ದಾವಣಗೆರೆ: ನನ್ನ ಜನ್ಮದಿನದ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರೋಧವಿದೆ ಎಂಬ ಸುದ್ದಿ ವಿರೋಧ ಪಕ್ಷ ಸೃಷ್ಟಿಸಿರುವ ಗೊಂದಲ, ನನ್ನ ಹುಟ್ಟುಹಬ್ಬ ಡಿ.ಕೆ. ಶಿವಕುಮಾರ್ ಬೆಂಬಲವಿದೆ. ಕಾಂಗ್ರೆಸ್ನಲ್ಲಿ ನಾವೆಲ್ಲಾ ಒಂದಾಗಿದ್ದೇವೆ. ಯಾರ ನಡುವೆ ಬಿನ್ನಾಭಿಪ್ರಾಯವಿಲ್ಲ. ಮುಂದಿನ ಚುನಾವಣೆಯಲ್ಲಿನಾವೆಲ್ಲರೂ ಒಟ್ಟಾಗಿ ಶ್ರಮಿಸಿ ಕರ್ನಾಟಕದಲ್ಲಿ ಬಿಜೆಪಿ ಸರಕಾರವನ್ನು ತೊಲಗಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರ ಉದ್ದೇಶಿಸಿ ಮಾತನಾಡಿದ ಅವರು,ರಾಜ್ಯದಲ್ಲಿ ಈಗಿರುವ ಸರಕಾರ, ನನ್ನ ರಾಜಕೀಯ ಜೀವನದಲ್ಲಿ ಕಂಡಂತಹ ಭ್ರಷ್ಟ ಸರಕಾರ. ಲೂಟಿ ಮಾಡುವುದು, ಕೋಮುವಾದ, ಸಂವಿಧಾನ ಬದಲಾವಣೆ ಮಾಡುವುದರ ಬಗ್ಗೆ ಚಿಂತಿಸುತ್ತದೆ. ಬಡವರ ಬಗ್ಗೆ , ದಲಿತರ ಬಗ್ಗೆ ಚಿಂತಿಸುವುದಿಲ್ಲ. ಇಂದು ಕರ್ನಾಟಕ ಮಾತ್ರವಲ್ಲ ದೇಶದಲ್ಲಿ ಬಡವರು, ಶ್ರಮಿಕರು, ದಲಿತರು, ಮಹಿಳೆಯರು ಯುವಕರು ಆತಂಕದಿಂದ ಬದುಕುವಂತಾಗಿದೆ. ಹಾಗಾಗಿ ಕರ್ನಾಟಕದಲ್ಲಿ ಹಾಗೂ ಕೇಂದ್ರದಲ್ಲಿ ಕೋಮುವಾದಿ ಬಿಜೆಪಿ ಸರಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಸರಕಾರವನ್ನು ತರೋಣ ಎಂದರು.
ಇತ್ತೀಚೆಗೆ 2023ರ ವಿಧಾನ ಸಭೆ ಚುನಾವಣೆ ನನ್ನ ಕೊನೆಯ ಚುನಾವಣೆ ಎಂದು ಹೇಳಿಕೊಂಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗಿರುವವರೆಗೂ ರಾಜಕೀಯದಲ್ಲಿರುತ್ತೇನೆ ಎಂದು ತಿಳಿಸಿದ್ದಾರೆ.
44 ವರ್ಷಗಳ ಕಾಲ ನಾಡಿನ ಜನರ ಜೊತೆ ಇದ್ದೇನೆ. 1975 ಆಗಸ್ಟ್ನಲ್ಲಿ ನಾನು ವಕೀಲ ನಾಗಿ ನೋಂದಾಯಿಸಿಕೊಂಡಿದ್ದೆ. 1983ರಲ್ಲಿ ಶಾಸಕನಾದೆ, 1984ರಲ್ಲಿ ಮಂತ್ರಿಯಾದೆ. ಅಲ್ಲಿಂದ ಇಲ್ಲಿವರೆಗೆ ನಿರಂತರವಾಗಿ ರಾಜ್ಯದ ಜನರೊಂದಿಗೆ ಸಂಪರ್ಕದಲ್ಲಿದ್ದೇನೆ, ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ರಾಜ್ಯದ 224 ಕ್ಷೇತ್ರಗಳಿಂದ ನನ್ನ ಜನ್ಮದಿನದ ಆಚರಣೆಯ ಕಾರ್ಯಕ್ರಮಕ್ಕೆ ಬಂದಂತದ ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದ. ನಾನು ಶಾಸಕ , ಮಂತ್ರಿಯಾಗಿ, ಉಪಮುಖ್ಯ ಮಂತ್ರಿಯಾಗಿ , ಮುಖ್ಯಮಂತ್ರಿಯಾಗಿ ಜನರ ಸೇವೆ ಮಾಡಲು ಸಾಧ್ಯವಾಗಿದೆ ಎಂದರು.
ನಾನು ಎಲ್ಲಿಯವರೆಗೆ ದೈಹಿಕವಾಗಿ, ಮಾನಸಿಕ ಸದೃಡವಾಗಿರುತ್ತೇನೋ ಅಲ್ಲಿಯವರೆಗೆ ನಾನು ರಾಜಕೀಯದಲ್ಲಿ ಮುಂದುವರಿಯುತ್ತೇನೆ, ಜನರ ಸೇವೆ ಮಾಡುತ್ತೇನೆ ಎಂದು ಹೇಳುವ ಮೂಲಕ ಮುಂದಿನ ವಿಧಾನ ಸಭೆ ಚುನಾವಣೆ ತಮ್ಮ ಕೊನೆಯ ಚುನಾವಣೆಯಲ್ಲ ಎನ್ನವುದನ್ನು ಖಾತ್ರಿ ಪಡಿಸಿದ್ದಾರೆ.
ರಾಹುಲ್ ಗಾಂಧಿ ನಾನು ಯಾರು ಕಾರ್ಯಕ್ರಮಕ್ಕೆ ಹೋಗಿಲ್ಲ ಆದರೆ, ಸಿದ್ದರಾಮಯ್ಯನವರ ಮೇಲೆ ವಿಶೇಷ ಪ್ರೀತಿಯಿರುವುದರಿಂದ ಬಂದಿದ್ದೇನೆ ಎಂದಿದ್ದಾರೆ. ನಾನು ರಾಹುಲ್ ಗಾಂಧಿಗೆ ಕೋಟಿ ವಂದನೆಗಳನ್ನು ಅರ್ಪಿಸುತ್ತೇನೆ. ನಾನು ಕಾಂಗ್ರೆಸ್ ಸೇರಿದ ದಿನದಿಂದ ಇಲ್ಲಿಯವರೆಗೂ ನನ್ನ ಮೇಲೆ ಅಪಾರ ವಿಶ್ವಾಸವನ್ನು ತೋರಿದ್ದಾರೆ. ಬೇರೆ ಪಕ್ಷದಿಂದ ಬಂದವನಾದರೂ ನನಗೆ ಪಕ್ಷದಲ್ಲಿ ಜವಾಬ್ದಾರಿಗಳನ್ನು ನೀಡಿದ್ದಾರೆ. ನಾನು ಮುಖ್ಯಮಂತ್ರಿಯಾಗಲೂ ಕೂಡ ರಾಹುಲ್ ಗಾಂಧಿ ಮತ್ತು ಸೋನಿಯಾ ಕಾರಣಕರ್ತರು. ನಾನು ಮುಖ್ಯಮಂತ್ರಿಯಾದಾಗ 5 ವರ್ಷಗಳ ಕಾಲ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದರು.