,000 ಸರ್ಕಾರಿ ಸರ್ವೇ ನಂಬರ್
- ಸರ್ಕಾರದಿಂದ ಜಮೀನು ಮಂಜೂರಾಗಿ 30-40 ವರ್ಷ ಆಗಿದ್ದರೂ ಜಮೀನಿಗೆ ಪೋಡಿ ದುರಸ್ಥಿ ಆಗಿಲ್ಲ
- 1,96,000 ಸರ್ಕಾರಿ ಸರ್ವೇ ನಂಬರ್ ದುರಸ್ಥಿಗೊಳಿಸುವ ಗುರಿ
- 20 ರಿಂದ 25 ಲಕ್ಷ ರೈತ ಕುಟುಂಬಗಳ ಹಲವು ದಶಕಗಳ ಸಮಸ್ಯೆ ಬಗೆಹರಿಸುವ ಉದ್ದೇಶ
ರಾಜ್ಯದಲ್ಲಿ ಒಟ್ಟು 1,96,000 ಸರ್ಕಾರಿ ಸರ್ವೇ ನಂಬರ್ ಇದ್ದು, ನಾನಾ ಸರ್ಕಾರಿ ಯೋಜನೆಗಳ ಅಡಿ ಕಳೆದ 30-40 ವರ್ಷಗಳಿಂದ ಲಕ್ಷಾಂತರ ಜನರಿಗೆ ಸರ್ಕಾರಿ ಜಮೀನು ಮಂಜೂರಾಗಿದೆ. 30-40 ವರ್ಷ ಆಗಿದ್ದರೂ ಜಮೀನಿಗೆ ಪೋಡಿ ದುರಸ್ಥಿ ಆಗಿಲ್ಲ. ದಾಖಲೆ ಪಕ್ಕ ಆಗಿಲ್ಲ. ಇಂತಹ ಪ್ರಕರಣಗಳೇ ರಾಜ್ಯದಲ್ಲಿ ಕನಿಷ್ಟ 25 ಲಕ್ಷ ಇರಬಹುದು ಎಂದರು.
ಪಕ್ಕ ಪೋಡಿ ದುರಸ್ಥಿ ಮಾಡಲು ನಮೂನೆ 1 ರಿಂದ 5 ಹಾಗೂ 5 ರಿಂದ 10 ದಾಖಲೆ ಲಭ್ಯವಿರಬೇಕು. ಆದರೆ, ಈ ದಾಖಲೆಗಳಿಲ್ಲದೆ ಲಕ್ಷಾಂತರ ರೈತರು ಸಂಕಷ್ಟಕ್ಕೆ ಒಳಗಾದ್ದಾರೆ. ಸರ್ಕಾರಿ ಕಚೇರಿಗಳಿಗೆ ದಶಕಗಳಿಂದ ಅಲೆಯುತ್ತಿದ್ದರೂ ಪರಿಹಾರ ಮಾತ್ರ ಲಭ್ಯವಾಗಿಲ್ಲ. ಕಳೆದ ಒಂದು ವರ್ಷಗಳಿಂದ ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಸತತ ಸಭೆ ನಡೆಸಿ, ಚರ್ಚಿಸಿ ಕೊನೆಗೂ ನಮೂನೆ 1 ರಿಂದ 5 ಪೋಡಿ ದುರಸ್ಥಿ ಕೆಲಸವನ್ನು ಸರಳೀಕರಣಗೊಳಿಸಿ ಇದೀಗ ಸರ್ಕಾರಿ ಆದೇಶ ಹೊರಡಿಸಲಾಗಿದೆ ಎಂದರು.
ಆನ್ ಲೈನ್ ನಲ್ಲಿ ಡಿಜಿಟಲ್ ಪ್ರಕ್ರಿಯೆಗಾಗಿ ಆಪ್ ರೂಪಿಸಲಾಗಿದೆ. 1,96,000 ಸರ್ಕಾರಿ ಸರ್ವೇ ನಂಬರ್ಗಳನ್ನೂ ದುರಸ್ಥಿಗೊಳಿಸಬೇಕು ಎಂಬುದು ನಮ್ಮ ಗುರಿ. ಮೊದಲ ಹಂತದಲ್ಲಿ ಈಗಾಗಲೇ 27,107 ಫೈಲ್ ಸೃಷ್ಟಿಸಲಾಗಿದೆ.ಇದರ ಜೊತೆಗೆ ನಮೂನೆ 6 ರಿಂದ 10 ರ ಸರ್ವೇ ಕೆಲಸಕ್ಕೂ ವಿದ್ಯುಕ್ತ ಚಾಲನೆ ನೀಡಲಾಗಿದೆ ಎಂದರು.
ಈ ಸಮಾರಂಭದಲ್ಲಿ 200 ಜನಕ್ಕೆ ಪೋಡಿ ದುರಸ್ಥಿ ಮಾಡಿ ಹೊಸ ಸರ್ವೇ ನಂಬರ್ ನೀಡಲಾಗುತ್ತಿದೆ. ಇಂದಿನ ಪೋಡಿ ದುರಸ್ಥಿ ಅಭಿಯಾನ ಪೇಪರ್ನಿಂದ ಮಾತ್ರವಲ್ಲ ಫೀಲ್ಢ್ ನಿಂದಲೂ ಆರಂಭವಾಗಲಿದ್ದು, ಈ ಕೆಲಸ ಸಂಪೂರ್ಣವಾಗಿ ಮುಗಿದರೆ ಕನಿಷ್ಟ 20 ರಿಂದ 25 ಲಕ್ಷ ರೈತ ಕುಟುಂಬಗಳ ಹಲವು ದಶಕಗಳ ಸಮಸ್ಯೆ ಬಗೆಹರಿಯಲಿದೆ ತಿಳಿಸಿದ್ದಾರೆ.