ಡಿವಿಜಿ ಸುದ್ದಿ, ದಾವಣಗೆರೆ: ರಾಜ್ಯ ಸರ್ಕಾರ ಸಾರ್ವಜನಿಕರಿಗೆ ತುರ್ತು ಸ್ಪಂದನ ವ್ಯವಸ್ಥೆ-112 ಜಾರಿಗೆ ತಂದಿದೆ. ಇನ್ಮುಂದೆ ಜಿಲ್ಲೆಯಲ್ಲಿ ಪೊಲೀಸ್, ಅಗ್ನಿ ಶಾಮಕ, ಅಂಬುಲೆನ್ಸ್ ಗಾಗಿ ಒಂದೇ ನಂಬರ್ 112 ಸಹಾಯವಾಣಿಗೆ ಕರೆ ಮಾಡಬಹುದು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ತುರ್ತು ಅಗತ್ಯಗಳಿಗೆ ಇನ್ಮುಂದೆ 112 ಸಂಖ್ಯೆಗೆ ಕರೆ ಮಾಡಿದರೆ ಸಾಕು. ಎಲ್ಲಾ ತುರ್ತು ಸೇವೆ ಲಭ್ಯವಾಗಲಿದೆ ಎಂದರು.
ಇಡೀ ದೇಶದಾದ್ಯಂತ ಒಂದೇ ತುರ್ತು ಕರೆ 112 ಸಹಾಯವಾಣಿ ಅಕ್ಟೋಬರ್ 01 ರಿಂದ ಆರಂಭಗೊಂಡಿದೆ. ರಾಜ್ಯದ ಮೂರು ಜಿಲ್ಲೆಗಳಲ್ಲಿ ಪ್ರಯೋಗಿಕವಾಗಿ ಈ ಸಹಾಯ ವಾಣಿ ಜಾರಿಯಾಗಿದ್ದು ಇದರಲ್ಲಿ ದಾವಣಗೆರೆ ಜಿಲ್ಲೆಯೂ ಒಳಗೊಂಡಿದೆ ಎಂದರು.
ಅಗ್ನಿ ಶಾಮಕ ದಳದ ನೆರವು, ಅಂಬುಲೆನ್ಸ್, ಪೊಲೀಸ್ ನೆರವು ಸೇರಿದಂತೆ ಯಾವುದೇ ತುರ್ತು ಸಂದರ್ಭದಲ್ಲಿ ನೂತನವಾದ ೧೧೨ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಸಾಕು. ಎಮೆರ್ಜೇನ್ಸಿ ರೆಸ್ಪಾನ್ಸ್ ಸಪೋರ್ಟ ಸಿಸ್ಟಂ (ಇಆರ್ ಎಸ್ ಎಸ್ ) ವ್ಯವಸ್ಥೆಯಡಿ ಜಿಲ್ಲೆಯ ಎಲ್ಲಿದಂಲೇ ಕರೆ ಬಂದರೂ ತುರ್ತಾಗಿ ಅಲ್ಲಿಗೆ ತಲುಪಿಸಿ ರಕ್ಷಣೆ ಒದಗಿಸಲಾಗುತ್ತದೆ.
112ಕ್ಕೆ ಕರೆ ಮಾಡಿದರೆ ನೇರವಾಗಿ ಬೆಂಗಳೂರಿನಿಂದ ಏಕೀಕೃತ ತರ್ತು ಸ್ಪಂದನಾ ಕೇಂದ್ರದ ಮೂಲಕ ಜಿಲ್ಲಾ ಸಮನ್ವಯ ಕೇಂದ್ರಕ್ಕೆ ಸಂಪರ್ಕಿಸಲಾಗುತ್ತದೆ. ಕರೆ ಸ್ವೀಕರಿಸಿದ ತಕ್ಷಣ ಘಟನಾ ಸ್ಥಳಕ್ಕೆ 15 ನಿಮಿಷದಲ್ಲಿಯೇ ಇಆರ್ ಎಸ್ ಎಸ್ ವಾಹನ ಅಲ್ಲಿಗೆ ತಲುಪಿ ಸಂಕಷ್ಟದಲ್ಲಿರುವವರಿಗೆ ತುರ್ತು ನೆರವಾಗುವ ವ್ಯವಸ್ಥೆ ಇದಾಗಿದೆ.
ದಾವಣಗೆರೆ ಜಿಲ್ಲೆಗೆ ಈ ಉದ್ದೇಶಕ್ಕಾಗಿಯೇ 13 ಬೀಟ್ ವಾಹನ ಪೂರೈಸಲಾಗಿದೆ. ಒಂದು ವಾಹನದಲ್ಲಿ ಎಎಸ್ಐ, ಕಾನ್ಸ್ಟೇಬಲ್, ಚಾಲಕ ಸೇರಿ ಮೂರು ಸಿಬ್ಬಂದಿಗಳಿರುತ್ತಾರೆ. ಸಂರಕ್ಷಣಾ ಸಲಕರಣೆಗಳು ಇಆರ್ ಎಸ್ ಎಸ್ ವಾಹನದಲ್ಲಿರುತ್ತವೆ. 24×7 ತುರ್ತು ಸ್ಪಂದನಾ ಕರ್ತವ್ಯಕ್ಕೆ ಈಗಾಗಲೇ 65 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ, 26 ಚಾಲಕ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ದಿನದ24 ತಾಸು ಪ್ರಾಯೋಗಿಕವಾಗಿ ಚಟುವಟಿಕೆ ಪ್ರಾರಂಭವಾಗಿದೆ. ಇನ್ನೂ ಮುಂದೆ ಕಂಟ್ರೋಲ್ ರೂಮ್ನ ಪೊಲೀಸ್ ಇಲಾಖೆಯ-100, ಅಗ್ನಿಶಾಮಕದ-101, ಆರೋಗ್ಯ ಇಲಾಖೆಯ-108 ಸಹಾಯವಾಣ ಸಂಖ್ಯೆಗಳು ನೂತನ ಸಹಾಯವಾಣ ಸಂಖ್ಯೆ 112 ರಲ್ಲಿ ವಿಲೀನವಾಗಿದೆ. 112 ತುರ್ತು ಸಹಾಯವಾಣಿ ನೆರವು ಪಡೆಯಲು ನೇರ ಕರೆ ಮಾಡಬಹುದು ಅಥವಾ ಗೂಗಲ್ ಪ್ಲೇ ಸ್ಟೋರ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ತಿಳಿಸಿದರು.