ದಾವಣಗೆರೆ: ಮೆಕ್ಕೆಜೋಳದಲ್ಲಿ ಅಂತರ ಬೆಳೆಯಾಗಿ ತೊಗರಿಯನ್ನು ಬೆಳೆಯುವುದರಿಂದ ಮಣ್ಣಿನ ಫಲವತ್ತತೆಯ ಹಾಗೂ ಇಳುವರಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ಬೇಸಾಯ ತಜ್ಞ ಮಲ್ಲಿಕಾರ್ಜುನ್ ಬಿ ಓ ಅಭಿಪ್ರಾಯಪಟ್ಟರು.
ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆ ವತಿಯಿಂದ ಪರಿಶಿಷ್ಟ ಜಾತಿ ಉಪ ಯೋಜನೆ ಕಾರ್ಯಕ್ರಮ ದಡಿಯಲ್ಲಿ ಜಗಳೂರು ತಾಲೂಕು ಕಲ್ಲೇದೇವರಪುರದಲ್ಲಿ ನಡೆದ ಮೆಕ್ಕೆಜೋಳ ಅಂತರ ಬೆಳೆಯಾಗಿ ತೊಗರಿಯ ಮುಂಚೂಣಿ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವದಲ್ಲಿ ರೈತರಿಗೆ ಮಾಹಿತಿ ನೀಡಿದರು.
ಏಕ ಬೆಳೆಯಾಗಿ ಮೆಕ್ಕೆಜೋಳ ಬೆಳೆಯುವುದರಿಂದ ಮಳೆ ಸರಿಯಾಗಿ ಬಾರದಿದ್ದರೆ ಇಳುವರಿ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ಮೆಕ್ಕೆಜೋಳ ಬೆಳೆಯು ತೆಗೆದುಕೊಳ್ಳುವುದರಿಂದ ಪಲವತ್ತತೆ ಕಡಿಮೆಯಾಗಿ ಮುಂದಿನ ಬೆಳೆಗಳು ಇಳುವರಿ ಕಡಿಮೆಯಾಗುತ್ತದೆ. ಆ ಕಾರಣದಿಂದ ಮೆಕ್ಕೆಜೋಳದಲ್ಲಿ ಅಂತರ ಬೆಳೆಯಾಗಿ ತೊಗರಿಯನ್ನು ಬೆಳೆಯುವುದರಿಂದ ಅಧಿಕ ಇಳುವರಿಯನ್ನು ಪಡೆಯಬಹುದು ಎಂದರು.
ಪ್ರಗತಿಪರ ಕೃಷಿಕ ಚಿತ್ರಲಿಂಗಪ್ಪ ಮಾತನಾಡಿ, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಸರಿಯಾದ ಸಮಯಕ್ಕೆ ನವೀನ ತಾಂತ್ರಿಕತೆಗಳನ್ನು ಒದಗಿಸಿರುವುದರಿಂದ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದೇವೆ ಎಂದರು. ಬಿತ್ತನೆ ಸಮಯದಲ್ಲಿ ಬೀಜೋಪಚಾರ ಹಾಗೂ ತೊಗರಿ ಹೂವುವಾಡುವ ಸಂದರ್ಭದಲ್ಲಿ ಪಲ್ಸ್ ಮ್ಯಾಜಿಕ್ ಬಳಕೆಯಿಂದ ಹೂ ಉದುರುವುದು ತಡೆಯಬಹುದು ಎಂದು ಪ್ರಗತಿಪರ ಕೃಷಿಕ ಶಶಿಧರ್ ಹೇಳಿದರು.
ಕಾರ್ಯಕ್ರಮದಲ್ಲಿ ತೋಟಗಾರಿಕ ವಿಜ್ಞಾನಿ ಡಾ. ಬಸವನಗೌಡ ಎಂ ಜಿ ಮಾತನಾಡಿ, ಧಾನ್ಯ ಬೆಳೆಗಳನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವುದರಿಂದ ಲಾಭಗಳಿಸಬಹುದು ಎಂದರು. ಕಾರ್ಯಕ್ರಮದಲ್ಲಿ ಕಲೆ ದೇವರಪುರ ಹಾಗೂ ಬಸಪ್ಪನ ಹಟ್ಟಿಯ ಪ್ರಗತಿಪರ ಕೃಷಿಕರು ಭಾಗವಹಿಸಿದ್ದರು.



