ದಾವಣಗೆರೆ; ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮಳೆ ಅಬ್ಬರ ಜೋರಾಗಿದ್ದು, ಇಂದು ಕೂಡ ಮಳೆ ಅಬ್ಬರ ಮುಂದುವರೆದಿದೆ. ಇನ್ನು ಸತತ ಮಳೆಯಿಂದ ಜಿಲ್ಲೆಯಲ್ಲಿ ಬಿತ್ತನೆಯಾದ ಮೆಕ್ಕೆಜೋಳ ಬೆಳಗೆ ಅತೀ ತೇವಾಂಶದಿಂದ ಶೀತದ ವಾತಾವರಣ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಜು. 23ರಂದು 20.5 ಮಿ.ಮೀ ಮಳೆಯಾಗಿದ್ದು, 10 ಲಕ್ಷ ನಷ್ಟ ಉಂಟಾಗಿದೆ.
ಜಿಲ್ಲೆಯ ರೈತರ ಜೀವನಾಡಿ ಭದ್ರಾ ಜಲಾಶಯ ಪ್ರದೇಶದ ಸುತ್ತಮುತ್ತ ಭಾರೀ ಮಳೆಯಾಗುತ್ತಿದೆ. ಭದ್ರೆ ನದಿ ಉಕ್ಕಿ ಹರಿಯುತ್ತಿದೆ. ಡ್ಯಾಂಗೆ ಇಂದು (ಜು.24) 39,348ಕ್ಯೂಸೆಕ್ ಒಳ ಹರಿವಿತ್ತು. ಇಂದಿನ ನೀರಿನ ಮಟ್ಟ 149.5 ಅಡಿಯಷ್ಟಿದ್ದು, ಕಳೆದ ವರ್ಷ ಇದೇ ದಿನ 184.7 ಅಡಿಯಷ್ಟು ನೀರು ಸಂಗ್ರಹವಾಗಿತ್ತು.
ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈ ಕೆಳಕಂಡಂತಿದೆ. ಚನ್ನಗಿರಿ 25.8 ಮಿ.ಮೀ, ದಾವಣಗೆರೆ 16.4 ಮಿ.ಮೀ, ಹರಿಹರ 18.8 ಮಿ.ಮೀ, ಹೊನ್ನಾಳಿ ಮಳೆ 30.2 ಮಿ.ಮೀ, ಜಗಳೂರು ಮಳೆ 7.8 ಮಿ.ಮೀ, ನ್ಯಾಮತಿ ಮಳೆ 36.5 ಮಿ.ಮೀ ಮಳೆಯಾಗಿದೆ. ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 3 ಮನೆಗಳು ಭಾಗಶಃ ಹಾನಿಯಾಗಿದ್ದು ರೂ. 0.90 ಸಾವಿರ ಅಂದಾಜು ನಷ್ಟ ಸಂಭವಿಸಿದೆ. ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 7 ಮನೆಗಳು ಭಾಗಶಃ ಹಾನಿಯಾಗಿದ್ದು ರೂ.2.10 ಲಕ್ಷ ಅಂದಾಜು ನಷ್ಟ ಸಂಭವಿಸಿದೆ.
ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ 2 ಮನೆಗಳು ಭಾಗಶಃ ಹಾನಿಯಾಗಿದ್ದು ರೂ. 0.13 ಸಾವಿರ ಅಂದಾಜು ನಷ್ಟ ಸಂಭವಿಸಿದೆ. ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 2 ಮನೆಗಳು ಪೂರ್ಣ ಹಾನಿಯಾಗಿದ್ದು ರೂ. 3 ಲಕ್ಷ ಹಾಗೂ 2 ಮನೆಗಳು ಭಾಗಶ: ಹಾನಿಯಾಗಿದ್ದು ರೂ. 1 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ 1 ಮನೆ ಪೂರ್ಣ ಹಾನಿಯಾಗಿದ್ದು ರೂ. 1 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ.ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 4 ಮನೆಗಳು ಪೂರ್ಣ ಹಾನಿಯಾಗಿದ್ದು ರೂ. 2 ಲಕ್ಷ ಹಾಗೂ 1 ಮನೆ ಭಾಗಶ: ಹಾನಿಯಾಗಿದ್ದು ರೂ. 0.40 ಸಾವಿರ ಅಂದಾಜು ನಷ್ಟ ಸಂಭವಿಸಿದೆ.
ಜಿಲ್ಲೆಯಲ್ಲಿ ಒಟ್ಟಾರೆ 10 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



