ಹೊಸಪೇಟೆ: ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಮೂಲಸೌಕರ್ಯ, ಹಜ್ ಮತ್ತು ವಕ್ಫ್ ಖಾತೆ ಸಚಿವ ಆನಂದ್ ಸಿಂಗ್ ಅವಿರೋಧವಾಗಿ ಆಯ್ಕೆಯಾದರು. ಬಳ್ಳಾರಿ ಉಸ್ತುವಾರಿಯಿಂದ ಸಚಿವ ಆನಂದ್ ಸಿಂಗ್ ತೆಗೆದು ಹಾಕಿ: ಶಾಸಕ ಸೋಮಶೇಖರ್ ಕಿಡಿ
ಆನಂದ್ ಸಿಂಗ್ ಹೊರತುಪಡಿಸಿ ಬೇರೆ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಹಿನ್ನೆಲೆ ಅವಿರೋಧವಾಗಿ ಆಯ್ಕೆಯಾಗಿದರು ಎಂದು ಚುನಾವಣಾಧಿಕಾರಿ ಎಚ್. ವಿಶ್ವನಾಥ್ ಘೋಷಿಸಿದರು.ಆನಂದ್ ಸಿಂಗ್ ಒಟ್ಟು ಮೂರು ನಾಮಪತ್ರ ಸಲ್ಲಿಸಿದ್ದರು. ಮೂರು ಕ್ರಮಬದ್ಧವಾಗಿದ್ದವು. ಅದರಲ್ಲಿ ಒಂದನ್ನು ಪರಿಗಣಿಸಲಾಯಿತು ಎಂದು ಹೇಳಿದರು. ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ಟಿ.ಎಂ. ಚಂದ್ರಶೇಖರಯ್ಯ ರಾಜೀನಾಮೆ ಸಲ್ಲಿಸಿದ್ದರು. ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು. ಹದಿಮೂರು ಜನ ನಿರ್ದೇಶಕರನ್ನು ಒಳಗೊಂಡಿರುವ ಬ್ಯಾಂಕಿನ ಹಾಲಿ ಅವಧಿ ಇನ್ನೂ ಮೂರು ವರ್ಷ ಇದೆ. ಇಂದು ನಡೆದ ಚುನಾವಣೆ ಸಭೆಗೆ ಹನ್ನೊಂದು ಜನ ಪಾಲ್ಗೊಂಡಿದ್ದರು. ಭರತ್ ರೆಡ್ಡಿ, ಭೋಗಾರೆಡ್ಡಿ ಗೈರು ಹಾಜರಾಗಿದ್ದರು.
ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ಆನಂದ್ ಸಿಂಗ್, ಎಲ್ಲ ನಿರ್ದೇಶಕರ ಸಹಕಾರದಿಂದ ಬ್ಯಾಂಕಿನ ಅಧ್ಯಕ್ಷನಾಗಿರುವೆ. ಬ್ಯಾಂಕಿನ ಶ್ರೇಯೋಭಿವೃದ್ಧಿ, ರೈತರ ಹಿತಕ್ಕಾಗಿ ಕೆಲಸ ಮಾಡುವೆ. ಬ್ಯಾಂಕಿನ ಖಾಲಿ ಹುದ್ದೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಉಸ್ತುವಾರಿ ಬದಲಾವಣೆ ಸಿ.ಎಂ ನಿರ್ಧಾರ: ಬಳ್ಳಾರಿ ಜಿಲ್ಲಾ ಉಸ್ತುವಾರಿ ಸ್ಥಾನ ಬದಲಿಸಬೇಕೆಂದು ಶಾಸಕ ಜಿ. ಸೋಮಶೇಖರ್ ರೆಡ್ಡಿ ಹೇಳಿರುವುದು ಅವರ ವೈಯಕ್ತಿಕ ಅನಿಸಿಕೆ. ಎಲ್ಲರಿಗೂ ಅವರ ಅನಿಸಿಕೆ ಹೇಳುವ ಸ್ವಾತಂತ್ರ್ಯ ಇದೆ. ಯಾರು, ಯಾವ ಜಿಲ್ಲೆಯ ಉಸ್ತುವಾರಿ ಆಗಬೇಕು ಎನ್ನುವುದರ ಕುರಿತು ಮುಖ್ಯಮಂತ್ರಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಉತ್ತರಿಸಿದರು.