ದಾವಣಗೆರೆ: ಕುರುಬ ಸಮುದಾಯಕ್ಕೆ ಎಸ್.ಟಿ ಮೀಸಲಾತಿಗೆ ಆಗ್ರಹಿಸಿ ಡಿ.15 ರಂದು ಕಾಗಿನೆಲೆಯಿಂದ ಬೆಂಗಳೂರಿನವರೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮಿಜಿಯವರ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಪಾದಯಾತ್ರೆ ಹಿನ್ನೆಲೆ ನಗರದ ಬೀರಲಿಂಗೇಶ್ವರ ಛತ್ರದಲ್ಲಿ ಡಿ.12 ರಂದು ಬೆಳಗ್ಗೆ 11 ಗಂಟೆಗೆ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಮುಖಂಡ ಬಿ.ಎಂ ಸತೀಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜ ಬಾಂಧವರಲ್ಲಿ ಜಾಗೃತಿ ಸಮಾವೇಶಗಳನ್ನು ರಾಜ್ಯಾದ್ಯಂತ ನಡೆಸಲಾಗುವುದು. ಜ.3ರಂದು ಗುಲ್ಬರ್ಗ, ಜ.4 ರಾಯಚೂರು, ಜ.7 ಶಿಕಾರಿಪುರದಲ್ಲಿ ಕಾಗಿನೆಲೆ ಮಠಾಧೀಶರು, ಎಸ್.ಟಿ ಹೋರಾಟ ಸಮಿತಿ ಹಾಗೂ ಪ್ರದೇಶ ಕುರುಬರ ಸಂಘದ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದ್ದು, ಲಕ್ಷಾಂತರ ಸಮುದಾಯದ ಬಂಧುಗಳು ಭಾಗವಹಿಸಲಿದ್ದಾರೆ.
ಚಿತ್ರದುರ್ಗ, ದಾವಣಗೆರೆ, ಹಾವೇರಿ ಈ ಮೂರು ಜಿಲ್ಲೆಗಳಿಂದ ಕೂಡಿ ದಾವಣಗೆರೆಯಲ್ಲಿ ಬೃಹತ್ ಜಾಗೃತಿ ಸಮಾವೇಶವನ್ನು ಏರ್ಪಡಿಸುವ ಉದ್ದೇಶದಿಂದ ಡಿ.12 ರಂದು ಸಭೆ ಹಮ್ಮಿಕೊಳ್ಳಲಾಗಿದೆ. ಈ ಸಭೆಗೆ ಕಾಗಿನೆಲೆ ಸ್ವಾಮೀಜಿಗಳು,ಹೊಸದುರ್ಗದ ಸ್ವಾಮೀಜಿ,ಸಚಿವ ಕೆ.ಎಸ್ ಈಶ್ವರಪ್ಪ, ಮಾಜಿ ಸಚಿವ ಹೆಚ್ . ವಿಶ್ವನಾಥ್,ಹೆಚ್.ಎಂ ರೇವಣ್ಣ,ಎಸ್.ಟಿ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಕೆ ಮುಕುಡಪ್ಪ ಭಾಗವಹಿಸಲಿದ್ದಾರೆ ಎಂದರು.
ಕುರುಬ ಸಮುದಾಯದ ಶೇ 40 ರಷ್ಟು ಮಂದಿ ಇಂದಿಗೂ ಗುಡ್ಡಗಾಡು ಪ್ರದೇಶದಲ್ಲಿ ಕುರಿಮೇಯಿಸುತ್ತಿದ್ದಾರೆ. ಕಂಬಳಿ ನೇಯುತತ್ತಿದ್ದು, ಶೈಕ್ಷಣಿಕ,ಆರ್ಥಿಕವಾಗಿ ಸಾಕಷ್ಟು ಹಿಂದುಳಿದಿದ್ದಾರೆ. ಈ ಸಮಾಜದ ಅಭಿವೃದ್ಧಿಗೆ ಎಸ್.ಟಿ ಮೀಸಲಾತಿ ನೀಡುವ ಅಗತ್ಯವಿದೆ ಅದಕ್ಕಾಗಿ ಪಾದಯಾತ್ರೆ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು ಎಂದರು.



