ದಾವಣಗೆರೆ: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ, ಜಿಲ್ಲೆಗೆ ಕೀರ್ತಿ ತಂದಿರುವುದು ಹರ್ಷದ ಸಂಗತಿ. ಈ ಅಮೋಘ ಸಾಧನೆಗೆ ಕಾರಣರಾದ ಜಿಲ್ಲೆಯ ಎಲ್ಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಪೋಷಕರು ಹಾಗೂ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಹೇಳಿದರು.
ದಾವಣಗೆರೆ: ಅಕ್ರಮ ಗಾಂಜಾ ಮಾರಾಟ; ಇಬ್ಬರು ಆರೋಪಿಗಳ ಬಂಧನ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾದ ಪ್ರತಿಭಾವಂತ ಆಯ್ದ 10ವಿದ್ಯಾರ್ಥಿಗಳಿಗೆ ಗೌರವಿಸಿ, ಪ್ರೋತ್ಸಾಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪರೀಕ್ಷೆಯಲ್ಲಿ ಹಗಲಿರುಳು ನಿರಂತರ ಶ್ರಮವಹಿಸಿ, ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬದುಕು ಉಜ್ವಲಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಸಮಾಜದಲ್ಲಿನ ಪ್ರತಿಭಾವಂತರು, ಪ್ರಜ್ಞಾವಂತರಿಂದ ಮಾಹಿತಿ ಪಡೆದು, ತಮ್ಮ ಬುದ್ದಿಮತ್ಯೆಯನ್ನು ಹೆಚ್ಚಿಸಿಕೊಳ್ಳಬೇಕಲ್ಲದೇ ಸಮಾಜಮುಖಿಯಾಗಿ ಉಪಯೋಗವಾಗುವಂತೆ ಅದನ್ನು ಬಳಕೆ ಮಾಡಿಕೊಳ್ಳಬೇಕು ಎಂದವರು ನುಡಿದರು.
ಪ್ರತಿಭಾವಂತ ಬಹುತೇಕ ವಿದ್ಯಾರ್ಥಿಗಳು ಐ.ಎ.ಎಸ್., ಐ.ಪಿ.ಎಸ್. ನಂತಹ ತರಬೇತಿಯನ್ನು ಪಡೆದು ತಮ್ಮ ಶಿಕ್ಷಣ ಪಥದಲ್ಲಿ ಸಾಗುವ ಆಲೋಚನೆಯನ್ನು ಹೊಂದಿರುತ್ತಾರೆ. ಇಂತಹ ಆಯ್ಕೆ ತಪ್ಪಲ್ಲದಿದ್ದರೂ, ಪ್ರತಿಭಾವಂತರಾದ ಅಸಂಖ್ಯಾತ ಸಂಖ್ಯೆಯ ವಿದ್ಯಾರ್ಥಿಗಳೆಲ್ಲರಿಗೂ ಅವಕಾಶಗಳು ಒದಗಿ ಬರುವುದು ಕಷ್ಟಸಾಧ್ಯ. ಆದ್ದರಿಂದ ಪ್ರತಿಭಾವಂತ ವಿದ್ಯಾರ್ಥಿಗಳು ಇಂತಹ ಕೋರ್ಸುಗಳಿಗೆ ಸಮವರ್ತಿಯಾಗಿರುವ ಹಾಗೂ ಪರ್ಯಾಯವಾಗಿರುವ ಅನೇಕ ಕೋರ್ಸುಗಳಿದ್ದು, ಅವುಗಳಲ್ಲಿ ತಮಗಿಷ್ಟವಾದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಭವಿಷ್ಯದ ಬದುಕನ್ನು ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.
ವಿದ್ಯಾರ್ಥಿಗಳು ಕೇವಲ ಪುಸ್ತಕದ ಜ್ಞಾನಕ್ಕೆ ಸೀಮಿತರಾಗದೆ ವಾಸ್ತವ ಬದುಕಿನ ಎಲ್ಲಾ ಮಗ್ಗಲುಗಳ ಪರಿಚಯ ಹೊಂದಿದ್ದು, ಮೇಲ್ಪಂಕ್ತಿಯಲ್ಲಿರಬೇಕು. ಸಮಾಜದ ಎಲ್ಲಾ ಕ್ಷೇತ್ರಗಳ ಬಗ್ಗೆಯೂ ಅರಿವು ಹೊಂದಿರುವಂತೆ ಸೂಚಿಸಿದ ಅವರು, ಮನೆಯ ಹಿರಿಯರನ್ನು ಗೌರವಿಸುವ, ತಮ್ಮ ಕುಟುಂಬದ ಮುಖ್ಯಸ್ಥರಿಗೆ ಅವರ ಉದ್ಯೋಗದಲ್ಲಿ, ಮನೆಯ ಕೆಲಸ-ಕಾರ್ಯಗಳಲ್ಲಿ ಸಹಕರಿಸುವ, ಎಲ್ಲರೊಂದಿಗೆಬೆರೆಯುವ ಸೌಜನ್ಯ, ಮನೋಭಾವ ಹೊಂದಿರಬೇಕೆಂದವರು ನುಡಿದರು.
ವಿದ್ಯಾರ್ಥಿಗಳು ತಮ್ಮ ಕಲಿಕೆಯೊಂದಿಗೆ ಕ್ರೀಡೆ, ವಿಜ್ಞಾನ, ಗಣಿತ, ಸಂಗೀತ, ನೃತ್ಯ ಮುಂತಾದ ವಿಷಯಗಳಲ್ಲಿ ಆಸಕ್ತಿ ಹೊಂದಿರಬೇಕು ಎಂದ ಅವರು, ಇತ್ತೀಚಿನ ದಿನಗಳಲ್ಲಿ ಕಲಿಕೆಯ ಸ್ವರೂಪವೂ ಬದಲಾಗಿದೆ. ಕೃತಕ ಬುದ್ದಿಮತ್ಯೆಯಿಂದಾಗಿ ಅವಕಾಶಗಳು ವಿರಳವಾಗುತ್ತಿವೆ. ಯುವ ವಿದ್ಯಾರ್ಥಿಗಳು ಮಾನಸಿಕವಾಗಿ ವಿಚಲಿತರಾಗದೆ, ಅಡ್ಡದಾರಿ ಹಿಡಿಯದೇ ರಾಜಮಾರ್ಗದಲ್ಲಿಯೇ ನಡೆದು, ಬಲಿಷ್ಟರಾಗುವಂತೆ ಅವರು ಸೂಚಿಸಿದರು.
ವಾಟ್ಸಪ್, ಫೇಸ್ಬುಕ್, ಮೊಬೈಲ್ ಗೀಳಿನಿಂದ ಹೊರಬರುವಂತೆ ಸೂಚಿಸಿದ ಅವರು, ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಹೊಂದಿರುವ ತಂತ್ರಾಂಶಗಳಿಂದ ಇಡೀ ಜಗತ್ತು ಅಂಗೈಯಲ್ಲಿ ಬಂದು ನಿಂತಂತಾಗಿದೆ. ಯುವ ವಿದ್ಯಾರ್ಥಿಗಳು ಈಗಾಗಲೇ ಮೂಡಿಸಿರುವ ಹೆಜ್ಜೆ ಗುರುತುಗಳು ಮಾಸದಂತೆ ಭವಿಷ್ಯದ ದಾರಿಯಲ್ಲಿ ಮುಂದುವರೆಯಿರಿ. ಒತ್ತಡ ಮುಕ್ತರಾಗಿದ್ದು, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಿ ಎಂದ ಅವರು, ಈ ನೆಲದ ಕಾನೂನನ್ನು ಗೌರವಿಸಿ ಹಾಗೂ ಅಪೂರ್ವ ಜೀವನಾನುಭವ ಹೊಂದಿರುವ ಹಿರಿಯರ ಸಲಹೆ-ಸೂಚನೆಗಳನ್ನು ಪಾಲಿಸಿ. ಜೀವನ ಅಮೂಲ್ಯವಾದುದು. ಬರುವ ಸದವಕಾಶಗಳಿಂದ ವಂಚಿತರಾಗಬೇಡಿ ಎಂದವರು ನುಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೇ ಮಾಧವ ವಿಠ್ಠಲರಾವ್ ಅವರು ಮಾತನಾಡಿ, ಕಲಿಕೆ ನಿರಂತರ ಪ್ರಕ್ರಿಯೆಯಾಗಿರಲಿ. ಯುವ ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿದ್ದು, ಸಾಮಾಜಿಕ ಕಳಕಳಿ ಉಳ್ಳವರಾಗಿರುವಂತೆ ಸಲಹೆ ನೀಡಿದರು. ಸಾಧಕ ವಿದ್ಯಾರ್ಥಿಗಳೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
ದಾವಣಗೆರೆ ಜಿಲ್ಲೆಯಲ್ಲಿಈ ಬಾರಿ 19823ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 18760ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ 94.64ರಷ್ಟು ಫಲಿತಾಂಶ ದಾಖಲಾಗಿದೆ. ಜಿಲ್ಲೆಯ ಒಟ್ಟು 181ಶಾಲೆಗಳು ಶೇ 100ರಷ್ಟು ಫಲಿತಾಂಶ ಪಡೆದುಕೊಂಡಿವೆ. ಈ ಬಾರಿ 67 ಸರ್ಕಾರಿ ಶಾಲೆಗಳಲ್ಲಿ, 43 ಅನುದಾನಿತ ಶಾಲೆಗಳಲ್ಲಿ ಹಾಗೂ 71 ಅನುದಾನರಹಿತ ಶಾಲೆಗಳಲ್ಲಿ ಶೇ 100ರಷ್ಟು ಫಲಿತಾಂಶ ಬಂದಿದೆ.
ದಾವಣಗೆರೆ ಉತ್ತರದಲ್ಲಿ ಶೇ. 92.58ರಷ್ಟು, ದಾವಣಗೆರೆ ದಕ್ಷಿಣದಲ್ಲಿ ಶೇ 93.43ರಷ್ಟು, ಜಗಳೂರು ತಾಲ್ಲೂಕಿನಲ್ಲಿ ಶೇ 94.49ರಷ್ಟು, ಚನ್ನಗಿರಿ ತಾಲ್ಲೂಕಿನಲ್ಲಿ ಶೇ 99.10ರಷ್ಟು, ಹರಿಹರ ತಾಲ್ಲೂಕಿನಲ್ಲಿ ಶೇ 89.64ರಷ್ಟು ಮತ್ತು ಹೊನ್ನಾಳಿ ತಾಲ್ಲೂಕಿನಲ್ಲಿ ಶೇ 95.73ರಷ್ಟು ಫಲಿತಾಂಶ ದಾಖಲಾಗಿದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೇ 18ರಂದು ಪೂರಕ ಪರೀಕ್ಷೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಅತಿಹೆಚ್ಚು ಅಂಕ ಪಡೆದು ಉತ್ತೀರ್ಣರಾದ 10 ವಿದ್ಯಾರ್ಥಿಗಳನ್ನು ಸ್ಮರಣಿಕೆ, ಪ್ರಮಾಣಪತ್ರ ನೀಡಿ, ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಕೊಟ್ರೇಶ್, ಡಯಟ್ ಪ್ರಾಚಾರ್ಯ ಶ್ರೀಮತಿ ಗೀತಮ್ಮ, ಶಿಕ್ಷಣಾಧಿಕಾರಿ ಸಿದ್ದಪ್ಪ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಹಾಲಪ್ಪ, ಸ.ಶಿ.ಸಂಘದ ಅಧ್ಯಕ್ಷ ಮುಬಾಕಖ್ಅಲಿ ಸೇರಿದಂತೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು, ಶಾಲಾ ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.



