ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಕಲಿ ಲೆಟರ್ಹೆಡ್ ಮತ್ತು ಸಹಿ ಬಳಸಿಕೊಂಡು, ಅವರ ಆಪ್ತ ಸಹಾಯಕರಾಗಿ ವಿಧಾನಸಭಾ ಸಚಿವಾಲಯದಿಂದ ಮಹಿಳೆಯೊಬ್ಬರು ಹುದ್ದೆ ಪಡೆದ ಆರೋಪ ಹಿನ್ನೆಲೆ ದೂರು ದಾಖಲಾಗಿದೆ.
ಈ ಸಂಬಂಧ ವಿಧಾನಸಭಾ ಸಚಿವಾಲಯದ ಅಧೀನ ಕಾರ್ಯದರ್ಶಿ ಲಲಿತಾ ನೀಡಿರುವ ದೂರು ಆಧರಿಸಿ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಸೋಲೂರು ನಿವಾಸಿ ಕೆ.ಸಿ. ವಿನುತಾ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ವಿನುತಾ ಅವರನ್ನು ತಮ್ಮ ಆಪ್ತ ಸಹಾಯಕರನ್ನಾಗಿ ನೇಮಿಸುವಂತೆ ಶಾಸಕರು ಮನವಿ ಮಾಡಿರುವಂತೆ ಶಾಸಕರ ಲೆಟರ್ಹೆಡ್ನಲ್ಲಿ ಪತ್ರ ತಯಾರಿಸಿ, ಸಹಿ ಮಾಡಿ ವಿಧಾನಸಭಾ ಸಚಿವಾಲಯಕ್ಕೆ ಸಲ್ಲಿಸಿ. ಶಾಮನೂರು ಶಿವಶಂಕರಪ್ಪ ಅವರೇ ನೀಡಿರುವ ಪತ್ರವೆಂದು ಭಾವಿಸಿದ್ದ ಸಚಿವಾಲಯದ ಅಧಿಕಾರಿಗಳು, ವಿನುತಾ ಅವರನ್ನು ಆಪ್ತ ಸಹಾಯಕರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದರು. ಬಳಿಕ ತಾವು ಪತ್ರ ನೀಡಿಲ್ಲ, ಅದು ನಕಲಿ ಎಂದು ಶಿವಶಂಕರಪ್ಪ ಅವರು ವಿಧಾನಸಭಾ ಸಚಿವಾಲಯದ ಗಮನಕ್ಕೆ ತಂದರು. ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆರೋಪಿಯನ್ನು ಶೀಘ್ರ ವಶಕ್ಕೆ ಪಡೆದು ವಿಚಾರಣೆ ನಡೆಯಲಿದೆ.