ದಾವಣಗೆರೆ: ಇ-ಸ್ವತ್ತು ಮಾಡಿಕೊಡಲುಸಾವಿರ ಲಂಚ ಸ್ವೀಕರಿಸುವಾಗ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO) ಹಾಗೂ ಡಾಟಾ ಎಂಟ್ರಿ ಆಪರೇಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ಇಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಜಗಳೂರು ತಾಲೂಕಿನ ಕೆಚ್ಚೇನಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಸ್.ಎಂ. ನಂದಿಲಿಂಗೇಶ ಸಾರಂಗ ಮಠ (35) ಮತ್ತು ಡಾಟಾಎಂಟ್ರಿ ಆಪರೇಟರ್ ಅಜ್ಜಯ್ಯ (32) ಲೋಕಾಯುಕ್ತರ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದಾರೆ. ದಾವಣಗೆರೆ ನಿಟುವಳ್ಳಿಯಲ್ಲಿ ವಾಸವಿರುವ ಮೂಲತಃ ಜಗಳೂರು ತಾಲೂಕು ಕೆಳಗೋಟೆ ಗ್ರಾಮದ ಬಸವನಗೌಡ ಎಂಬುವರು ತಮ್ಮ ಗ್ರಾಮದಲ್ಲಿನ ಮನೆಯ ಖಾತೆಗೆ ಇ-ಸ್ವತ್ತು ಮಾಡಿಸಲು ಕೆಚ್ಚೇನಹಳ್ಳಿ ಗ್ರಾಮ ಪಂಚಾಯತ್ ಗೆ ಅರ್ಜಿ ಸಲ್ಲಿಸಿದ್ದರು. ಇ-ಖಾತೆ ಮಾಡಿಕೊಡಲು ಪಿಡಿಒ 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇಂದು (ಅ.27) ಹಣ ಪಡೆಯುವಾಗ ಈ ದಾಳಿ ನಡೆದಿದೆ.
ಅ.21ರಂದು ಬಸವನ ಗೌಡ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿ ಮೇರೆಗೆ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪೂರೆ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಕಚೇರಿಯಲ್ಲೇ ಬಸವನಗೌಡ ಅವರಿಂದ 10 ಸಾವಿರ ರೂಪಾಯಿ ಪಡೆಯುತ್ತಿದ್ದ ಎಸ್.ಎಂ. ನಂದಿಲಿಂಗೇಶ ಸಾರಂಗಮಠ ಮತ್ತು ಅಜ್ಜಯ್ಯನನ್ನು ಬಂಧಿಸಿದ್ದಾರೆ.



