ಹಾವೇರಿ: ಆಸ್ತಿಗಾಗಿ ತಂದೆ-ತಾಯಿಯನ್ನು ಮಕ್ಕಳು ಮನೆಯಿಂದ ಹೊರ ಹಾಕುವ ಘಟನೆಗಳು ಇತ್ತೀಚೆಗೆ ಸಾಮಾನ್ಯವಾಗಿವೆ. ತಾಯಿ ಎಷ್ಟೇ ಪ್ರೀತಿಯಿಂದ ಸಾಕಿದ್ರು ಮಕ್ಕಳು ಆಸ್ತಿಗಾಗಿ ತಂದೆ-ತಾಯಿಯನ್ನು ಮನೆಯಿಂದ ಆಚೆ ಹಾಕಲು ಹಿಂದೆ ಮುಂದೆ ನೋಡಲ್ಲ. ಹಾವೇರಿಯಲೊಂದು ಇಂತಹದೇ ಘಟನೆ ನಡೆದಿದೆ. ಆಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಂಡು ತಾಯಿಯನ್ನ ಮಕ್ಕಳು ಹೊರಹಾಕಿದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ವೀರಾಪುರ ಗ್ರಾಮದಲ್ಲಿ ನಡೆದಿದೆ. ಆದ್ರೆ, ಈ ಪ್ರಕರಣದಲ್ಲಿ ತಾಯಿ ತನ್ನ ಮಕ್ಕಳ ವಿರುದ್ಧವೇ ಹೋರಾಡಿ ತನ್ನ ಆಸ್ತಿ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ವೀರಾಪುರ ಗ್ರಾಮದಲ್ಲಿ ಎಪ್ಪತ್ತಾರು ವರ್ಷದ ಪ್ರೇಮವ್ವ ಹವಳಣ್ಣ ಅವರ ಮಕ್ಕಳು ಆಸ್ತಿ ಬರೆಸಿಕೊಂಡು ಮನೆಯಿಂದ ಹೊರ ಹಾಕಿದ್ದರು. ಪ್ರೇಮವ್ವ ಹವಳಣ್ಣನವರಿಗೆ ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು. ಪತಿ ಶ್ರೀಕಾಂತ ನಿಧನರಾದ ನಂತರ ಪತಿ ಹೆಸರಿನಲ್ಲಿದ್ದ 3 ಎಕರೆ 32 ಗುಂಟೆ ಜಮೀನನ್ನು ಧನಿಕುಮಾರ ಮತ್ತು ಸಂತೋಷ ಎಂಬ ಇಬ್ಬರು ಗಂಡು ಮಕ್ಕಳು ತಮ್ಮ ಹೆಸರಿಗೆ ಮಾಡಿಕೊಂಡಿದ್ದರು. ಇದಲ್ಲದೆ ಎರಡೂ ಮನೆಗಳನ್ನ ತಮ್ಮ ಹೆಸರಿಗೆ ಮಾಡಿಕೊಂಡು ಕಿರುಕುಳ ನೀಡಿ ತಾಯಿಯನ್ನ ಮನೆಯಿಂದ ಹೊರಹಾಕಿದ್ದರು. ಕಳೆದ ಮೂರು ವರ್ಷಗಳಿಂದ ವೃದ್ಧ ತಾಯಿ ಪ್ರೇಮವ್ವ ಮನೆಯಿಂದ ಹೊರಗಿದ್ದರು.
ಮಕ್ಕಳ ವಿರುದ್ಧ ಹೋರಾಟ ಮಾಡಿ ಮರಳಿ ಆಸ್ತಿ ಪಡೆದುಕೊಂಡ ವೃದ್ಧ ತಾಯಿ
ಒಂದೂವರೆ ವರ್ಷ ಅಲ್ಲಿ ಇಲ್ಲಿ ಅಲೆದಾಡಿ ನಂತರ ಒಂದೂವರೆ ವರ್ಷದಿಂದ ಹಾವೇರಿಯ ಈಡಾರಿ ಸಂಸ್ಥೆಯ ಮಹಿಳಾ ಸಾಂತ್ವನ ಕೇಂದ್ರ ಸೇರಿದ್ದ ವೃದ್ಧ ತಾಯಿ ಪ್ರೇಮವ್ವ ಕೊನೆಗೂ ಮಕ್ಕಳ ವಿರುದ್ಧ ಹೋರಾಡಿ ತಮ್ಮ ಆಸ್ತಿ ಪಡೆದುಕೊಂಡಿದ್ದಾರೆ. ಪ್ರೇಮವ್ವ ಸಾಂತ್ವನ ಕೇಂದ್ರದ ನೆರವಿನಿಂದ ಸವಣೂರು ಉಪವಿಭಾಗಾಧಿಕಾರಿಗೆ ಆಸ್ತಿ ಬಿಡಿಸಿಕೊಡುವಂತೆ ಮನವಿ ಸಲ್ಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಅಧಿಕಾರಿಗಳು ಮಕ್ಕಳಿಂದ ತಾಯಿಯ ಹೆಸರಿಗೆ ಜಮೀನು ಮತ್ತು ಮನೆ ಬಿಡಿಸಿಕೊಟ್ಟಿದ್ದಾರೆ. ಸದ್ಯ ಹಾನಗಲ್ ತಹಶೀಲ್ದಾರ್ ಪ್ರೇಮವ್ವಳ ಹೆಸರಿಗೆ ಮರಳಿ ಆಸ್ತಿ ಮಾಡಿಸಿದ ಜಮೀನು ದಾಖಲೆಗಳನ್ನ ವಿತರಿಸಿದ್ದಾರೆ. ತಹಶೀಲ್ದಾರ ಎರ್ರಿಸ್ವಾಮಿ.ಪಿ.ಎಸ್ ರಿಂದ ಮಹಿಳಾ ಸಾಂತ್ವನ ಕೇಂದ್ರದ ಮುಖ್ಯಸ್ಥೆ ಸಮ್ಮುಖದಲ್ಲಿ ಪ್ರೇಮವ್ವಳಿಗೆ ದಾಖಲೆಗಳ ವಿತರಣೆ ಮಾಡಲಾಗಿದೆ. ಮರಳಿ ಆಸ್ತಿ ಪಡೆದುಕೊಂಡ ಎಪ್ಪತ್ತಾರು ವರ್ಷದ ಪ್ರೇಮವ್ವ ಮಕ್ಕಳ ಕಿರುಕುಳ ನೆನೆದು ಕಣ್ಣೀರು ಹಾಕಿದ್ದಾರೆ.