ಚಿತ್ರದುರ್ಗ: ಜಿಲ್ಲೆಯಾದ್ಯಂತ ವರುಣನ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತವಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಬಾಳೆ, ಅಡಿಕೆ ಬೆಳೆ ನಾಶವಾಗಿವೆ. ನಗರದ ರಸ್ತೆಗಳಲ್ಲಿ ಮಳೆ ನೀರು ಕಾಲುವೆಯಂತೆ ಹರಿಯುತ್ತಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಕಾರು, ಬೈಕು ಸೇರಿದಂತೆ ಹಲವು ವಾಹನ ನೀರಿನಲ್ಲಿ ಮುಳುಗಡೆಯಾಗಿವೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ಚಿಕ್ಕಮಗಳೂರು, ಹಾಸನ, ಕೊಡುಗು,ಮೈಸೂರು, ಉತ್ತರಕನ್ನಡ, ತುಮಕೂರು, ಮಂಡ್ಯ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದೆ. ಗುರುವಾರ ಆರಂಭವಾದ ಈ ಅಕಾಲಿಕ ಮಳೆ ಇನ್ನೂ ಎರಡು ದಿನ ಮುಂದುವರಿಯಲಿದೆ. ಮೊದಲ ದಿನದ ಮಳೆಗೆ ಚಿತ್ರದುರ್ಗ ಜನರು ನಲುಗಿ ಹೋಗಿದ್ದು, ಬಿರುಗಾಳಿ ಸಹಿತ ಮಳೆಗೆ ಬಾಳೆತೋಟ-ಅಡಕೆ ತೋಟ ಹಾನಿಯಾಗಿದೆ.

ಹೊಸದುರ್ಗ ತಾಲೂಕು ಬಾಲೇನಹಳ್ಳಿ, ಕಂಚಿಪುರ ಗ್ರಾಮಗಳಲ್ಲಿ ಬೆಳೆಹಾನಿ ಪ್ರಮಾಣ ಹೆಚ್ಚಾಗಿದೆ. ಹಲವು ಅಡಕೆ, ತೆಂಗು ಮರಗಳು ನೆಲಕ್ಕುರುಳಿವೆ. ಕೈಗೆ ಬಂದ ಬಾಳೆಬೆಳೆ ಮಳೆಗೆ ನಾಶವಾಗಿದ್ದರಿಂದ ರೈತರು ಕಂಗಾಲಾಗಿದ್ದಾರೆ.ಇನ್ನು ಚಿತ್ರದುರ್ಗ ನಗರದ ಗುಮಾಸ್ತ ಬಡಾವಣೆ ಮಳೆ ನೀರಿಗೆ ಮುಳುಗಡೆಯಾಗಿದ್ದು, ನೂರಾರು ಮನೆಗಳು ಜಲಾವೃತವಾಗಿವೆ. ಬಡಾವಣೆಯ ರಸ್ತೆಗಳ ಮೇಲೆ ನದಿಯಂತೆ ನೀರು ಹರಿಯುತ್ತಿದ್ದು, ಮನೆಯೊಳಗೂ ಇರಲಾರದೆ, ಹೊರಗೂ ಹೋಗಲಾರದೆ ಜನ ಪರದಾಡುತ್ತಿದ್ದಾರೆ. ಮನೆಗೆ ನುಗ್ಗಿರುವ ಮಳೆ ನೀರನ್ನು ಹೊರ ಹಾಕಲು ಜನತೆ ಹರಸಾಹಸ ಪಡುತ್ತಿದ್ದಾರೆ.
ನಿನ್ನೆ ಮಧ್ಯರಾತ್ರಿಯಿಂದ ಮುಂಜಾನೆವರೆಗೂ ಬಿಟ್ಟಬಿಡದೆ ಸುರಿಯಿತು. ಚಿತ್ರದುರ್ಗ ನಗರದ ಗುಮಾಸ್ತ ಕಾಲನಿ, ಪ್ರಶಾಂತ ನಗರ, ಜೆಸಿಆರ್, ವಿಪಿ ಬಡಾವಣೆ, ಹೊಳಲ್ಕೆರೆ ರಸ್ತೆಯ ಬಡಾವಣೆಗಳಿಗೆ ನೀರು ನುಗ್ಗಿದೆ. ತುರವನೂರು ರಸ್ತೆಯ ಅಂಡರ್ ಪಾಸ್ ನಲ್ಲಿ ನೀರು ನಿಂತಿದೆ.



