ಬೆಂಗಳೂರು: ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಪಲಾನುಭವಿಗಳಿಗೆ 10 ಕೆಜಿ ಅಕ್ಕಿ ಬದಲು 5 ಕೆಜಿ ಅಕ್ಕಿ ಹಾಗೂ ಉಳಿದ 5 ಕೆಜಿ ಅಕ್ಕಿ ಲೆಕ್ಕದಲ್ಲಿ ಪೌಷ್ಟಿಕ ಆಹಾರ ಧಾನ್ಯ ನೀಡಲು ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಿದೆ.
ಪೌಷ್ಟಿಕ ಕಿಟ್ ನಲ್ಲಿ ಏನೆಲ್ಲಾ ಇರಲಿದೆ….?
- ತೊಗರಿ ಬೇಳೆ 1 ಕೆಜಿ
- ಹೆಸರು ಕಾಳು 1 ಕೆಜಿ
- ಸಕ್ಕರೆ 1 ಕೆಜಿ
- ಉಪ್ಪು 1 ಕೆಜಿ
- ಅಡುಗೆ ಎಣ್ಣೆ 1 ಲೀಟರ್
ಸಂಪುಟ ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವ ಸಚಿವ ಎಚ್ .ಕೆ. ಪಾಟೀಲ್, ಇಂದಿರಾ ಆಹಾರ ಕಿಟ್ ಅಡಿಯಲ್ಲಿ ಫಲಾನುಭವಿಗಳಿಗೆ ತೊಗರಿ ಬೇಳೆ, ಹೆಸರು ಕಾಳು, ಸಕ್ಕರೆ, ಉಪ್ಪು ತಲಾ 1 ಕೆಜಿ ಹಾಗೂ 1 ಲೀಟರ್ ಅಡುಗೆ ಎಣ್ಣೆ ನೀಡಲಾಗುತ್ತದೆ. ಅಕ್ಕಿಯ ದುರ್ಬಳಕೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಯೋಜನೆಗೆ 6,119.52 ಕೋಟಿ ವೆಚ್ಚವಾಗಲಿದೆ ಬಜೆಟ್ ಮರುಹಂಚಿಕೆಯ ಮೂಲಕ ತಗುಲುವ ವೆಚ್ಚ ಸರಿದೂಗಿಸಲಾಗುವುದು ಎಂದು ತಿಳಿಸಿದರು.
ಇಂದಿರಾ ಆಹಾರ ಕಿಟ್ನಲ್ಲಿ ಪೌಷ್ಟಿಕ ಆಹಾರ ವಿತರಣೆಗೆ ಇಂದಿನ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದ್ದು, ಇನ್ಮುಂದೆ ರಾಜ್ಯ ಸರ್ಕಾರದಿಂದ 5 ಕೆಜಿ ಅಕ್ಕಿ ಬದಲು ಆಹಾರ ಧಾನ್ಯಗಳ ವಿತರಣೆ ಮಾಡಲಿದೆ ಎಂದರು.
ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 5 ಕೆಜೆ ಅಕ್ಕಿಯನ್ನು ಸೇರಿಸಿ ಒಟ್ಟು 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಮುನ್ನ ಅಕ್ಕಿಯ ಅಭಾವ ಹಿನ್ನಲೆ ಫಲಾನುಭವಿಗಳ ಖಾತೆಗೆ 175 ರೂ ಜಮಾ ಮಾಡಲಾಗುತ್ತಿತ್ತು.
ಅಕ್ಕಿ ಕಳ್ಳ ಸಾಗಾಟ ತಡೆಗಟ್ಟಲು ಕ್ರಮ
ಅಕ್ಕಿಯ ದರ ಇಳಿಕೆ ಆದ ಬಳಿಕ ಕಳೆದ ಕೆಲ ತಿಂಗಳಿನಿಂದ ಮತ್ತೆ ಹಣದ ಬದಲಾಗಿ ಉಚಿತ ಅಕ್ಕಿ ನೀಡಲಾಗುತ್ತಿದೆ. ಇದೀಗ ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಇಂದಿರಾ ಕಿಟ್ನಲ್ಲಿ ಪೌಷ್ಟಿಕ ಆಹಾರ ವಿತರಣೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ.ಅನ್ನಭಾಗ್ಯ ಯೋಜನೆ ಅಕ್ಕಿ ಕಳ್ಳ ಸಾಗಾಟವಾಗುತ್ತಿದ್ದ ಹಿನ್ನೆಲೆ ಅದಕ್ಕೆ ಕಡಿವಾಣ ಹಾಕಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ