ದಾವಣಗೆರೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅರುಣ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ.ಈ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಎಸ್ಪಿ ವರ್ಗಾವಣೆಗೆ ಬಹಿರಂಗವಾಗಿಯೇ ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಬೇಡಿಕೆ ಇಟ್ಟಿದ್ದರು. ಈ ವರ್ಗಾವಣೆ ಮೂಲಕ ಸರ್ಕಾರ ಶಾಸಕರ ಬೇಡಿಕೆ ಈಡೇರಿಸಿದಂತಾಗಿದೆ. ಇದರಿಂದ ದಾವಣಗೆರೆ ವರ್ಗಾವಣೆಯಾಗಿ ಬಂದು ಕೇವಲ ಐದೇ ತಿಂಗಳಲ್ಲಿ ಖಡಕ್ ಅಧಿಕಾರಿ ವರ್ಗಾವಣೆ ಆದಂತಾಗಿದೆ.
ಎಸ್ಪಿ ವರ್ಗಾವಣೆ ಪ್ರಸ್ತಾಪ ಸದ್ಯಕ್ಕಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ನಿನ್ನೆ ಹೇಳಿದ್ದರು.ಈ ರೀತಿ ಹೇಳಿ ಒಂದೇ ದಿನದಲ್ಲಿ ವರ್ಗಾವಣೆ ಮಾಡಲಾಗಿದೆ. ವಿಧಾನಸಭೆ ಚುನಾವಣೆಯ ಕಾರಣಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸಿ. ಬಿ. ರಿಷ್ಯಂತ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಈ ಜಾಗಕ್ಕೆ ಕೆ. ಅರುಣ್ ಅವರು ಬಂದಿದ್ದರು. ಈ ಹಿಂದೆ ಕಲ್ಬುರ್ಗಿಯಲ್ಲಿ ರಫ್ ಅಂಡ್ ಟಫ್ ಖ್ಯಾತಿ ಹೊಂದಿದ್ದರು. ಈಗ ಮತ್ತೆ ಕಲ್ಬುರ್ಗಿಯ ಪೊಲೀಸ್ ತರಬೇತಿ ಕೇಂದ್ರದ ಸೂಪರ್ ರಿಂಟೆಂಡೆಟ್ ಹಾಗೂ ಪ್ರಿನ್ಸಿಪಾಲ್ ಆಗಿ ನಿಯೋಜನೆ ಮಾಡಲಾಗಿದೆ.
ಕಾನೂನು ಗೀನೂನು ಏನೂ ಹೇಳಬೇಡಿ, ಎಸ್ಪಿ ವರ್ಗಾವಣೆ ಮಾಡಿ; ಕಾನೂನು ಗೀನೂನು ಏನೂ ಹೇಳಬೇಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ಗಾವಣೆ ಮಾಡಿ ಎಂದು ಶಾಸಕ ಡಿ.ಜಿ. ಶಾಂತನಗೌಡ ಅವರು ಇತ್ತೀಚಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಮನವಿ ಮಾಡಿದರು.
ಹೊನ್ನಾಳಿ ತಾಲ್ಲೂಕಿನ ಗೊಲ್ಲರಹಳ್ಳಿ ತರಳಬಾಳು ಸಮುದಾಯ ಭವನದಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕು ಸಾಧು ವೀರಶೈವ ಸಮಾಜದ ವತಿಯಿಂದ ಚುನಾಯಿತ ಜನಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಹೊನ್ನಾಳಿಯಲ್ಲಿ ತುಂಗಭದ್ರಾ ನದಿ ಹರಿದು ಹೋಗುತ್ತಿದೆ. ಮರಳಿಗೆ ಕೊರತೆ ಇಲ್ಲ. ಆದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಒಂದು ಚೀಲ ಮರಳು ತೆಗೆಯದಂತೆ ನಿಲ್ಲಿಎಲಸಿದ್ದಾರೆ ಇಂದಿರಾ ಆವಾಸ್ ಯೋಜನೆ ಅಡಿ ಮತ್ತು ಬಹುಗ್ರಾಮ ಯೋಜನೆ ಅಡಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಮರಳು ಸಿಗದಕ್ಕೆ ಕಾಮಗಾರಿಗಳು ಸ್ಥಗಿತಗೊಂಡಿವೆ. ಇದರಿಂದ ನಾನೂ ಒತ್ತಡಕ್ಕೆ ಸಿಲುಕಿದ್ದೇನೆ. ನಾನು ಜನರಿಗೆ ಮರಳು ನೀಡಬೇಕಿದೆ. ಈ ಕಾರಣಕ್ಕಾದರೂ ಎಸ್ಪಿ ಅವರನ್ನು ವರ್ಗಾವಣೆ ಮಾಡಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅರುಣ್ ಅವರನ್ನು ವರ್ಗಾವಣೆ ಮಾಡುವಂತೆ ಜಿಲ್ಲೆಯ ಎಲ್ಲಾ ಶಾಸಕರು ಬೇಡಿಕೆ ಇಟ್ಟಿದ್ದಾರೆ ಎಂದಿದ್ದರು. ಈ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದರು.