ದಾವಣಗೆರೆ: ಶುದ್ದ ಕುಡಿಯುವ ನೀರಿನ ಘಟಕಗಳ ದುರಸ್ತಿ ಬಗ್ಗೆ ಸಾರ್ವಜನಿಕರಿಂದ ಅನೇಕ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆ ಬಗೆಹರಿಸಲು ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಬಗೆಹರಿಸಿಕೊಳ್ಳಿ ಎಂದು ಜಿಲ್ಲಾ ಪಂಚಾಯ್ತಿ ಸಿಇಓ ಪದ್ಮಾ ಬಸವಂತಪ್ಪ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ)ಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಿಳಿಸಿದರು.
ಚನ್ನಗಿರಿ ಮತ್ತು ನ್ಯಾಮತಿ ತಾ.ಪಂ ಅಧ್ಯಕ್ಷರು ತಮ್ಮ ತಾಲ್ಲೂಕುಗಳಲ್ಲಿ 20 ಲೀಟರಿಗೆ ರೂ.2 ನಿಗದಿಗೊಳಿಸಿದ್ದು ಇದೀಗ ರೂ.5 ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಗ್ರಾಮೀಣ ಜನತೆಗೆ ಕಷ್ಟವಾಗುತ್ತಿದ್ದು ರೂ.2 ಕ್ಕೆ ಇಳಿಸಬೇಕೆಂದು ಮನವಿ ಮಾಡಿದರು. ಜಿ.ಪಂ ಅಧ್ಯಕ್ಷೆ ಶಾಂತಕುಮಾರಿ ಅಣಬೂರಿನ ಕುಡಿಯುವ ನೀರಿನ ಘಟಕ ಪದೇ ಪದೇ ರಿಪೇರಿಗೆ ಬರುತ್ತಿದ್ದು, ಇದನ್ನು ಸರಿಪಡಿಸಬೇಕೆಂದು ಕೋರಿದರು.
ಟೋಲ್ಫ್ರೀ ಸಂಖ್ಯೆಗೆ ಕರೆ ಮಾಡಿ: ಶುದ್ದ ಕುಡಿಯುವ ನೀರಿನ ಘಟಕಗಳ ದುರಸ್ತಿ ಬಗ್ಗೆ ಸಾರ್ವಜನಿಕರಿಂದ ಅನೇಕ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸಮಿತಿ ಬಂದು ಜಿಲ್ಲೆಯಲ್ಲಿ ಪರಿಶೀಲನೆ ನಡೆಸಿದೆ. ದುರಸ್ತಿಗೆ ಸಂಬಂಧಿಸಿದಂತೆ 48 ಗಂಟೆಯೊಳಗೆ ದುರಸ್ತಿಪಡಿಸಲು ಗುತ್ತಿಗೆದಾರರಿಗೆ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ರವರಿಗೆ ಸಹ ಈ ಬಗ್ಗೆ ಪ್ರತಿನಿತ್ಯ ಪರಿಶೀಲಿಸಿ ಎಲ್ಲಾ ಘಟಕಗಳನ್ನು ಸುಸ್ಥಿತಿಯಲ್ಲಿಡಸು ಸೂಚಿಸಲಾಗಿದೆ. ಟೋಲ್ಫ್ರೀ ಸಂಖ್ಯೆ 9480985555 ಸಂಖ್ಯೆಗೆ ಉಚಿತವಾಗಿ ಕರೆ ಮಾಡುವ ಮೂಲಕ ದುರಸ್ತಿ ಬಗ್ಗೆ ದೂರು ನೀಡಿದಲ್ಲಿ ಪರಿಹಾರ ಪೋರ್ಟಲ್ ಮೂಲಕ ತ್ವರಿತವಾಗಿ ರಿಪೇರಿ ಮಾಡಲಾಗುವುದು ಎಂದು ಸಿಇಓ ತಿಳಿಸಿದರು.



