ಬೆಂಗಳೂರು: ಕೆಎಸ್ ಆರ್ ಟಿಸಿ ನೌಕರರ ವಿವಿಧ ಭೇಡಿಕೆ ಈಡೇರಿಕೆಗೆ ಆಗ್ರಹಿಸಿ ಏಪ್ರಿಲ್ 1 ರಿಂದ 7ರವರೆಗೆ ವಿವಿಧ ರೀತಿಯ ಪ್ರತಿಭಟನೆ ನಡೆಸಲಾಗುವುದು ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಮುಷ್ಕರ ಬಗ್ಗೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಅವರು, ಏಪ್ರಿಲ್ 1 ರಂದು ಎಲ್ಲಾ ನಿಗಮಗಳ ನೌಕರರು ಕೈಗೆ ಕಪ್ಪು ಪಟ್ಟಿ ಧರಿಸಿ ಕೆಲಸ ನಿರ್ವಹಣೆ ಮಾಡಲಿದ್ದಾರೆ, 2 ರಂದು ಬೆಂಗಳೂರು ಹೊರತು ಪಡಿಸಿ ರಾಜ್ಯದ ಎಲ್ಲಾ ಕಡೆಗಳಲ್ಲಿ ರಸ್ತೆಬದಿಯಲ್ಲಿ ಬಸ್ ನಿಲ್ದಾಣಗಳಲ್ಲಿ ವಡೆ ಬೋಂಡಾ ಹಾಕಿ ವಿಭಿನ್ನ ಪ್ರತಿಭಟನೆ ಮಾಡಲಾಗುವುದು. 7ನೇ ತಾರೀಖು ಎಲ್ಲರೂ ಬಸ್ ಬಂದ್ ಮಾಡಿ ಮುಷ್ಕರದಲ್ಲಿ ಎಲ್ಲಾ ಸಾರಿಗೆ ನಿಗಮಗಳ ನೌಕರರು ಭಾಗಿಯಾಗಲಿದ್ದಾರೆ ಎಂದರು.
ವಿವಿಧ ಈಡೇರಿಕೆಗೆ ಆಗ್ರಹಿಸಿ ಈಗಾಗಲೇ ಸಾರಿಗೆ ನೌಕರರು ಅನೇಕ ಬಾರಿ ಮುಷ್ಕರ ಮಾಡಿದ್ದಾರೆ. ಆದರೆ ಇದುವರೆಗೂ ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಿಲ್ಲ. ಹೀಗಾಗಿ ಮುಷ್ಕರ ನಡೆಸುವುದು ಅನಿವಾರ್ಯ. ಏಪ್ರಿಲ್ 1ಕ್ಕೆ ಮತ್ತೊಂದು ಸುತ್ತಿನ ಮಾತುಕತೆಗೆ ಸಾರಿಗೆ ಇಲಾಖೆ ನಮ್ಮನ್ನ ಕರೆದಿದೆ. ನಮ್ಮ ಬೇಡಿಕೆಗಳು ಈಡೇರಿದರೆ ನಾವು ಮುಷ್ಕರ ಕೈ ಬಿಡಲಾಗುವುದು ಎಂದರು.
ಸಾರಿಗೆ ನೌಕರರನ್ನ 6ನೇ ವೇತನ ಆಯೋಗದ ಅಡಿಯಲ್ಲಿ ತರಬೇಕು ಎನ್ನುವುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಸಾರಿಗೆ ಸಚಿವರು ಹೇಳಿರುವ ಹಳೆ ಮಾತುಗಳನ್ನೇ ಹೇಳುತ್ತಿದ್ದಾರೆ. ಏಪ್ರಿಲ್ 7ರಂದು ಬಸ್ ಬಂದ್ ಮಾಡಿ ನಮ್ಮ ಸತ್ಯಾಗ್ರಹ ಮಾಡ್ತೀವಿ ಎಂದರು.



