ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಮಾಡಿ ವಿಡಿಯೋ ಕರೆ ಮೂಲಕ ಅಶ್ಲೀಲ ಮಾತು, ನಗ್ನವಾಗಿ ಮಾತನಾಡಲು ಪುಸಲಾಯಿಸಿ ಕೆಲಸ ಕೊಡಿಸಿದೆ ವಂಚಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಿಡಿಯಲ್ಲಿದ್ದಾಳೆ ಎಂದು ಹೇಳಲಾದ ಯುವತಿ ನಗರ ಪೊಲೀಸ್ ಆಯುಕ್ತರಿಗೆ ವಕೀಲ ಜಗದೀಶ್ ಮೂಲಕ ದೂರು ನೀಡಿದ್ದಾಳೆ.
ಯುವತಿ ರವಾನಿಸಿರುವ ದೂರಿನ ಪ್ರತಿಯನ್ನು ವಕೀಲ ಜಗದೀಶ್ ಇಂದು ನಗರ ಪೊಲೀಸ್ ಆಯುಕ್ತರಿಗೆ ನೀಡಿದ್ದಾರೆ.ದೂರಿನ ಪ್ರತಿ ಹಸ್ತಾಕ್ಷರದಲ್ಲಿದ್ದು, ಎರಡು ಪುಟಗಳಷ್ಟಿದೆ. ದೂರಿನ ಪೂರ್ಣ ವಿವರ ಇಲ್ಲಿದೆ.
ನಾನು ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಬಂದು ನೆಲೆಸಿದ್ದು, ಕಿರುಚಿತ್ರ ಮಾಡುವ ಸಲುವಾಗಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರನ್ನು ಒಮ್ಮೆ ಭೇಟಿ ಮಾಡಿದ್ದೆ. ಅವರು ನನ್ನ ಮೊಬೈಲ್ ನಂಬರ್ ಪಡೆದು ಕರೆ ಮಾಡುವುದಾಗಿ ತಿಳಿಸಿದ್ದರು.
ನಂತರ ಕರೆ ಮಾಡಿ ನನ್ನ ಹಾಗೂ ನನ್ನ ಕುಟುಂಬದ ಬಗ್ಗೆ ವಿಚಾರಿಸಿ ಸಲುಗೆಯಿಂದ ಮಾತನಾಡಲು ಆರಂಭಿಸಿದರು. ಸಚಿವರು ನನ್ನನ್ನು ಅಷ್ಟು ಕಾಳಜಿಯಿಂದ ಮಾತನಾಡಿಸಿದ್ದು ಕಂಡು ಖುಷಿಯಾಗಿ ಅವರನ್ನು ಗೌರವದಿಂದ ಮಾತನಾಡಿಸಿದ್ದೆ. ಹಾಗಾಗಿ ನನಗೆ ಕರೆ ಮಾಡಿ ಮಾತನಾಡಲು ಆರಂಭಿಸಿದರು. ತಮ್ಮ ಪ್ರಭಾವ ಬಳಸಿ ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿದ್ದರು. ಅದಕ್ಕೆ ಬದಲಾಗಿ ನೀನು ನನ್ನ ಜತೆ ಎಲ್ಲಾ ರೀತಿಯ ಸಹಕಾರ ನೀಡಬೇಕೆಂದು ಕೇಳಿದ್ದರು.
ಅವರನ್ನು ಟಿವಿಗಳಲ್ಲಿ ನೋಡಿದ್ದು, ಮಂತ್ರಿ ಹೇಳಿದ ಮೇಲೆ ಕೆಲಸ ಕೊಟ್ಟೆ ಕೊಡಿಸುತ್ತಾರೆ ಎಂದು ನಾನು ನಂಬಿದೆ. ನನ್ನ ಬಳಿ ಕೊಡಲು ಲಕ್ಷಾಂತರ ಹಣ ಇಲ್ಲದೇ ಇರುವುದನ್ನು ಮುಂಚಿತವಾಗಿ ತಿಳಿದು ಕೊಂಡು ಹಣದ ಬದಲು ಅವರ ಜತೆ ಸಹಕರಿಸಿ ಖುಷಿ ನೀಡಬೇಕೆಂದು ಕೇಳಿದ್ದರು. ಅವರನ್ನು ನಂಬಿ ಅವರು ಹೇಳಿದಂತೆ ನಡೆದುಕೊಂಡೆ.
ದೆಹಲಿಯ ಕರ್ನಾಟಕ ಭವನದಲ್ಲಿ ಉಳಿದುಕೊಂಡಿದ್ದೇನೆ ಎಂದು ಹೇಳಿ ವಿಡಿಯೋ ಕರೆ ಮಾಡಿ ನನ್ನೊಂದಿಗೆ ಲೈಂಗಿಕ ವಿಚಾರಗಳನ್ನು ಮಾತನಾಡಿ, ನಗ್ನವಾಗಲು ಹೇಳಿದರು. ನಾನು ಅವರು ಹೇಳಿದಂತೆ ಮಾಡಿದೆ. ಅದಕ್ಕೆ ಅಶ್ಲೀಲವಾಗಿ ಮಾತನಾಡಿದರು. ಪ್ರಭಾವಿ ವ್ಯಕ್ತಿಯಾಗಿದ್ದ ಕಾರಣಕ್ಕೆ ಅವರು ಹೇಳಿದಂತೆ ನಡೆದುಕೊಂಡೆ. ನಾನು ಬೆಂಗಳೂರಿಗೆ ಬಂದಾಗ ನಿನ್ನ ಕೆಲಸದ ವಿಷಯ ಮಾತನಾಡಬೇಕು ಮನೆಗೆ ಬಾ ಎಂದು ಕರೆದಿದ್ದರು. ಅವರು ಹೇಳಿದಂತೆ ಅಪಾರ್ಟ್ಮೆಂಟ್ಗೆ ಹೋದೆ. ನನ್ನೊಂದಿಗೆ ಅಶ್ಲೀಲವಾಗಿ ಮಾತನಾಡಿ. ತಮ್ಮ ರೂಮ್ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದರು.
ಈ ರೀತಿ ಎರಡು ಬಾರಿ ಅವರ ಅಪಾರ್ಟ್ಮೆಂಟ್ಗೆ ಕರೆಸಿ ಲೈಂಗಿಕವಾಗಿ ಬಳಸಿಕೊಂಡು ಅಶ್ಲೀಲವಾಗಿ ಮಾತನಾಡಿರುತ್ತಾರೆ. ಅವರ ವಿರುದ್ಧ ಮಾತನಾಡಲು ಬೆದರಿ ಅವರು ಹೇಳಿದಂತೆ ನಡೆದುಕೊಂಡಿದ್ದೇನೆ.
ಸರ್ಕಾರಿ ಕೆಲಸ ಕೊಡಿಸಿ ಎಂದು ಕೇಳಿದಾಗ ಸದ್ಯಕ್ಕೆ ಹಣ ಬೇಕಾದರೆ ಕೇಳು. ಕೆಲಸ ಕಥೆ ಆ ಮೇಲೆ ನೋಡೋಣ ಎಂದು ಹೇಳಿದರು. ಅವರಿಗೆ ಬೇಕಾದಂತೆ ಬಳಸಿಕೊಂಡರು. ಕೆಲಸ ಏಕೆ ಕೊಡಿಸುತ್ತಿಲ್ಲ ಎಂದು ಕೇಳಿದಾಗ ಅಶ್ಲೀಲವಾಗಿ ಬೈದು ಕಳುಹಿಸಿದರು.
ಅವರು ನನ್ನೊಂದಿಗೆ ಮಾತನಾಡಿದ ತುಣಕಂತೆ ಹಾಗೂ ಅವರ ಮನೆಯಲ್ಲಿ ನಡೆದ ಚಟುವಟಿಕೆಗಳ ಅಶ್ಲೀಲ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ನಾನು ಇವರ ವಿರುದ್ಧ ದೂರು ನೀಡದಂತೆ ಈ ರೀತಿಯ ಕುತಂತ್ರ ಮಾಡಿದ್ದಾರೆ. ಹಣವಂತರು, ಪ್ರಭಾವಿಗಳೂ ಆದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಂದ ನನಗೂ ಹಾಗೂ ನನ್ನ ಕುಟುಂಬದ ಸದಸ್ಯರಿಗೂ ಜೀವ ಬೆದರಿಕೆ ಇದೆ.
ನಾನು ದೂರು ನೀಡದಂತೆ ತಡೆಯಲು ಮತ್ತು ಅವರ ಕೈಗೆ ಸಿಕ್ಕರೆಕೊಂದು ಬಿಡಲು ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ದಯವಿಟ್ಟು ನನಗೆ ಹಾಗೂ ನನ್ನ ಕುಟುಂಬ ಸದಸ್ಯರಿಗೆ ಭದ್ರತೆ ನೀಡಿ. ನನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಕೆಲಸ ಕೊಡಿಸಿದೆ ಮೋಸ ಮಾಡಿ. ಅಶ್ಲೀಲವಾಗಿ ನಿಂದಿಸಿ ಕೊಲೆ ಮಾಡಿಸಲು ಪ್ರಯತ್ನಿಸುತ್ತಿರುವ ರಮೇಶ್ ಜಾರಕಿಹೊಳಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತೇನೆ.
ನಾನು ನೇರವಾಗಿ ಯಾವ ಪೊಲೀಸ್ ಠಾಣೆಗೂ ದೂರು ನೀಡದಂತೆ ತಡೆಯಲು ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳುತ್ತಿದ್ದಾರೆ. ನನ್ನ ಪರವಾಗಿ ಯಾರೂ ಮಾತನಾಡದಂತೆ ತೇಜೋವಧೆ ಮಾಡುತ್ತಿದ್ದಾರೆ. ನನಗೆ ಸಹಾಯ ಮಾಡುತ್ತಿರುವವರನ್ನು ಗುರಿಯಾಗಿಸಿಕೊಂಡು ಅವರ ಮನೆ ಮತ್ತು ಕುಟುಂಬ ಸದಸ್ಯರಿಗೆ ಹಿಂಸೆ ಕೊಡುತ್ತಿರುವುದರಿಂದ ಬಹಳ ನೋವಾಗಿದೆ.
ನನಗೆ ಭದ್ರತೆ ಇಲ್ಲದ ಕಾರಣ ಕೈಯಲ್ಲಿ ಬರೆದ ಈ ದೂರನ್ನು ನನಗೆ ಪರಿಚಿತರಾದ ವಕೀಲರಾದ ಜಗದೀಶ್ ಅವರ ಮೂಲಕ ಕಳುಹಿಸುತ್ತಿದ್ದೇನೆ. ನನಗೆ ಆಗುತ್ತಿರುವ ಮಾನಸಿಕ ಹಿಂಸೆ ಮತ್ತು ನನ್ನ ಕುಟುಂಬದ ಸದಸ್ಯರು ಎದುರಿಸುತ್ತಿರುವ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳದಂತೆ ರಕ್ಷಣೆ ನೀಡಬೇಕು. ರಮೇಶ್ ಜಾರಕಿಹೊಳಿ ಮತ್ತು ಅವರ ಕಡೆಯವರಿಂದ ರಕ್ಷಣೆ ನೀಡಬೇಕೆಂದು ಯುವತಿ ದೂರಿನಲ್ಲಿ ಬರೆದಿದ್ದಾರೆ.